
ಏಷ್ಯಾಕಪ್ ಮುಕ್ತಾಯದ ಬಳಿಕ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವುದು ಖಚಿತವಾಗಿದೆ. ಅದು ಕೂಡ ನಾಯಕತ್ವದ ಬದಲಾವಣೆಯೊಂದಿಗೆ ಎಂಬುದು ವಿಶೇಷ. ಅಂದರೆ ಏಷ್ಯಾಕಪ್ 2025ರ ಟೂರ್ನಿಯ ಬಳಿಕ ಭಾರತ ಏಕದಿನ ತಂಡಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಅದರಂತೆ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಕಾಣಿಸಿಕೊಳ್ಳಲಿರುವುದು ಶ್ರೇಯಸ್ ಅಯ್ಯರ್.
ಬಿಸಿಸಿಐ ಮೂರು ಸ್ವರೂಪಗಳಿಗೆ 2 ನಾಯಕರುಗಳನ್ನು ಆಯ್ಕೆ ಮಾಡಲು ಚಿಂತಿಸಿದೆ. ಅದರಂತೆ ಟೆಸ್ಟ್ ಹಾಗೂ ಟಿ20 ತಂಡಗಳಿಗೆ ಒಬ್ಬ ನಾಯಕ ಮತ್ತು ಏಕದಿನ ತಂಡಕ್ಕೆ ಮತ್ತೊಬ್ಬ ಕ್ಯಾಪ್ಟನ್ನನ್ನು ಆಯ್ಕೆ ಮಾಡಲಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ, ರೋಹಿತ್ ಶರ್ಮಾ ಅವರನ್ನು ಶೀಘ್ರದಲ್ಲೇ ನಾಯಕತ್ವದಿಂದ ಕೆಳಗಿಳಿಸಲಿದ್ದಾರೆ. ಅಲ್ಲದೆ ಭಾರತ ಏಕದಿನ ತಂಡದ ನೂತನ ನಾಯಕನಾಗಿ ಶ್ರೇಯಸ್ ಅಯ್ಯರ್ಗೆ ಪಟ್ಟ ಕಟ್ಟಲಿದ್ದಾರೆ. ಇನ್ನು ಟೆಸ್ಟ್ ತಂಡದ ನಾಯಕನಾಗಿ ಶುಭ್ಮನ್ ಗಿಲ್ ಮುಂದುವರೆಯಲಿದ್ದಾರೆ.
ಅತ್ತ ಟಿ20 ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರನ್ನು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ವರೆಗೆ ಕ್ಯಾಪ್ಟನ್ ಆಗಿ ಮುಂದುವರೆಸಲಿದ್ದಾರೆ. ಈ ವಿಶ್ವಕಪ್ ಬೆನ್ನಲ್ಲೇ ಶುಭ್ಮನ್ ಗಿಲ್ಗೆ ಟಿ20 ತಂಡದ ಸಾರಥ್ಯ ನೀಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: IPL 2026: 6 ಆಟಗಾರರನ್ನು ಕೈ ಬಿಡಲಿದೆ RCB
ಏಷ್ಯಾಕಪ್ 2025 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ. ಇನ್ನು ಸೆಪ್ಟೆಂಬರ್ 14 ರಂದು ನಡೆಯಲಿರುವ ತನ್ನ ದ್ವಿತೀಯ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಇನ್ನು ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾದ ಕೊನೆಯ ಎದುರಾಳಿ ಒಮಾನ್. ಈ ಪಂದ್ಯವು ಸೆಪ್ಟೆಂಬರ್ 19 ರಂದು ನಡೆಯಲಿದೆ.