ಸೆಪ್ಟೆಂಬರ್ 8 ರಿಂದ ಆರಂಭವಾಗಿದ್ದ ದೇಶೀ ಟೂರ್ನಿ ದುಲೀಪ್ ಟ್ರೋಫಿಗೆ ಅದ್ದೂರಿ ತೆರೆಬಿದ್ದಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ನೇತೃತ್ವದ ಭಾರತ ಎ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯ ಕೊನೆಯ ಸುತ್ತಿನ ಪಂದ್ಯದಲ್ಲಿ ಭಾರತ ಸಿ ತಂಡವನ್ನು 132 ರನ್ಗಳಿಂದ ಮಣಿಸಿದ ಭಾರತ ಎ ತಂಡ ಟ್ರೋಫಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ವಾಸ್ತವವಾಗಿ ಪಾಯಿಂಟ್ ಪಟ್ಟಿಯಲ್ಲಿ ಅಧಿಕ ಅಂಕಗಳನ್ನು ಪಡೆಯುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಅದರಂತೆ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಡ್ರಾದೊಂದಿಗೆ 12 ಅಂಕಗಳನ್ನು ಸಂಪಾಧಿಸಿದ ಭಾರತ ಎ ತಂಡ ಅಗ್ರಸ್ಥಾನ ಪಡೆದುಕೊಂಡಿತು. ಇದರೊಂದಿಗೆ ಚಾಂಪಿಯನ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
4 ತಂಡಗಳ ನಡುವೆ ನಡೆದ ಈ ಟೂರ್ನಿಯಲ್ಲಿ ಅಂತಿಮವಾಗಿ ಅಧಿಕ ಅಂಕಗಳನ್ನು ಸಂಪಾಧಿಸುವ ತಂಡಕ್ಕೆ ಚಾಂಪಿಯನ್ ಪಟ್ಟ ನೀಡಲಾಗುತ್ತಿತ್ತು. ಅದರಂತೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಭಾರತ ಎ ತಂಡಕ್ಕೆ ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿತ್ತು. ಪಂದ್ಯದ ಕೊನೆಯ ದಿನ ಅದ್ಭುತ ಪ್ರದರ್ಶನ ನೀಡಿದ ತಂಡದ ಬೌಲರ್ಗಳು ಭಾರತ ಎ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂದ್ಯದ ಕೊನೆಯ ದಿನದ ಕೊನೆಯ ಸೆಷನ್ನಲ್ಲಿ ಭಾರತ ಎ ತಂಡದ ಗೆಲುವಿಗೆ ಕೊನೆಯ 9 ಓವರ್ಗಳಲ್ಲಿ 4 ವಿಕೆಟ್ಗಳ ಅಗತ್ಯವಿತ್ತು. ಇತ್ತ ಭಾರತ ಸಿ ಪರ ಸಾಯಿ ಸುದರ್ಶನ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ಗೆಲುವಿಗಾಗಿ ಹೋರಾಟ ನೀಡುತ್ತಿದ್ದರು. ಆದರೆ ಭಾರತ ಎ ಪರ ಮಾರಕ ದಾಳಿ ನಡೆಸಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ, ಶತಕ ಸಿಡಿಸಿದ್ದ ಸುದರ್ಶನ್ ಸೇರಿದಂತೆ 3 ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
What a match. What a fight. What a win! 👌👌
The celebrations say it all 🔥🔥#DuleepTrophy | @IDFCFIRSTBank
Follow the match ▶️: https://t.co/QkxvrUnnhz pic.twitter.com/QpYoq2qYB7
— BCCI Domestic (@BCCIdomestic) September 22, 2024
ಇತ್ತ ನಾಯಕ ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ರಜತ್ ಪಾಟಿದಾರ್ ಅವರಂತಹ ಸ್ಟಾರ್ ಬ್ಯಾಟ್ಸ್ಮನ್ಗಳಿದ್ದರೂ ಭಾರತ ಸಿ ತಂಡಕ್ಕೆ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದ ಭಾರತ ಸಿ ತಂಡ 9 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತು. ಉಳಿದಂತೆ ಭಾರತ ಬಿ ಮತ್ತು ಇಂಡಿಯಾ ಡಿ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ ಏಳು ಮತ್ತು ಆರು ಅಂಕಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡವು.
ಪಂದ್ಯದ ಕೊನೆಯ ದಿನ, ಭಾರತ ಎ ತಂಡ 8 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತಂಡದ ಪರ ರಿಯಾನ್ ಪರಾಗ್ ಅತ್ಯಧಿಕ 73 ರನ್ ಗಳಿಸಿದರೆ, ಶಾಶ್ವತ್ ರಾವತ್ ಕೂಡ 53 ರನ್ಗಳ ಕಾಣಿಕೆ ನೀಡಿದರು. ಇದಲ್ಲದೆ ಮೊದಲ ಇನಿಂಗ್ಸ್ನಲ್ಲಿ 63 ರನ್ಗಳ ಮುನ್ನಡೆ ಪಡೆದುಕೊಂಡಿದ್ದ ಭಾರತ ಎ ತಂಡ, ಅಂತಿಮವಾಗಿ ಭಾರತ ಸಿ ತಂಡಕ್ಕೆ 351 ರನ್ಗಳ ಗುರಿ ನೀಡಿತು.
That Winning Feeling! 🤗
India A captain Mayank Agarwal receives the coveted #DuleepTrophy 🏆
The celebrations begin 🎉@IDFCFIRSTBank
Scorecard ▶️: https://t.co/QkxvrUmPs1 pic.twitter.com/BH9H6lJa8w
— BCCI Domestic (@BCCIdomestic) September 22, 2024
ಈ ಬೃಹತ್ ಗುರಿ ಬೆನ್ನಟ್ಟಲು ಭಾರತ ಸಿ ತಂಡಕ್ಕೆ ಸುಮಾರು ಎರಡೂವರೆ ಸೆಷನ್ ಮಾತ್ರ ಉಳಿದಿತ್ತು. ಹೀಗಾಗಿ ಪಂದ್ಯವನ್ನು ಗೆಲ್ಲುವುದು ಕಷ್ಟಕರವಾದರೂ, ಡ್ರಾ ಮಾಡಿಕೊಳ್ಳಲ್ಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಭಾರತ ಸಿ ತಂಡಕ್ಕೆ ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಗುರಿ ಬೆನ್ನಟ್ಟಿದ ಭಾರತ ಸಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ಮೊದಲ ವಿಕೆಟ್ ಪತನದ ನಂತರ ಜೊತೆಯಾದ ನಾಯಕ ಗಾಯಕ್ವಾಡ್ (44) ಮತ್ತು ಸಾಯಿ ಸುದರ್ಶನ್ ಇಬ್ಬರೂ 22 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿ 77 ರನ್ಗಳ ಜೊತೆಯಾಟವನ್ನು ಮಾಡಿದರು. ಹೀಗಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಎಲ್ಲಾ ಅವಕಾಶವೂ ತಂಡಕ್ಕಿತ್ತು. ಅಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಭಾರತ ಸಿ ತಂಡ ಅಗ್ರಸ್ಥಾನದಲ್ಲಿದ್ದಿದ್ದರಿಂದ ಪಂದ್ಯ ಡ್ರಾ ಆಗಿದ್ದರೆ ಪ್ರಶಸ್ತಿ ಪಡೆಯುತ್ತಿತ್ತು.
ಇತ್ತ ಭಾರತ ಎ ತಂಡ ಪ್ರಶಸ್ತಿ ಗೆಲ್ಲಲು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲುವ ಅಗತ್ಯವಿತ್ತು. ಈ ವೇಳೆ ದಾಳಿಗಿಳಿದ ವೇಗಿ ಆಕಿಬ್ ಖಾನ್ ಗಾಯಕ್ವಾಡ್ ಅವರನ್ನು ಬಲಿಪಶು ಮಾಡಿದರು. ಇದಾದ ಬಳಿಕ ಪಾಟಿದಾರ್ (7), ಇಶಾನ್ ಕಿಶನ್ (17), ಅಭಿಷೇಕ್ ಪೊರೆಲ್ (0), ಪುಲ್ಕಿತ್ ನಾರಂಗ್ (6) ಅವರಂತಹ ಬ್ಯಾಟ್ಸ್ಮನ್ಗಳು ಕೂಡ ಒಬ್ಬೊಬ್ಬರಾಗಿ ಪೆವಿಲಿಯನ್ ಸೇರಿಕೊಂಡರು.
ಸತತ ವಿಕೆಟ್ಗಳ ಪತನದ ನಡುವೆಯೂ ಸಾಯಿ ಸುದರ್ಶನ್ ಏಕಾಂಗಿಯಾಗಿ ತಂಡದ ಪರ ಹೋರಾಟ ನಡೆಸಿದರು. ಅವರಿಗೆ ಮಾನವ್ ಸುತಾರ್ ಅವರ ಬೆಂಬಲವೂ ಸಿಕ್ಕಿತು. ಈ ವೇಳೆ ಸುದರ್ಶನ್ ಕೂಡ ಅಮೋಘ ಶತಕವನ್ನು ಬಾರಿಸಿದ್ದರು. ಅಂತಿಮವಾಗಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಭಾರತ ಸಿ ತಂಡ ಕೇವಲ 9 ಓವರ್ಗಳನ್ನು ಎದುರಿಸಬೇಕಾಗಿತ್ತು. ತಂಡದ ಕೈಯಲ್ಲಿ ಸುದರ್ಶನ್ ಸೇರಿದಂತೆ ಇನ್ನು 4 ವಿಕೆಟ್ಗಳಿದ್ದವು. ಆದರೆ ಈ ವೇಳೆ ದಾಳಿಗಿಳಿದ ಸ್ಪಿನ್ನರ್ ಶಮ್ಸ್ ಮುಲಾನಿ, ಸುತಾರ್ ಅವರನ್ನು ಔಟ್ ಮಾಡುವ ಮೂಲಕ ಜೊತೆಯಾಟವನ್ನು ಮುರಿದರು. ನಂತರದ ಓವರ್ನಲ್ಲಿಯೇ ವೇಗಿ ಪ್ರಸಿದ್ಧ್ ಕೃಷ್ಣ ಬಾಬಾ ಇಂದರ್ಜೀತ್ ಅವರ ವಿಕೆಟ್ ಪಡೆದರು. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಇಂದ್ರಜಿತ್ ಮಂಡಿರಜ್ಜು ಗಾಯದಿಂದಾಗಿ ಆರಂಭದಲ್ಲಿ ಬ್ಯಾಟಿಂಗ್ಗೆ ಬರಲಿಲ್ಲ. ಆದರೆ ಯಾವುದೇ ಆಯ್ಕೆಯಿಲ್ಲದಿದ್ದಾಗ, ಅವರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಲುವಾಗಿ ಕ್ರೀಸ್ಗೆ ಬಂದರಾದರೂ ಅವರ ಆಟ ಕೇವಲ 2 ಎಸೆತಗಳಿಗೆ ಅಂತ್ಯಗಕೊಂಡಿತು. ತಮ್ಮ ಮುಂದಿನ ಎರಡು ಓವರ್ಗಳಲ್ಲಿ ಸುದರ್ಶನ್ ಮತ್ತು ನಂತರ ಅನ್ಶುಲ್ ಕಾಂಬೋಜ್ ಅವರನ್ನು ಔಟ್ ಮಾಡಿದ ಪ್ರಸಿದ್ಧ್, ಇನ್ನು 3 ಓವರ್ಗಳು ಉಳಿದಿರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿ ಚಾಂಪಿಯನ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Sun, 22 September 24