RCB vs CSK: ಪ್ಲೇ ಆಫ್​ಗೇರಿದ ಖುಷಿ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ

faf du plessis post match presentation: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಸಂದರ್ಭ ಆರ್​ಸಿಬಿಯ ಆಟಗಾರರು ಕುಣಿದು ಕುಪ್ಪಳಿಸಿದರು. ನಾಯಕ ಫಾಫ್ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ್ದು ಏನು ಹೇಳಿದ್ದಾರೆ ನೋಡಿ.

RCB vs CSK: ಪ್ಲೇ ಆಫ್​ಗೇರಿದ ಖುಷಿ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
Faf Duplessis Post Match RCB vs CSK

Updated on: May 19, 2024 | 7:35 AM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಡು-ಆರ್-ಡೈ ಮ್ಯಾಚ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs CSK) ತಂಡ 27 ರನ್​ಗಳಿಂದ ಜಯ ಸಾಧಿಸುವ ಮೂಲಕ ಐಪಿಎಲ್ 2024ರ ಪ್ಲೇ ಆಫ್​ಗೆ ಪ್ರವೇಶ ಪಡೆದುಕೊಂಡಿದೆ. ಸಿಎಸ್​ಕೆ ಟೂರ್ನಿಯಿಂದ ಹೊರಬಿದ್ದಿದೆ. ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್, ಬೌಲಿಂಗ್​ನಲ್ಲೂ ಅಮೋಘ ಪ್ರದರ್ಶನ ತೋರಿದ ಆರ್​ಸಿಬಿ ಕೋಟ್ಯಾಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದರು. ಪ್ಲೇ ಆಫ್ ಪ್ರವೇಶಿಸಿದ ಸಂದರ್ಭ ಆರ್​ಸಿಬಿಯ ಆಟಗಾರರು ಕುಣಿದು ಕುಪ್ಪಳಿಸಿದರು. ನಾಯಕ ಫಾಫ್ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದು ಏನು ಹೇಳಿದ್ದಾರೆ ನೋಡಿ.

ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ”ವಾಟ್ ಎ ನೈಟ್. ನಂಬಲಾಗುತ್ತಿಲ್ಲ. ತವರಿನಲ್ಲಿ ಜಯ ಸಾಧಿಸಿ ಲೀಗ್ ಹಂತವನ್ನು ಮುಗಿಸಿರುವುದು ಖುಷಿ ತಂದಿದೆ. ಇದು ಟಿ20ಯಲ್ಲಿ ನಾನು ಆಡಿದ ಅತ್ಯಂತ ಕಠಿಣ ಪಿಚ್ ಎಂದು ಭಾವಿಸುತ್ತೇನೆ. ಮಳೆ ವಿರಾಮದಿಂದ ಹಿಂತಿರುಗಿದ ನಂತರ ನಾನು ಮತ್ತು ವಿರಾಟ್ 140-150 ರನ್​ಗಳ ಬಗ್ಗೆ ಮಾತನಾಡುತ್ತಿದ್ದೆವು. ಈ ಪಿಚ್​ನಲ್ಲಿ 200 ಗಳಿಸುವುದು ನಂಬಲಸಾಧ್ಯವಾಗಿತ್ತು. ಆದರೆ, ಕಳೆದ 6 ಪಂದ್ಯಗಳಲ್ಲಿ ನಮ್ಮ ಬ್ಯಾಟರ್‌ಗಳು ಉತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಿದ್ದಾರೆ. ನಾವು ಆರಂಭದಲ್ಲಿ ನಿಧಾನವಾಗಿದ್ದೆವು. ಅಂತಿಮವಾಗಿ ಕಠಿಣ ಟಾರ್ಗೆಟ್ ಬಂದಿದ್ದು ಖುಷಿ ನೀಡಿತು,” ಎಂದು ಹೇಳಿದ್ದಾರೆ.

ರಣರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!

”ಧೋನಿ ಆಡುತ್ತಿದ್ದಾಗ ನನಗೆ ನಾನೇ ಮಾತನಾಡಿಕೊಳ್ಳುತ್ತಿದ್ದೆ. ಎಂಎಸ್ ಈರೀತಿಯ ಪಂದ್ಯವನ್ನು ಅನೇಕ ಬಾರಿ ಆಡಿದ್ದಾರೆ, ಹಲವು ಬಾರಿ ಗೆಲ್ಲಿಸಿ ಕೊಟ್ಟಿದ್ದಾರೆ ಎಂದು. ಒದ್ದೆಯಾದ ಚೆಂಡಿನೊಂದಿಗೆ ನಾವು ಬೌಲಿಂಗ್ ಮಾಡಿದ ರೀತಿ ನಂಬಲಾಗದಂತಿತ್ತು. ನಾನು ಈ ಮ್ಯಾನ್ ಆಫ್ ದಿ ಮ್ಯಾಚ್ ಅನ್ನು ಯಶ್ ದಯಾಳ್ ಅವರಿಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್ ಮಾಡಿದ ರೀತಿ ಅದ್ಭುತ. ಇದಕ್ಕೆ ಅವರು ಅರ್ಹನಾಗಿರುತ್ತಾನೆ”.

ಕೊನೆಯ ಓವರ್‌ಗೆ ಮೊದಲು ನೀವು ದಯಾಳ್‌ಗೆ ಏನು ಹೇಳಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಫಾಫ್, ”ಈ ಪಿಚ್‌ನಲ್ಲಿ ಪೇಸ್ ಆಫ್ ಅತ್ಯುತ್ತಮ ಆಯ್ಕೆಯಾಗಿದೆ ಮತ್ತು ನಿಮ್ಮ ಕೌಶಲ್ಯಗಳನ್ನು ನಂಬಿ ಮತ್ತು ಆನಂದಿಸಿ, ಇದಕ್ಕಾಗಿ ನೀವು ತರಬೇತಿ ಪಡೆದಿದ್ದೀರಿ ಎಂದು ಹೇಳಿದೆ. ಆದರೆ, ಯಾರ್ಕರ್ ಮೊದಲ ಎಸೆತದಲ್ಲಿ ಕೆಲಸ ಮಾಡಲಿಲ್ಲ. ನಂತರ ನಂಬಲಾಗದಷ್ಟು ಚೆನ್ನಾಗಿ ಬೌಲಿಂಗ್ ಮಾಡಿದರು. ನಮಗೆ ಸದಾ ಪ್ರೋತ್ಸಾಹ ನೀಡಿದ ಪ್ರೇಕ್ಷಕರಿಗೆ ಧನ್ಯವಾದ ಹೇಳಲು ನಾವು ತಂಡವಾಗಿ ಗೌರವದ ಲ್ಯಾಪ್ ಅನ್ನು ಮಾಡುತ್ತೇವೆ. ನಾವು ಸತತವಾಗಿ 6 ಪಂದ್ಯಗಳನ್ನು ಗೆದ್ದಿದ್ದೇವೆ. ಐಪಿಎಲ್​ನಲ್ಲಿ ಮೊದಲ ಗುರಿಯು ನಾಕೌಟ್‌ಗೆ ಪ್ರವೇಶಿಸುವುದು ಮತ್ತು ನಾವು ಅದನ್ನು ಮಾಡಿದ್ದೇವೆ,” ಎಂಬುದು ಫಾಫ್ ಡುಪ್ಲೆಸಿಸ್ ಮಾತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ