IND vs ENG: ಸರಣಿ ಆರಂಭಕ್ಕೂ ಮುನ್ನವೇ ಗಿಲ್ – ಗಂಭೀರ್ ನಡುವೆ ಭಿನ್ನಾಭಿಪ್ರಾಯ?

India vs England Test Series: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಸರಣಿಯೊಂದಿಗೆ ಶುಭ್​ಮನ್ ಗಿಲ್ ಭಾರತ ಟೆಸ್ಟ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ.

IND vs ENG: ಸರಣಿ ಆರಂಭಕ್ಕೂ ಮುನ್ನವೇ ಗಿಲ್ - ಗಂಭೀರ್ ನಡುವೆ ಭಿನ್ನಾಭಿಪ್ರಾಯ?
Shubman Gill - Gautam Gambhir

Updated on: May 27, 2025 | 12:53 PM

ಭಾರತ ಟೆಸ್ಟ್ ತಂಡದ ನಾಯಕನಾಗಿ ಶುಭ್​ಮನ್ ಗಿಲ್ (Shubman Gill) ಇನ್ನೂ ಸಹ ಪಾದಾರ್ಪಣೆ ಮಾಡಿಲ್ಲ. ಅದಕ್ಕೂ ಮುಂಚೆಯೇ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ (Gautam Gambhir) ಹಾಗೂ ಗಿಲ್ ನಡುವೆ ಭಿನ್ನಾಭಿಪ್ರಾಯಗಳು ಮೂಡಿದೆ ಎಂದು ವರದಿಯಾಗಿದೆ. ಅದು ಕೂಡ ಯುವ ಎಡಗೈ ದಾಂಡಿಗ ಸಾಯಿ ಸುದರ್ಶನ್ ಅವರ ಆಯ್ಕೆ ವಿಚಾರದಲ್ಲಿ ಎಂಬುದು ವಿಶೇಷ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಹೆಸರಿಸಲಾಗಿದೆ. 18 ಸದಸ್ಯರ ಈ ತಂಡದಲ್ಲಿ ಯುವ ಆಟಗಾರ ಸಾಯಿ ಸುದರ್ಶನ್ ಕಾಣಿಸಿಕೊಂಡಿದ್ದಾರೆ. ಆದರೆ ಸಾಯಿಯ ಆಯ್ಕೆಗೆ ಟೀಮ್ ಇಂಡಿಯಾ ಕೋಚ್ ಗಂಭೀರ್ ಆಸಕ್ತಿ ತೋರಿರಲಿಲ್ಲ. ಆದರೆ ಅತ್ತ ಶುಭ್​ಮನ್ ಗಿಲ್​, ಸಾಯಿ ಸುದರ್ಶನ್ ಅವರ ಆಯ್ಕೆಯನ್ನು ಬಯಸಿದ್ದರು.

ಸಾಯಿ ಸುದರ್ಶನ್ ಅತ್ಯುತ್ತಮ ಬ್ಯಾಟರ್ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಅದು ಟಿ20 ಕ್ರಿಕೆಟ್ ಆಗಿರಲಿ ಅಥವಾ ದೀರ್ಘಾವಧಿ ಟೆಸ್ಟ್ ಪಂದ್ಯಗಳಾಗಿರಲಿ. ಜವಾಬ್ದಾರಿಯುತ ಬ್ಯಾಟಿಂಗ್​ನೊಂದಿಗೆ ಸಾಯಿ ಎಲ್ಲರ ಗಮನ ಸೆಳೆದಿದ್ದಾರೆ. ಇದಾಗ್ಯೂ ಸಾಯಿ ಸುದರ್ಶನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲು ಗಂಭೀರ್ ಆಸಕ್ತಿ ತೋರಿಸಿರಲಿಲ್ಲ.

ಆದರೆ ಸಾಯಿ ಸುದರ್ಶನ್ ತಂಡದಲ್ಲಿರಬೇಕೆಂದು ಶುಭ್​ಮನ್ ಗಿಲ್ ಬಯಸಿದ್ದರು. ಇದರಿಂದ ಗಿಲ್ ಹಾಗೂ ಗಂಭೀರ್ ನಡುವೆ ಭಿನ್ನಾಭಿಪ್ರಾಯಗಳು ತಲೆದೂರಿದ್ದವು. ಇದಾಗ್ಯೂ ಸಾಯಿ ಸುದರ್ಶನ್ ಪರ ಬ್ಯಾಟಿಂಗ್ ಮುಂದುವರೆಸಿದ ಗಿಲ್, ಅರ್ಧಗಂಟೆಯವರೆಗೆ ಚರ್ಚಿಸಿ ಗೌತಮ್ ಗಂಭೀರ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು ಎಂದು ಬಿಸಿಸಿಐ ಮೂಲವೊಂದು ಕ್ರಿಕ್‌ಬ್ಲಾಗರ್‌ಗೆ ತಿಳಿಸಿದೆ.

ಇತ್ತ ಶುಭ್​ಮನ್ ಗಿಲ್ ಹಾಗೂ ಆಯ್ಕೆ ಸಮಿತಿ ಸಾಯಿ ಸುದರ್ಶನ್ ಆಯ್ಕೆಗೆ ಹೆಚ್ಚಿನ ಒಲವು ತೋರಿದ್ದರೂ, ಗಂಭೀರ್ ಮಾತ್ರ ತಮ್ಮ ನಿಲುವು ಬದಲಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿಯೇ ಗಿಲ್ ಹಾಗೂ ಗಂಭೀರ್ ನಡುವೆ ಅರ್ಧಗಂಟೆಯವರೆಗೆ ಸಾಯಿ ಸುದರ್ಶನ್ ಆಯ್ಕೆ ವಿಚಾರದಲ್ಲಿ ಚರ್ಚೆ ನಡೆದಿದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.

ಅಂದಹಾಗೆ ಆಟಗಾರರ ಆಯ್ಕೆಯಲ್ಲಿ ಗಂಭೀರ್ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ವರದಿ ಹೊರಬಿದ್ದಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಏಕದಿನ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಗಂಭೀರ್ ಮತ್ತು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ನಡುವೆ ” ಬಿಸಿ ಚರ್ಚೆ ” ನಡೆದಿತ್ತು. ಅಂತಿಮವಾಗಿ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಶ್ರೇಯಸ್ ಅಯ್ಯರ್​ ಕಾಣಿಸಿಕೊಂಡಿಲ್ಲ. ದೇಶೀಯ ಅಂಗಳದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ಅಯ್ಯರ್ ಅವರನ್ನು ಯಾಕೆ ಆಯ್ಕೆ ಮಾಡಲಾಗಿಲ್ಲ ಎಂಬುದರ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ.

ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಗೌತಮ್ ಗಂಭೀರ್ ಹಾಗೂ ಶುಭ್​ಮನ್ ಗಿಲ್ ನಡುವೆ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಭಿನ್ನಾಭಿಪ್ರಾಯಗಳು ತಂಡದ ಆಯ್ಕೆಯೊಂದಿಗೆ ಕೊನೆಗೊಂಡಿದೆಯಾ ಅಥವಾ ಅದು ಇಂಗ್ಲೆಂಡ್ ಸರಣಿಯಲ್ಲಿ ಮುಂದುವರೆಯಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Digvesh rathi: 9.37 ಲಕ್ಷ ರೂ. ದಂಡ ಕಟ್ಟಿ, RCB ವಿರುದ್ಧ ಕಣಕ್ಕೆ..!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:

ಶುಭ್​ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್.