
ಮುಂಬೈ, ಮಾ.27: ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನ ಮುಂಬೈನ ವಾಂಖೆಡೆ ಸ್ಟೇಡಿಯಂನ ಮೈದಾನದ ಸಿಬ್ಬಂದಿಗೆ (Ground Staff) ಭರ್ಜರಿ ಉಡುಗೊರೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ (MCA) ಸುಮಾರು 10 ರಿಂದ 11 ಮೈದಾನದ ಸಿಬ್ಬಂದಿಗೆ ಹಾರ್ದಿಕ್ ತಲಾ 10 ಲಕ್ಷ ರೂ. ರೂಪಾಯಿಗಳ ಚೆಕ್ ನೀಡಿದ್ದಾರೆ.
2026ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಹಾರ್ದಿಕ್ ವಾಂಖೆಡೆಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಅವರು ಹಲವು ಬಾರಿ ತಡರಾತ್ರಿಯವರೆಗೆ ಅಭ್ಯಾಸ ನಡೆಸುತ್ತಿದ್ದರು. ಅಂತಹ ಸಮಯದಲ್ಲಿ ಮೈದಾನದ ಸಿಬ್ಬಂದಿ ಯಾವುದೇ ದೂರುಗಳಿಲ್ಲದೆ ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದರು.
ಆ ಸಮಯದಲ್ಲಿ ಹಾರ್ದಿಕ್, “ನಾನು ಇಲ್ಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಮರಳಿದಾಗ ನಿಮ್ಮ ಈ ಕಠಿಣ ಶ್ರಮಕ್ಕೆ ಖಂಡಿತವಾಗಿ ಪ್ರತಿಫಲ ನೀಡುತ್ತೇನೆ” ಎಂದು ಭರವಸೆ ನೀಡಿದ್ದರು. ಐಪಿಎಲ್ ತರಬೇತಿ ಶಿಬಿರದ ವೇಳೆ ಅವರು ಆ ಭರವಸೆಯನ್ನು ಈಡೇರಿಸಿದ್ದಾರೆ.ಮೈದಾನದ ಸಿಬ್ಬಂದಿಯೊಂದಿಗೆ ಹಾರ್ದಿಕ್ ಚೆಕ್ ಹಂಚಿಕೊಳ್ಳುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು “ದಿಲ್ದಾರ್ ಹಾರ್ದಿಕ್” ಎಂದು ಶ್ಲಾಘಿಸುತ್ತಿದ್ದಾರೆ. ವಿಶ್ವಕಪ್ ಅಭ್ಯಾಸದ ವೇಳೆ ಅವರು ತಡರಾತ್ರಿಯವರೆಗೂ ಬೆವರು ಹರಿಸುತ್ತಿದ್ದರು, ಆಗ ನಾವು ಅವರಿಗೆ ಸಾಥ್ ನೀಡಿದ್ದೆವು. ಆದರೆ ಐಪಿಎಲ್ ಸಮಯದಲ್ಲಿ ವಾಪಸ್ ಬಂದು ನಮಗೆ ಇಷ್ಟು ದೊಡ್ಡ ಮೊತ್ತದ ಚೆಕ್ ನೀಡುತ್ತಾರೆ ಎಂದು ನಾವು ಊಹಿಸಿರಲಿಲ್ಲ,” ಎಂದು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್ ಉದ್ಘಾಟನಾ ಪಂದ್ಯ ನೋಡಲು ಒಬ್ಬರೂ ಬರಲಿಲ್ಲ
ಈ ಹಿಂದೆಯೂ ಹಾರ್ದಿಕ್ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರು ತಮ್ಮ ಬಾಲ್ಯದ ಕೋಚ್ ಜಿತೇಂದ್ರ ಸಿಂಗ್ ಅವರಿಗೆ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 70 ರಿಂದ 80 ಲಕ್ಷ ರೂ. ಹಣಕಾಸಿನ ನೆರವು ನೀಡಿದ್ದಾರೆ. ಹಾರ್ದಿಕ್ 2016ರಲ್ಲೇ ತಮ್ಮ ಕೋಚ್ಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ (2024-25ರಲ್ಲಿ) ಕೃನಾಲ್ ಪಾಂಡ್ಯ ಕೂಡ ಅವರಿಗೆ ಮತ್ತೊಂದು ಕಾರು ಖರೀದಿಸಲು 19 ಲಕ್ಷ ರೂ. ನೀಡಿದ್ದಾರೆ. ಜಿತೇಂದ್ರ ಸಿಂಗ್ ಅವರ ಇಬ್ಬರು ಸಹೋದರಿಯರ ಮದುವೆಯ ಸಂಪೂರ್ಣ ವೆಚ್ಚವನ್ನು ಪಾಂಡ್ಯ ಸಹೋದರರೇ ಭರಿಸಿದ್ದಾರೆ. “ನಿಮ್ಮ ಸಹೋದರಿ ಎಂದರೆ ನನ್ನ ಸಹೋದರಿ ಇದ್ದಂತೆ” ಎಂದು ಹಾರ್ದಿಕ್ ಹೇಳಿದ್ದು ಅವರ ದೊಡ್ಡ ಗುಣವನ್ನು ತೋರಿಸುತ್ತದೆ.
ಇಲ್ಲಿದೆ ನೋಡಿ ಪೋಸ್ಟ್;
Hardik Pandya gave ₹10 lakh each to all the groundsmen at Wankhede Stadium because he had promised them they had helped him practice late at night during T20 World Cup. pic.twitter.com/KtGsLfgGcz
— Amar💫 (@KUNGFU_PANDYA_0) March 26, 2026
2021ರ ಕೋವಿಡ್-19 ಕಠಿಣ ಸಮಯದಲ್ಲೂ ಪಾಂಡ್ಯ ಕುಟುಂಬವು ದೇಶದ ಗ್ರಾಮೀಣ ಭಾಗಗಳಿಗೆ ನೆರವಾಗಲು 200 ಆಮ್ಲಜನಕ ಸಾಂದ್ರಕಗಳನ್ನು (Oxygen Concentrators) ದೇಣಿಗೆ ನೀಡಿದ್ದರು. ಗ್ರಾಮೀಣ ಪ್ರದೇಶದ ವೈದ್ಯಕೀಯ ಮೂಲಸೌಕರ್ಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದರು.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.