
IPL 2025: 17 ವರ್ಷಗಳು…ಒಂದೇ ಒಂದು ಕಪ್ ಗೆದ್ದಿಲ್ಲ…ಪ್ರತಿ ಸೀಸನ್ನಲ್ಲೂ ಲೆಕ್ಕಾಚಾರ…ಕೊನೆಗೆ ನೋವಿನ ವಿದಾಯ…ಇದಾಗ್ಯೂ ಅಂದಿಗೂ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿಗಳ ನಿಷ್ಠೆ ಮಾತ್ರ ಬದಲಾಗಿರಲಿಲ್ಲ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಆರ್ಸಿಬಿ ಅಭಿಮಾನಿಗಳಿಂದ ಭರಪೂರ ಬೆಂಬಲ ವ್ಯಕ್ತವಾಗಿತ್ತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಬಗ್ಗು ಬಡಿದ ರಾಯಲ್ ಪಡೆಗೆ ಅಭಿಮಾನಿಗಳು ಮಧ್ಯರಾತ್ರಿ ನೀಡಿದ ಸ್ವಾಗತ ನೋಡಿ ಖುದ್ದು ಆರ್ಸಿಬಿ ಆಟಗಾರರೇ ರೋಮಾಂಚನಗೊಂಡಿದ್ದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 52ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್ಗಳಲ್ಲಿ 211 ರನ್ಗಳಿಸಿ ನಿಯಂತ್ರಿಸಿ ಆರ್ಸಿಬಿ ತಂಡ 2 ರನ್ಗಳ ರೋಚಕ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಆರ್ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಷ್ಟೇ ಅಲ್ಲದೆ ಆರ್ಸಿಬಿ ಆಟಗಾರರು ಚಿನ್ನಸ್ವಾಮಿ ಸ್ಟೇಡಿಯಂನಿಂದ ಹೊರಬರುವ ತನಕ ಅಭಿಮಾನಿಗಳು ಕಾದು ನಿಂತಿದ್ದರು. ರಸ್ತೆಯುದ್ದಕ್ಕೂ ಕಾದು ನಿಂತಿದ್ದ ಫ್ಯಾನ್ಸ್ ಘೋಷವ್ಯಾಕ್ಯದೊಂದಿಗೆ ಆರ್ಸಿಬಿ ತಂಡದ ಬಸ್ ಅನ್ನು ಸ್ವಾಗತಿಸಿ ತಮ್ಮ ಅಭಿಮಾನ ಮರೆದಿದ್ದರು.
ಮಧ್ಯರಾತ್ರಿಯವರೆಗೆ ಕಾದು ನಿಂತು ತೋರಿದ ಈ ಅಭಿಮಾನಕ್ಕೆ ಆರ್ಸಿಬಿ ಆಟಗಾರರು ಪುಳಕಿತರಾಗಿದ್ದರು ಅಷ್ಟೇ ಅಲ್ಲದೆ ಈ ಕ್ರೇಝ್ ನೋಡಿ ರೋಮಾಂಚನಗೊಂಡ ಕೃನಾಲ್ ಪಾಂಡ್ಯ, ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದರು. ಈ ಶಪಥವನ್ನು ಇದೀಗ ಪಾಂಡ್ಯ ಈಡೇರಿಸಿದ್ದಾರೆ. ಅದು ಕೂಡ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ.
ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 190 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಒಂದು ಹಂತದವರೆಗೆ ಉತ್ತಮ ಸ್ಥಿತಿಯಲ್ಲಿಯೇ ಇತ್ತು. ಆದರೆ ಯಾವಾಗ ಕೃನಾಲ್ ಪಾಂಡ್ಯ ಬೌಲಿಂಗ್ ಶುರು ಮಾಡಿದರೋ, ಇಡೀ ಪಂದ್ಯದ ಗತಿ ಬದಲಾಯಿತು.
ಫಿಂಗರ್ ಸ್ಪಿನ್ ಮೂಲಕ ದಾಳಿ ಸಂಘಟಿಸಿದ ಕೃನಾಲ್ ಪಾಂಡ್ಯ 4 ಓವರ್ಗಳಲ್ಲಿ ನೀಡಿದ್ದು ಕೇವಲ 17 ರನ್ಗಳು ಮಾತ್ರ. ಇದರ ಜೊತೆಗೆ ಡೇಂಜರಸ್ ಜೋಶ್ ಇಂಗ್ಲಿಸ್ ಹಾಗೂ ಪಭ್ಸಿಮ್ರಾನ್ ಸಿಂಗ್ ಅವರ ವಿಕೆಟ್ಗಳನ್ನು ಸಹ ಪಡೆದರು. ಈ ಮೂಲಕ ಫೈನಲ್ ಪಂದ್ಯದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ: ದಾಖಲೆ ಭರ್ಜರಿ ದಾಖಲೆ… ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
ಈ ಮೂಲಕ ತಿಂಗಳ ಹಿಂದೆ ಆರ್ಸಿಬಿ ಅಭಿಮಾನಿಗಳ ಮುಂದೆ ಮಾಡಿದ ಶಪಥವನ್ನು ಕೃನಾಲ್ ಪಾಂಡ್ಯ ಈಡೇರಿಸಿದ್ದಾರೆ. ಅಷ್ಟೇ ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಸದ್ಯ ಟ್ರೋಫಿ ಗೆದ್ದಿರುವ ಆರ್ಸಿಬಿ ಪಡೆ ಇಂದು (ಜೂ.4) ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ 3.30 ರಿಂದ ರಾಯಲ್ ಪಡೆಯ ವಿಜಯಯಾತ್ರೆ ನಡೆಯಲಿದೆ. ಈ ವಿಜಯೋತ್ಸವದ ಯಾತ್ರೆಯು ಬೆಂಗಳೂರಿನ ವಿಧಾನಸೌಧದಿಂದ ಪ್ರಾರಂಭವಾಗಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮುಂದುವರೆಯಲಿದೆ.