IPL 2025: ನಮ್ಮ ಬೌಲರ್ಗಳು ಸಖತ್ತಾಗಿ ಬೌಲಿಂಗ್ ಮಾಡಿದ್ದಾರೆ: ರಜತ್ ಪಾಟಿದಾರ್ ಅಚ್ಚರಿಯ ಹೇಳಿಕೆ
Royal Challengers Bengaluru vs Gujarat Titans: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ RCB ತಂಡವು 20 ಓವರ್ಗಳಲ್ಲಿ 169 ರನ್ ಗಳಿಸಿದರೆ, ಈ ಗುರಿಯನ್ನು GT ತಂಡವು 17.5 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಜಿಟಿ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ಕೇವಲ 7 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ದೇವದತ್ ಪಡಿಕ್ಕಲ್ 4 ರನ್ಗಳಿಸಿ ಬೌಲ್ಡ್ ಆದರು. ಇನ್ನು ಫಿಲ್ ಸಾಲ್ಟ್ ಇನಿಂಗ್ಸ್ 14 ರನ್ಗಳಿಗೆ ಸೀಮಿತವಾಯಿತು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಲಿಯಾಮ್ ಲಿವಿಂಗ್ಸ್ಟೋನ್ 40 ಎಸೆತಗಳಲ್ಲಿ 54 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಆರ್ಸಿಬಿ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿತು.
170 ರನ್ಗಳ ಗುರಿ ಪಡೆದ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ 49 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದ್ದರು. ಇನ್ನು ಜೋಸ್ ಬಟ್ಲರ್ ಕೇವಲ 39 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 73 ರನ್ ಬಾರಿಸಿದರು. ಈ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು 17.5 ಓವರ್ಗಳಲ್ಲಿ 170 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಸೋಲಿನ ಬಳಿಕ ಮಾತನಾಡಿದ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್, ನಮ್ಮ ತಂಡವು ಉತ್ತಮವಾಗಿ ಬೌಲಿಂಗ್ ಮಾಡಿದೆ ಎಂದಿರುವುದು ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಈ ಪಂದ್ಯವನ್ನು ಗುಜರಾತ್ ಟೈಟಾನ್ಸ್ ತಂಡವು 17.5 ಓವರ್ಗಳಲ್ಲಿ ಮುಗಿಸಿದರೆ, ಇತ್ತ ಆರ್ಸಿಬಿ ಬೌಲರ್ಗಳು ಪಡೆದಿರುವುದು ಕೇವಲ 2 ವಿಕೆಟ್ ಮಾತ್ರ.
ಆದರೆ ಪಂದ್ಯದ ಬಳಿಕ ಮಾತನಾಡಿದ ರಜತ್ ಪಾಟಿದಾರ್, ನಮ್ಮ ಗುರಿ 200 ರನ್ ಆಗಿರಲಿಲ್ಲ. ಪವರ್ಪ್ಲೇನಲ್ಲಿ ವಿಕೆಟ್ ಕಳೆದುಕೊಂಡಿದ್ದ ಪರಿಣಾಮ ನಾವು 190 ರನ್ಗಳನ್ನು ಗುರಿಯಾಗಿಸಿಕೊಂಡಿದ್ದೆವು. ಆದರೆ ಆರಂಭಿಕ ವಿಕೆಟ್ಗಳನ್ನು ಕಳೆದುಕೊಂಡಿರುವುದು ನಮ್ಮೆಲ್ಲಾ ಯೋಜನೆಗಳನ್ನು ಹಾಳುಗೆಡವಿತು. ನಾವು ಪವರ್ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡಿರುವುದು ದೊಡ್ಡ ತಪ್ಪು ಎಂದು ಭಾವಿಸುತ್ತೇನೆ. ಏಕೆಂದರೆ ಆ ಬಳಿಕ ಪಿಚ್ ಬ್ಯಾಟಿಂಗ್ಗೆ ಸಹಕಾರಿಯಾಗಿತ್ತು. ಇದಾಗ್ಯೂ ನಮ್ಮ ಬೌಲರ್ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
170 ರನ್ಗಳ ಗುರಿ ನೀಡಿದ ಬಳಿಕ ನಮ್ಮ ಬೌಲರ್ಗಳು ಅದನ್ನು ರಕ್ಷಿಸಲು ಅದ್ಭುತವಾಗಿ ಪ್ರಯತ್ನಿಸಿದರು. ಈ ಚೇಸ್ ಅನ್ನು 18 ನೇ ಓವರ್ವರೆಗೆ ಕೊಂಡೊಯ್ದಿರುವುದೇ ಅದ್ಭುತ ಎಂದು ಪಾಟಿದಾರ್ ಆರ್ಸಿಬಿ ಬೌಲರ್ಗಳನ್ನು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ
ಆದರೆ ಆರ್ಸಿಬಿ ಪರ ವಿಕೆಟ್ ಪಡೆದಿರುವುದು ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಝಲ್ವುಡ್ ಮಾತ್ರ. ಅದು ಕೂಡ ಕೇವಲ 2 ವಿಕೆಟ್ಗಳು ಮಾತ್ರ. ಅತ್ತ ಗುಜರಾತ್ ಟೈಟಾನ್ಸ್ ತಂಡವು 13 ಎಸೆತಗಳನ್ನು ಬಾಕಿಯಿರಿಸಿ ನಿರಾಯಾಸವಾಗಿ ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಇದಾಗ್ಯೂ ರಜತ್ ಪಾಟಿದಾರ್ ಆರ್ಸಿಬಿ ಬೌಲರ್ಗಳನ್ನು ಹಾಡಿ ಹೊಗಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
Published On - 6:55 am, Thu, 3 April 25