
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಕೆಎಲ್ ರಾಹುಲ್ ತೀವ್ರ ಸ್ನಾಯು ಸೆಳೆತದ ಕಾರಣ ಅರ್ಧದಲ್ಲೇ ಮೈದಾನ ತೊರೆದಿದ್ದರು. ಇದೀಗ ರಾಹುಲ್ ಚೇತರಿಸಿಕೊಂಡಿದ್ದು, 2ನೇ ದಿನದಾಟದಲ್ಲಿ ಅವರು ಮತ್ತೆ ಕ್ರೀಸ್ಗೆ ಇಳಿದು ಬ್ಯಾಟಿಂಗ್ ಮಾಡಲು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸ್ಪಷ್ಟಪಡಿಸಿದ್ದಾರೆ.
ಪಂದ್ಯದ ಮೊದಲ ದಿನ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೆ.ಎಲ್. ರಾಹುಲ್ 77 ರನ್ (162 ಎಸೆತ, 9 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ತೀವ್ರ ಸ್ನಾಯು ಸೆಳೆತಕ್ಕೆ ಒಳಗಾದರು. ಟೀ ವಿರಾಮದ ಬಳಿಕ ಮೈದಾನಕ್ಕೆ ಇಳಿಯುವಾಗ ಅವರಿಗೆ ಬ್ಯಾಟ್ ಹಿಡಿಯಲು ಕೂಡ ಕಷ್ಟವಾಗುತ್ತಿತ್ತು.
ಗಾಲ್ ಮೈದಾನದ ವಿಪರೀತ ಹ್ಯುಮಿಡಿಟಿ ಮತ್ತು ಬಿಸಿಲಿನ ವಾತಾವರಣದಿಂದಾಗಿ ರಾಹುಲ್ ಅವರ ಕೈಗಳು, ಮಂಡಿ ಮತ್ತು ಹೆಮ್ಸ್ಟ್ರಿಂಗ್ ಭಾಗದಲ್ಲಿ ತೀವ್ರ ಸ್ನಾಯು ಸೆಳೆತ ಕಾಣಿಸಿಕೊಂಡಿತು. ಮೈದಾನದಲ್ಲೇ ಫಿಸಿಯೋ ಅವರಿಂದ ಚಿಕಿತ್ಸೆ ಪಡೆದರೂ ನೋವು ಕಡಿಮೆಯಾಗದ ಕಾರಣ, ಅವರು ಅನಿವಾರ್ಯವಾಗಿ ‘ರೆಟೈರ್ಡ್ ಹರ್ಟ್’ ಆಗಿ ಪೆವಿಲಿಯನ್ಗೆ ಮರಳಬೇಕಾಯಿತು. ಮೆಟ್ಟಿಲುಗಳನ್ನು ಹತ್ತಲು ಕೂಡ ಅವರು ಪರದಾಡುತ್ತಿದ್ದ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
ಮೊದಲ ದಿನದಾಟದ ಮುಕ್ತಾಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ರಾಹುಲ್ ಫಿಟ್ನೆಸ್ ಬಗ್ಗೆ ಮಹತ್ವದ ಮಾಹಿತಿ ನೀಡಿದರು.
“ಕೆಎಲ್ ರಾಹುಲ್ ನಿಜಕ್ಕೂ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರಿಗೆ ಕೇವಲ ಸ್ನಾಯು ಸೆಳೆತ ಉಂಟಾಗಿತ್ತು ಅಷ್ಟೇ. ಹ್ಯಾಮ್ಸ್ಟ್ರಿಂಗ್, ಕೈ ಮತ್ತು ತೋಳಿನ ಭಾಗದಲ್ಲಿ ಈ ಸೆಳೆತ ಇತ್ತು. ಆದರೆ ದಿನದ ಆಟ ಮುಗಿಯುವ ಹೊತ್ತಿಗೆ ಅವರು ಚೇತರಿಸಿಕೊಂಡಿದ್ದು, ಈಗ ಸಂಪೂರ್ಣ ಆರಾಮಾಗಿದ್ದಾರೆ. ಭಾನುವಾರ (2ನೇ ದಿನ) ಅವರು ಮತ್ತೆ ಬ್ಯಾಟಿಂಗ್ ಮಾಡಲು ಯಾವುದೇ ತೊಂದರೆಯಿಲ್ಲ” ಎಂದು ಕೋಟಕ್ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಗಾಯಗೊಂಡು ಹೊರನಡೆದರೂ, ಮತ್ತೊಬ್ಬ ಕರ್ನಾಟಕದ ತಾರೆ ದೇವದತ್ ಪಡಿಕ್ಕಲ್ ಶ್ರೀಲಂಕಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಪಡಿಕ್ಕಲ್ ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು.
ನಿವೃತ್ತರಾಗುವ ಮುನ್ನ ರಾಹುಲ್ ಮತ್ತು ಪಡಿಕ್ಕಲ್ ಜೋಡಿ ದ್ವಿತೀಯ ವಿಕೆಟ್ಗೆ 150 ರನ್ಗಳ ಅಮೋಘ ಜೊತೆಯಾಟವಾಡಿ ಭಾರತಕ್ಕೆ ಬಲಿಷ್ಠ ಅಡಿಪಾಯ ಹಾಕಿಕೊಟ್ಟಿತು. ಮೊದಲ ದಿನದ ಆಟದ ಮುಕ್ತಾಯಕ್ಕೆ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿ ಸುಸ್ಥಿತಿಯಲ್ಲಿದೆ. ದೇವದತ್ ಪಡಿಕ್ಕಲ್ (131*) ಮತ್ತು ರಿಷಭ್ ಪಂತ್ ಕ್ರೀಸ್ನಲ್ಲಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಎಫೆಕ್ಟ್: ‘ಇಂಜೆಕ್ಷನ್’ ಮೊರೆಹೋದರೇ ಟೀಮ್ ಇಂಡಿಯಾ ಆಟಗಾರರು!
ಐಸಿಸಿ ನಿಯಮಾವಳಿಗಳ ಪ್ರಕಾರ ಕೆಎಲ್ ರಾಹುಲ್ ‘ರೆಟೈರ್ಡ್ ಹರ್ಟ್’ ಆಗಿರುವುದರಿಂದ, ಕ್ರೀಸ್ನಲ್ಲಿರುವ ಬ್ಯಾಟರ್ಗಳ ವಿಕೆಟ್ ಪತನದ ನಂತರ ಅವರು ಮತ್ತೆ ಮೈದಾನಕ್ಕೆ ಬಂದು ತಮ್ಮ ಅಪೂರ್ಣ ಇನಿಂಗ್ಸ್ ಅನ್ನು ಮುಂದುವರಿಸಲಿದ್ದಾರೆ. ಹೀಗಾಗಿ ಕೆಎಲ್ಆರ್ ಕಡೆಯಿಂದಲೂ ಒಂದು ಭರ್ಜರಿ ಶತಕವನ್ನು ನಿರೀಕ್ಷಿಸಬಹುದು.