IPL 2025: ಐಪಿಎಲ್ ಆರಂಭಕ್ಕೂ ಮುನ್ನ ತಂಡದ ಶಕ್ತಿ ಏನೆಂಬುದನ್ನು ವಿವರಿಸಿದ ಹಾರ್ದಿಕ್ ಪಾಂಡ್ಯ

|

Updated on: Mar 17, 2025 | 5:41 PM

Mumbai Indians' IPL Strategy: ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ 2025ರಲ್ಲಿ ಬಲಿಷ್ಠ ಬೌಲಿಂಗ್‌ಗೆ ಆದ್ಯತೆ ನೀಡಿರುವುದಾಗಿ ಹೇಳಿದ್ದಾರೆ. ಕಳೆದ ಸೀಸನ್‌ನಲ್ಲಿ ಕೊನೆಯ ಸ್ಥಾನ ಪಡೆದ ಮುಂಬೈ ಈ ಬಾರಿ ಬೌಲಿಂಗ್‌ನಲ್ಲಿ ಸುಧಾರಣೆ ಮಾಡಿದೆ. ವಾಂಖೆಡೆ ಮೈದಾನದ ಸವಾಲುಗಳನ್ನು ಎದುರಿಸಲು ಅನುಭವಿ ಮತ್ತು ವೇಗದ ಬೌಲರ್‌ಗಳನ್ನು ತಂಡ ಸೇರಿಸಿಕೊಂಡಿದೆ. ತಮ್ಮ ತಂಡದ ಒಗ್ಗಟ್ಟು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸುವುದರ ಮೇಲೆ ಒತ್ತು ನೀಡುವುದಾಗಿ ಪಾಂಡ್ಯ ಹೇಳಿಕೊಂಡಿದ್ದಾರೆ.

IPL 2025: ಐಪಿಎಲ್ ಆರಂಭಕ್ಕೂ ಮುನ್ನ ತಂಡದ ಶಕ್ತಿ ಏನೆಂಬುದನ್ನು ವಿವರಿಸಿದ ಹಾರ್ದಿಕ್ ಪಾಂಡ್ಯ
Hardik Pandya
Follow us on

ಟೀಂ ಇಂಡಿಯಾದಲ್ಲಿ ಆಡುವ ಭಾಗಶಃ ಆಟಗಾರರನ್ನೇ ತಂಡದಲ್ಲಿ ಸೇರಿಸಿಕೊಂಡು ಐಪಿಎಲ್ (IPL 2025) ಅಖಾಡಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಎರಡನೇ ಬಾರಿಗೆ ನಾಯಕನಾಗಿ ಮುನ್ನಡೆಸಲು ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಸಜ್ಜಾಗಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಹಾರ್ದಿಕ್ ಮುಂಬೈ ತಂಡವನ್ನು ಮುನ್ನಡೆಸಲಿದ್ದು, ಮೇಲೆ ಹೇಳಿದಂತೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರಂತಹ ಸ್ಟಾರ್ ಆಟಗಾರರ ದಂಡೆ ಮುಂಬೈ ತಂಡದಲ್ಲಿದೆ. ಆದಾಗ್ಯೂ ಇಂತಹ ಆಟಗಾರರು ತಂಡದಲ್ಲಿ ಇದ್ದ ಹೊರತಾಗಿಯೂ ಕಳೆದ ಸೀಸನ್​ನಲ್ಲಿ ಮುಂಬೈ ತಂಡ ಕೊನೆಯ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಇಡೀ ಕಥೆಯೇ ಬದಲಾಗಿದ್ದು, ಲೀಗ್ ಆರಂಭಕ್ಕೂ ಮುನ್ನವೇ ತಮ್ಮ ತಂಡ ಎಷ್ಟು ಬಲಿಷ್ಠವಾಗಿದೆ ಮತ್ತು ಯಾವ ವಿಭಾಗದಲ್ಲಿ ಫ್ರಾಂಚೈಸಿ ಹೆಚ್ಚು ಕೆಲಸ ಮಾಡಿದೆ ಎಂಬುದನ್ನು ಪಾಂಡ್ಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮುಂಬೈ ತಂಡದ ಬಲ ಬೌಲಿಂಗ್

ಮುಂಬೈ ತಂಡದ ಕಾರ್ಯತಂತ್ರದ ಕುರಿತು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ‘ಈ ಆವೃತ್ತಿಯಲ್ಲಿ ತಂಡವು ಬೌಲಿಂಗ್‌ಗೆ ವಿಶೇಷ ಗಮನ ಹರಿಸಿದೆ. ನಾವು ಈಗ ಖರೀದಿಸಿರುವ ಆಟಗಾರರು ನಮ್ಮ ಯೋಜನೆಗಳ ಭಾಗವಾಗಿದ್ದರು. ಈ ವರ್ಷ ವಾಂಖೆಡೆ ಸವಾಲಿನ ಮೈದಾನವಾದ್ದರಿಂದ ಬಲಿಷ್ಠ ಬೌಲಿಂಗ್ ಘಟಕವನ್ನು ಸಿದ್ಧಪಡಿಸುವುದು ನಮ್ಮ ಗುರಿಯಾಗಿತ್ತು. ಐಪಿಎಲ್ ಸಮಯದಲ್ಲಿ ಮುಂಬೈನಲ್ಲಿ, ವಿಶೇಷವಾಗಿ ವಾಂಖೆಡೆಯಲ್ಲಿ ಆಡುವುದು ಕಷ್ಟಕರವಾಗಿರುತ್ತದೆ. ಏಕೆಂದರೆ ಇಲ್ಲಿನ ಪಿಚ್ ಬ್ಯಾಟರ್​ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ನಮಗೆ ಅನುಭವ, ವೇಗ ಮತ್ತು ಸ್ವಿಂಗ್ ಮತ್ತು ಬೌನ್ಸರ್ ಎಸೆಯುವ ಸಾಮರ್ಥ್ಯವಿರುವ ಬೌಲರ್‌ಗಳು ಬೇಕಾಗಿದ್ದರು.

ಅದರಂತೆಯೇ ಈ ಬಾರಿ ನಾವು ಅನುಭವಿ ತಂಡವನ್ನು ಸಿದ್ಧಪಡಿಸಿದ್ದೇವೆ. ಉನ್ನತ ಮಟ್ಟದಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ ಆಟಗಾರರು ತಂಡದ ಭಾಗವಾಗಿದ್ದಾರೆ. ಈಗ ನಾವು ಒಂದು ತಂಡವಾಗಿ ಒಂದಾಗುವುದು ಮತ್ತು ಮೈದಾನದಲ್ಲಿ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಮುಖ್ಯವಾಗಿದೆ. ನಾವು ಹಾಗೆ ಮಾಡಿದರೆ, ನಮಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಪಾಂಡ್ಯ ಹೇಳಿದ್ದಾರೆ.

ಇದನ್ನೂ ಓದಿ: IPL 2025: ರಹಾನೆಯನ್ನು ನಾಯಕನಾಗಿ ನೇಮಿಸಿ ಪೇಚಿಗೆ ಸಿಲುಕಿದ ಕೆಕೆಆರ್

ನಿಂದನೆಗಳೇ ಚಪ್ಪಾಳೆಯಾದವು

ವಾಸ್ತವವಾಗಿ ಈ ಬಾರಿಯ ಐಪಿಎಲ್ ಸೀಸನ್ ಹಾರ್ದಿಕ್ ಪಾಂಡ್ಯಗೆ ತುಂಬಾ ವಿಶೇಷವಾಗಲಿದೆ. ಏಕೆಂದರೆ, ಕಳೆದ ಆವೃತ್ತಿಯಲ್ಲಿ, ಐದು ಬಾರಿ ಐಪಿಎಲ್ ವಿಜೇತ ನಾಯಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದಾಗ ಹಾರ್ದಿಕ್, ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಂದ ಸಾಕಷ್ಟು ವಿರೋಧವನ್ನು ಎದುರಿಸಬೇಕಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಅವರನ್ನು ಅಪಹಾಸ್ಯ ಮಾಡಿದರು. ಆದರೆ ಎರಡು ತಿಂಗಳ ನಂತರ ಹಾರ್ದಿಕ್ ಭಾರತ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದಾಗ, ಅದೇ ಅಭಿಮಾನಿಗಳು ಅವರನ್ನು ಹೊತ್ತು ಮೆರೆಸಿದರು. ಈ ಬದಲಾವಣೆಯ ಬಗ್ಗೆ ಮಾತನಾಡಿದ ಹಾರ್ದಿಕ್, ‘ನಾನು ನನ್ನ ಕೆಲಸದಲ್ಲಿ ನಿರತನಾದೆ, ಇದೀಗ ಆ ಎಲ್ಲಾ ಕಠಿಣ ಪರಿಶ್ರಮವು ಫಲ ನೀಡಿದೆ. ನಾವು ವಿಶ್ವಕಪ್ ಗೆದ್ದ ಆ ಆರು ತಿಂಗಳ ಅವಧಿ ಮತ್ತು ನಾನು ವಿಶ್ವಕಪ್ ಟ್ರೋಫಿಯೊಂದಿಗೆ ಭಾರತಕ್ಕೆ ಹಿಂತಿರುಗಿದಾಗ, ನನಗೆ ದೊರೆತ ಪ್ರೀತಿ ಮತ್ತು ಬೆಂಬಲ – ಇದು ನನಗೆ ಸಂಪೂರ್ಣವಾಗಿ ಹೊಸ ಆರಂಭ ನೀಡಿತು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Mon, 17 March 25