ನಾವು ಕೇವಲ ಭಾಗವಹಿಸಲು ಇಲ್ಲಿಗೆ ಬಂದಿಲ್ಲ: ಇಶಾನ್ ಕಿಶನ್ ರಣಕಹಳೆ!

ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸೌತ್ ಝೋನ್ ವಿರುದ್ಧ ಟಾಸ್ ಗೆದ್ದ ಇಶಾನ್ ಕಿಶನ್ ನೇತೃತ್ವದ ಈಸ್ಟ್ ಝೋನ್ ತಂಡವು ಮೊದಲ ದಿನದಾಟದಲ್ಲೇ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಈಸ್ಟ್ ಝೋನ್ ತಂಡ ಮೊದಲ ದಿನವೇ 385 ರನ್​ ಕಲೆಹಾಕಿದೆ.

ನಾವು ಕೇವಲ ಭಾಗವಹಿಸಲು ಇಲ್ಲಿಗೆ ಬಂದಿಲ್ಲ: ಇಶಾನ್ ಕಿಶನ್ ರಣಕಹಳೆ!
ಇಶಾನ್ ಕಿಶನ್
Image Credit source: Murali Kumar K

Updated on: Sep 07, 2026 | 10:59 AM

“ನಾವು ಕೇವಲ ಭಾಗವಹಿಸಲು ಇಲ್ಲಿಗೆ ಬಂದಿಲ್ಲ, ಇತಿಹಾಸ ಬರೆಯಲು ಬಂದಿದ್ದೇವೆ!” – ದುಲೀಪ್ ಟ್ರೋಫಿ ಫೈನಲ್ ಪಂದ್ಯಕ್ಕೂ ಮುನ್ನ ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಮೊಳಗಿಸಿದ ಈ ರಣಕಹಳೆ, ಕೇವಲ ಮಾತಾಗಿ ಉಳಿಯಲಿಲ್ಲ. ಅದನ್ನು ಅವರು ಕೃತಿಯಲ್ಲೂ ಜಾರಿಗೆ ತಂದಿದ್ದಾರೆ. ಅದೂ ಸಹ ಮೊದಲ ದಿನದಾಟದಲ್ಲೇ ಭರ್ಜರಿ ಶತಕ ಸಿಡಿಸುವ ಮೂಲಕ! ಕಿಶನ್ ಅವರ ಈ ಸ್ಫೋಟಕ ಶತಕದ ನೆರವಿನಿಂದ ಈಸ್ಟ್ ಝೋನ್ ತಂಡವು ಮೊದಲ ದಿನವೇ ಸೌತ್ ಝೋನ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.

ಗೆಲುವೊಂದೇ ನಮ್ಮ ಗುರಿ: ಕಿಶನ್ ಕಹಳೆ

ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಹಡಲ್​ನಲ್ಲಿ ಮಾತನಾಡಿದ ಇಶಾನ್ ಕಿಶನ್, “ನಾವು ಕೇವಲ ಫೈನಲ್ ತಲುಪಿದ್ದೇವೆ ಎಂದು ತೃಪ್ತಿಪಟ್ಟುಕೊಳ್ಳಲು ಅಥವಾ ಪಂದ್ಯದಲ್ಲಿ ಕೇವಲ ಭಾಗವಹಿಸಲು ಇಲ್ಲಿಗೆ ಬಂದಿಲ್ಲ. ನಮ್ಮ ಏಕೈಕ ಗುರಿ ದುಲೀಪ್ ಟ್ರೋಫಿ ಗೆಲ್ಲುವುದು ಮಾತ್ರ” ಎಂದು ತೀಕ್ಷ್ಣವಾಗಿ ಎಚ್ಚರಿಸಿದ್ದರು. ನಾಯಕನ ಈ ಸ್ಫೂರ್ತಿದಾಯಕ ಮಾತುಗಳು ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಗೆಲುವಿನ ಹಸಿವನ್ನು ಹೆಚ್ಚಿಸಿತು.

ಮಾತಿನಂತೆ ಸದ್ದು ಮಾಡಿದ ಬ್ಯಾಟ್:

ಕೇವಲ ಭಾಷಣಕ್ಕೆ ಸೀಮಿತವಾಗದ ಇಶಾನ್ ಕಿಶನ್, ಮೈದಾನಕ್ಕಿಳಿದು ನಾಯಕನ ಆಟ ಆಡಿದರು. ಸೌತ್ ಝೋನ್ ಬೌಲರ್‌ಗಳನ್ನು ಮನಬಂದಂತೆ ಕಾಡಿದ ಕಿಶನ್, ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಅವರು ಅಜೇಯ 111 ರನ್ ಚಚ್ಚುವ ಮೂಲಕ ತಂಡಕ್ಕೆ ಬೃಹತ್ ಮೊತ್ತ ತಂದುಕೊಟ್ಟರು.

ಈಸ್ಟ್ ಝೋನ್ ಮೇಲುಗೈ:

ಇಶಾನ್ ಕಿಶನ್ ಅವರ ಆಕರ್ಷಕ ಶತಕದ ನೆರವಿನಿಂದ ಈಸ್ಟ್ ಝೋನ್ ತಂಡವು ಮೊದಲ ದಿನದಾಟದ ಅಂತ್ಯದ ವೇಳೆಗೆ 385/4 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಪಂದ್ಯದ ಆರಂಭದಲ್ಲೇ ಸೌತ್ ಝೋನ್ ತಂಡದ ಮೇಲೆ ಸಂಪೂರ್ಣ ಒತ್ತಡ ಹೇರುವಲ್ಲಿ ಇಶಾನ್ ಕಿಶನ್ ಪಡೆ ಯಶಸ್ವಿಯಾಗಿದೆ.

ಈಸ್ಟ್​ ಝೋನ್ (ಪ್ಲೇಯಿಂಗ್ XI): ಅಭಿಮನ್ಯು ಈಶ್ವರನ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರಾ, ಸುದೀಪ್ ಕುಮಾರ್ ಘರಾಮಿ, ಇಶಾನ್ ಕಿಶನ್ (ನಾಯಕ, ಶಿಖರ್ ಮೋಹನ್, ಅನುಕೂಲ್ ರಾಯ್, ಎಂಡಿ ಕೌನೈನ್ ಖುರೈಶಿ, ಮೊಹಮ್ಮದ್ ಶಮಿ, ಅಭಿಜಿತ್ ಕೆ ಸರ್ಕಾರ್, ಮುಖೇಶ್ ಕುಮಾರ್.

ಇದನ್ನೂ ಓದಿ: ಟಾಪ್-10 ಸರ್ವಶ್ರೇಷ್ಠ ವೇಗಿಗಳನ್ನು ಹೆಸರಿಸಿದ ಸ್ಟುವರ್ಟ್ ಬ್ರಾಡ್

ಸೌತ್ ಝೋನ್ (ಪ್ಲೇಯಿಂಗ್ XI): ರಿಕಿ ಭುಯಿ, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಶೇಕ್ ರಶೀದ್, ತಿಲಕ್ ವರ್ಮಾ (ನಾಯಕ), ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ತ್ರಿಪುರಾಣ ವಿಜಯ್, ಮೊಹಮ್ಮದ್ ಸಿರಾಜ್, ಚಾಮ ವಿ ಮಿಲಿಂದ್, ಎಂಡಿ ನಿಧೀಶ್.

 

Published On - 9:02 am, Mon, 7 September 26

Loading...
Unable to load recommendations.
Follow Us