
ಟೀಂ ಇಂಡಿಯಾ (Team India) ಯುವ ಬ್ಯಾಟರ್ ರಿಂಕು ಸಿಂಗ್ (Rinku Singh) ತಂದೆ ಖಾನ್ಚಂದ್ ಸಿಂಗ್ ಶುಕ್ರವಾರ ನಿಧನರಾದರು. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತಲ್ಲದೆ, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ನಿರಂತರ ಡಯಾಲಿಸಿಸ್ ಮಾಡಲಾಗುತ್ತಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ರಿಂಕು ಸಿಂಗ್ ಅವರು ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಟೀಂ ಇಂಡಿಯಾದ ಭಾಗವಾಗಿರುವಾಗಲೇ ಈ ದುಃಖಕರ ಘಟನೆ ಸಂಭವಿಸಿದೆ.
ಕೆಲವು ದಿನಗಳ ಹಿಂದೆ ರಿಂಕು ಸಿಂಗ್ ತಂಡದಲ್ಲಿದ್ದಾಗಲೇ ತಂದೆಯ ಆರೋಗ್ಯ ಹದಗೆಟ್ಟ ಸುದ್ದಿ ತಲುಪಿತ್ತು. ಬಳಿಕ ಅವರು ತುರ್ತಾಗಿ ಮನೆಗೆ ತೆರಳಿ ಮತ್ತೆ ತಂಡಕ್ಕೆ ಮರಳಿದ್ದರು. ಇದೀಗ ತಂದೆಯ ನಿಧನದ ಸುದ್ದಿ ತಿಳಿದ ತಕ್ಷಣ ತಂಡವನ್ನು ತೊರೆದು ಸ್ವಗ್ರಾಮ ಅಲೀಗಢ್ಗೆ ಪ್ರಯಾಣ ಬೆಳೆಸಿದ್ದಾರೆ.
ತಂದೆ ಖಾನ್ಚಂದ್ ಸಿಂಗ್ ಜತೆ ರಿಂಕು ಸಿಂಗ್ (ಚಿತ್ರ ಕೃಪೆ; ಇನ್ಸ್ಟಾಗ್ರಾಂ)
ಗುರುವಾರ ರಾತ್ರಿ ಚೆನ್ನೈಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪ್ರಮುಖ ಪಂದ್ಯದಲ್ಲಿ ರಿಂಕು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ತಂಡದ ಸಮತೋಲನದ ದೃಷ್ಟಿಯಿಂದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ರಿಂಕು ತಂಡದೊಂದಿಗೇ ಇದ್ದು, ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು.
ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಐದು ಪಂದ್ಯಗಳಲ್ಲಿ ಆಡಿದ್ದು 24 ರನ್ ಗಳಿಸಿದ್ದಾರೆ. ಫಿನಿಷರ್ ಪಾತ್ರದಲ್ಲಿ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಲಭ್ಯರಾಗುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಬಿಸಿಸಿಐ ಅಥವಾ ತಂಡದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಗೆದ್ದ ಭಾರತದ ಸೆಮಿಫೈನಲ್ ಕನಸು ಜೀವಂತ
ಟೀಂ ಇಂಡಿಯಾ ಮುಂದಿನ ಪಂದ್ಯ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಇದು ಭಾರತದ ಪಾಲಿಗೆ ನಿರ್ಣಾಯಕ ಪಂದ್ಯ ಆಗಿರಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:21 am, Fri, 27 February 26