Ravindra Jadeja: 4 ಪದಗಳ ಉತ್ತರ; ನಿವೃತ್ತಿ ವದಂತಿಯ ಬಗ್ಗೆ ಮೌನ ಮುರಿದ ರವೀಂದ್ರ ಜಡೇಜಾ

Ravindra Jadeja: ಚಾಂಪಿಯನ್ಸ್ ಟ್ರೋಫಿ ಮುಗಿದ ಬಳಿಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಈ ಮಾದರಿಯಿಂದ ನಿವೃತ್ತಿ ಹೊಂದುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿಯ ಬಗ್ಗೆ ಸ್ಪಷ್ಟನೆ ನೀಡಿದರೆ, ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ವದಂತಿಗಳಿಗೆ ತೆರೆ ಎಳೆದಿದ್ದಾರೆ.

Ravindra Jadeja: 4 ಪದಗಳ ಉತ್ತರ; ನಿವೃತ್ತಿ ವದಂತಿಯ ಬಗ್ಗೆ ಮೌನ ಮುರಿದ ರವೀಂದ್ರ ಜಡೇಜಾ
Ravindra Jadeja

Updated on: Mar 10, 2025 | 4:28 PM

2025 ರ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy 2025) ತನ್ನ ತೆಕ್ಕೆಗೆ ಹಾಕಿಕೊಂಡಿರುವ ಟೀಂ ಇಂಡಿಯಾ ಸಂಭ್ರಮಾಚರಣೆಯಲ್ಲಿ ಮುಳುಗೇಳುತ್ತಿದೆ. ಪಂದ್ಯ ಮುಗಿದು ಗಂಟೆಗಳು ಕಳೆದರೂ ಆ ಗೆಲುವಿನ ಪರಿಣಾಮ ಈಗಲೂ ಭಾರತದಲ್ಲಿ ಗೋಚರಿಸುತ್ತಿದೆ. ಭಾರತೀಯರು ರೋಹಿತ್ ಪಡೆಯ ಈ ಗೆಲುವಿಗೆ ಶುಭಾಶಯಗಳ ಮಳೆಗರೆಯುತ್ತಿದ್ದಾರೆ. ಅಭಿಮಾನಿಗಳ ಈ ಖುಷಿಗೆ ಟ್ರೋಫಿ ಗೆದ್ದಿರುವುದು ಒಂದು ಕಾರಣವಾಗಿದ್ದರೆ, ಮತ್ತೊಂದು ಕಾರಣ ಇಷ್ಟು ದಿನ ಹರಿದಾಡುತ್ತಿದ್ದ ನಿವೃತ್ತಿ ವದಂತಿಯ ಬಗ್ಗೆ ತಂಡದ ಹಲವು ಸ್ಟಾರ್ ಆಟಗಾರರು ಅಂತ್ಯ ಹಾಡಿದ್ದಾರೆ. ಫೈನಲ್ ಪಂದ್ಯ ಮುಗಿದ ನಂತರ ಮಾತನಾಡಿದ್ದ ನಾಯಕ ರೋಹಿತ್ ಶರ್ಮಾ ನಿವೃತ್ತಿಯ ಮಾತೇ ಇಲ್ಲ ಎಂದಿದ್ದರು. ಇದೀಗ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕೂಡ ನಿವೃತ್ತಿಯ ಬಗ್ಗೆ ಇರುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಅಪ್ಪಿಕೊಂಡಿದ್ದ ಕೊಹ್ಲಿ

ಮಾರ್ಚ್ 9 ರ ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಮಾಡಿದರು. ಈ ಸ್ಟಾರ್ ಆಲ್‌ರೌಂಡರ್ ತಮ್ಮ 10 ಓವರ್‌ಗಳ ಖೋಟಾದಲ್ಲಿ ಕೇವಲ 30 ರನ್‌ಗಳನ್ನು ನೀಡಿ ಟಾಮ್ ಲ್ಯಾಥಮ್ ಅವರ ವಿಕೆಟ್ ಪಡೆದರು. ಆದರೆ ಈ ಪಂದ್ಯದಲ್ಲಿ ಜಡೇಜಾ ತಮ್ಮ ಖೋಟಾದ ಕೊನೆಯ ಓವರ್ ಬೌಲ್ ಮಾಡಿದ ಬಳಿಕ ತಂಡದ ಸಹ ಆಟಗಾರ ವಿರಾಟ್ ಕೊಹ್ಲಿ ಜಡೇಜಾ ಅವರನ್ನು ಅಪ್ಪಿಕೊಂಡಿದ್ದರು. ಇದು ಅಭಿಮಾನಿಗಳಲ್ಲಿ ಈ ಪಂದ್ಯದ ನಂತರ ಜಡೇಜಾ ನಿವೃತ್ತಿ ಹೊಂದಬಹುದೆಂಬ ಅನುಮಾನವನ್ನು ಸೃಷ್ಟಿಸಿತ್ತು.

ಇದನ್ನೂ ಓದಿ
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ
ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಜಡೇಜಾ ನಿವೃತ್ತಿ?
ಐಸಿಸಿ ಟೂರ್ನಿಗಳಲ್ಲಿ 12 ವರ್ಷಗಳ ಬರ ನೀಗಿಸಿಕೊಂಡ ಜಡೇಜಾ

ಅನಗತ್ಯ ವದಂತಿಗಳು ಬೇಡ

ಆದರೆ ಈಗ ಸ್ವತಃ ಜಡೇಜಾ ಅವರೇ ಈ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. ಮಾರ್ಚ್ 10 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಒಂದು ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ಜಡೇಜಾ, ‘ಅನಗತ್ಯ ವದಂತಿಗಳು ಬೇಡ, ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಜಡೇಜಾ ಅವರ ಈ ಪೋಸ್ಟ್​ ಅನ್ನು ನೋಡಿದ ಅಭಿಮಾನಿಗಳು, ಜಡೇಜಾ ನಿವೃತ್ತಿಯ ವದಂತಿಯ ಬಗ್ಗೆಯೇ ಈ ಪೋಸ್ಟ್ ಬರೆದಿದ್ದಾರೆ ಎಂದು ಹೇಳ ತೊಡಗಿದ್ದಾರೆ. ಹಾಗೆಯೇ ತಮ್ಮ ನೆಚ್ಚಿನ ಆಟಗಾರ ನಿವೃತ್ತಿ ಹೊಂದುತ್ತಿಲ್ಲ ಎಂಬ ವಿಷಯ ತಿಳಿದ ಬಳಿಕ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: IND vs NZ: ಫೈನಲ್ ಪಂದ್ಯದ ಬಳಿಕ ರವೀಂದ್ರ ಜಡೇಜಾ ನಿವೃತ್ತಿ? ಕೊಹ್ಲಿ ಅಪ್ಪುಗೆಯ ಹಿಂದಿನ ಮರ್ಮವೇನು?

ರೋಹಿತ್ ಹೇಳಿದ್ಧೇನು?

ಅಂದಹಾಗೆ, ಜಡೇಜಾ ಮಾತ್ರವಲ್ಲ, ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ ನಾಯಕ ರೋಹಿತ್ ಶರ್ಮಾ ಕೂಡ ಈ ಪ್ರಶಸ್ತಿ ಪಂದ್ಯದ ನಂತರ ಈ ಸ್ವರೂಪದಿಂದ ನಿವೃತ್ತರಾಗುತ್ತಾರೆ ಎಂದು ಫೈನಲ್‌ವರೆಗೂ ಹೇಳಿಕೊಳ್ಳಲಾಗುತ್ತಿತ್ತು. ಆದರೆ ರೋಹಿತ್ ಈ ವದಂತಿಗಳಿಗೆ ಜಡೇಜಾಗಿಂತ ಸ್ಪಷ್ಟ ಮಾತುಗಳಲ್ಲಿ ಅಂತ್ಯ ಹಾಡಿದರು. ಈ ಸ್ವರೂಪದಿಂದ ನಾನು ನಿವೃತ್ತಿ ಹೊಂದುತ್ತಿಲ್ಲ ಮತ್ತು ಅಂತಹ ವದಂತಿಗಳನ್ನು ಮತ್ತಷ್ಟು ಹರಡಬಾರದು ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Mon, 10 March 25