
ಭಾರತ ಮತ್ತು ಪಾಕಿಸ್ತಾನ್ ನಡುವಣ ಸಂಘರ್ಷದ ನಡುವೆ ಸಖತ್ ಸುದ್ದಿಯಲ್ಲಿದ್ದದ್ದು ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi). ಭಾರತವನ್ನು ಹೀಯಾಳಿಸುವ ಮೂಲಕ, ವಿಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಅಫ್ರಿದಿ ಸುದ್ದಿ ಮಾಧ್ಯಮಗಳಲ್ಲಿ ರಾರಾಜಿಸಿದ್ದರು. ಹೀಗಾಗಿಯೇ ಶಾಹಿದ್ ಅಫ್ರಿದಿ ಸೇರಿದಂತೆ ಅನೇಕರ ಸೋಷಿಯಲ್ ಮೀಡಿಯಾ ಖಾತೆಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿತ್ತು.
ಇದೀಗ ಮತ್ತೆ ಶಾಹಿದ್ ಅಫ್ರಿದಿ ಮಾಧ್ಯಮ ಮುಂದೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಕೂಡ ಭಾರತವನ್ನು ತೆಗಳುವ ಕಾಯಕಕ್ಕೆ ಕೈ ಹಾಕಿದ್ದಾರೆ. ಆದರೆ ಈ ಬಾರಿ ಹೊಗಳುವಿಕೆಯೊಂದಿಗೆ ತೆಗಳಿದ್ದಾರೆ ಎಂಬುದಷ್ಟೇ ವ್ಯತ್ಯಾಸ.
ಪಾಕಿಸ್ತಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಶಾಹಿದ್ ಅಫ್ರಿದಿ, ಭಾರತವನ್ನು ತೀವ್ರವಾಗಿ ಟೀಕಿಸಿದರು. ಭಾರತ ದೇಶ ಪ್ರಗತಿ ಸಾಧಿಸುತ್ತಿದೆ. ಆ ದೇಶದ ಪ್ರಗತಿಯಿಂದ ನಾವು ತುಂಬಾ ಸಂತೋಷವಾಗಿದ್ದೇವೆ. ಅವರ ಕ್ರಿಕೆಟ್ ಪ್ರಗತಿಯಲ್ಲಿದೆ, ಅದು ಕೂಡ ಒಳ್ಳೆಯದೇ. ನಾವು ಮುಂದೆ ಸಾಗುತ್ತಿದ್ದಂತೆ.. ಆದರೆ ಅವರು ನಮ್ಮನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನ್ ಪ್ರಗತಿ ಸಾಧಿಸುವುದು ಭಾರತಕ್ಕೆ ಬೇಕಿಲ್ಲ. ಹೀಗಾಗಿ ಅವರು ನಮ್ಮ ಪ್ರಗತಿಯನ್ನು ತಡೆಯುತ್ತಿದ್ದಾರೆ. ನೆರೆಹೊರೆಯವರು ಇದನ್ನು ಮಾಡುತ್ತಾರೆಯೇ?. ತಮ್ಮ ದೇಶದ ಜನರೇ ತಮ್ಮ ದೇಶದ ದೊಡ್ಡ ಶತ್ರುಗಳು ಎಂಬುದನ್ನು ಅವರು ಮರೆತಿದ್ದಾರೆ. ಹೀಗಾಗಿ ಭಾರತ ಪಾಕಿಸ್ತಾನವನ್ನು ಮುಂದೆ ಸಾಗದಂತೆ ತಡೆಯುತ್ತಿದೆ ಎಂದು ಅಫ್ರಿದಿ ಆರೋಪಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನದಲ್ಲಿನ ಕ್ರಿಕೆಟ್ ಪ್ರಗತಿ ಬಗ್ಗೆ ಕೂಡ ಮಾತನಾಡಿದ ಶಾಹಿದ್ ಅಫ್ರಿದಿ, ಪಿಸಿಬಿ ಅಧ್ಯಕ್ಷರು ಬದಲಾದ ತಕ್ಷಣ, ಪಾಕಿಸ್ತಾನದ ಕೋಚ್ ಮತ್ತು ನಾಯಕ ಕೂಡ ಬದಲಾಗುತ್ತಾರೆ. ರಾಜಕೀಯದಿಂದಾಗಿ ಕ್ರಿಕೆಟ್ ಮತ್ತು ದೇಶ ಎರಡೂ ಹಾಳಾಗುತ್ತಿವೆ. ಹೀಗಾಗಿ ಪಾಕ್ ಕ್ರಿಕೆಟ್ ಅನ್ನು ರಾಜಕೀಯದಿಂದ ದೂರಯಿಡಬೇಕೆಂದು ಅಫ್ರಿದಿ ಅಗ್ರಹಿಸಿದ್ದಾರೆ.
ಶಾಹಿದ್ ಅಫ್ರಿದಿ ಭಾರತದ ವಿರುದ್ಧ ನಿರಂತರವಾಗಿ ವಿಷ ಕಾರುತ್ತಲೇ ಇರುತ್ತಾರೆ. ಇದಕ್ಕೆ ಒಂದು ಕಾರಣ ಅವರ ಸಹೋದರನನ್ನು ಭಾರತೀಯ ಸೈನಿಕರು ಹತ್ಯೆ ಮಾಡಿರುವುದು. ಶಾಹಿದ್ ಅಫ್ರಿದಿಯ ಸೋದರಸಂಬಂಧಿಯನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: IPL 2025: RCB ತಂಡಕ್ಕೆ ಕೆರಿಬಿಯನ್ ದೈತ್ಯ ಎಂಟ್ರಿ
2003 ರಲ್ಲಿ ಅನಂತ್ನಾಗ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಬಿಎಸ್ಎಫ್ ಯೋಧರು, ಶಾಹಿದ್ ಆಫ್ರಿದಿಯ ಸಹೋದರ ಶಕೀಬ್ನನ್ನು ಹತ್ಯೆಗೈದಿದೆ. ಶಕೀಬ್ ಹರ್ಕತ್-ಉಲ್-ಅನ್ಸಾರ್ನ ಉಗ್ರ ಸಂಘಟನೆ ಬೆಟಾಲಿಯನ್ ಕಮಾಂಡರ್ ಆಗಿದ್ದರು. ಹೀಗಾಗಿ ಭಾರತೀಯ ಸೈನಿಕರು ಶಕೀಬ್ನನ್ನು ಎನ್ಕೌಂಟರ್ ಮಾಡಿ ಬಿಸಾಕಿದ್ದರು. ಈ ವೇಳೆ ದೊರೆತ ದಾಖಲೆಗಳಲ್ಲಿ ಶಕೀಬ್ ಹಾಗೂ ಶಾಹಿದ್ ಅಫ್ರಿದಿ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು. ಆದರೆ ಇದನ್ನು ಅಫ್ರಿದಿ ನಿರಾಕರಿಸಿದ್ದರು.