Shubman Gill: ಪರವಾಗಿಲ್ಲ, ತಪ್ಪು ನನ್ನದೇ ಅಂದಿದ್ದಾರೆ..!

India vs Afghanistan, 1st ODI: ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 24.5 ಓವರ್​ಗಳಲ್ಲಿ 194 ರನ್​ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 22.5 ಓವರ್​ಗಳಲ್ಲಿ 195 ರನ್​ ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Shubman Gill: ಪರವಾಗಿಲ್ಲ, ತಪ್ಪು ನನ್ನದೇ ಅಂದಿದ್ದಾರೆ..!
Shubman Gill
Image Credit source: JioHotstar

Updated on: Jun 14, 2026 | 7:35 AM

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮಳೆಯಿಂದಾಗಿ ತಡವಾಗಿ ಆರಂಭಗೊಂಡು, ತಲಾ 25 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ರಹಮಾನುಲ್ಲಾ ಗುರ್ಬಾಝ್ (102) ಶತಕ ಸಿಡಿಸಿದರು. ಈ ಶತಕದ ನೆರವಿನೊಂದಿಗೆ ಅಫ್ಘಾನಿಸ್ತಾನ್ 24.5 ಓವರ್​ಗಳಲ್ಲಿ 194 ರನ್ ಕಲೆಹಾಕಿತು. ಈ ಗುರಿಯನ್ನು ಭಾರತ ತಂಡವು 22.5 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶುಭ್​​ಮನ್ ಗಿಲ್, “ಓವರ್‌ಗಳು ಕಡಿಮೆಯಾಗಿದ್ದರಿಂದ ಇದು ಒಂಥರಾ ಟಿ20 ಪಂದ್ಯದಂತೆಯೇ ಭಾಸವಾಯಿತು. ನಾವು ಉತ್ತಮ ಆರಂಭವನ್ನು ಪಡೆದಿದ್ದೆವು. ಆದರೆ ಅಫ್ಘಾನ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ ಅದ್ಭುತವಾಗಿ ಬ್ಯಾಟ್ ಬೀಸಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿದ್ದರು. ಆದರೆ, ನಮ್ಮ ಬೌಲರ್‌ಗಳು ಮಿಡಲ್ ಮತ್ತು ಡೆತ್ ಓವರ್‌ಗಳಲ್ಲಿ ಕಂಬ್ಯಾಕ್ ಮಾಡಿದ ರೀತಿ ಅಪ್ರತಿಮವಾಗಿತ್ತು” ಎಂದು ಶ್ಲಾಘಿಸಿದ್ದಾರೆ.

“ಇನ್ನು ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ ಗುರ್ನೂರ್ ಬ್ರಾರ್ ಹೊಸ ಚೆಂಡಿನಲ್ಲಿ ಅತ್ಯುತ್ತಮ ವೇಗ ಮತ್ತು ಸ್ವಿಂಗ್ ಪ್ರದರ್ಶಿಸಿದರು. ಅವರು ನಿರಂತರವಾಗಿ ಕರಾರುವಾಕ್ ಲೆಂಗ್ತ್​​ನಲ್ಲಿ ಬೌಲಿಂಗ್ ಮಾಡಿದ್ದು ಇಂಪ್ರೆಸಿವ್ ಆಗಿತ್ತು. ಇನ್ನು ಹರ್ಷ್ ದುಬೆ ತಮ್ಮ ಮೊದಲ ಓವರ್‌ನಲ್ಲಿ 16-17 ರನ್ ಬಿಟ್ಟುಕೊಟ್ಟರೂ ಧೃತಿಗೆಡಲಿಲ್ಲ. ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು, ಚೆಂಡನ್ನು ಲೂಪ್ ಮಾಡಿ ವಿಕೆಟ್ ಪಡೆದರು. ಏಕದಿನ ಕ್ರಿಕೆಟ್‌ನಲ್ಲಿ ಮಿಡಲ್ ಓವರ್‌ಗಳು ಅತ್ಯಂತ ಪ್ರಮುಖವಾಗಿದ್ದು, ರನ್ ರೇಟ್ ನಿಯಂತ್ರಿಸಿ ವಿಕೆಟ್ ಕೀಳುವುದು ತಂಡದ ಮುಖ್ಯ ತಂತ್ರವಾಗಿದೆ” ಎಂದು ಗಿಲ್ ವಿವರಿಸಿದರು.

ತಪ್ಪು ನನ್ನದೇ!

ಇದೇ ವೇಳೆ ರೋಹಿತ್ ಶರ್ಮಾ ಅವರ ರನೌಟ್ ಕುರಿತು ಮಾತನಾಡಿದ ಶುಭ್​ಮನ್ ಗಿಲ್, “ರೋಹಿತ್ ಶರ್ಮಾ ಡ್ರೆಸ್ಸಿಂಗ್ ರೂಮ್​ನಲ್ಲಿ ರಿಪ್ಲೇ ನೋಡಿದ್ದಾರೆ, ಪರವಾಗಿಲ್ಲ ಎಂದಿದ್ದಾರೆ. ಕಳೆದ ಬಾರಿ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಪಂದ್ಯದಲ್ಲೂ ಅವರು ಹೀಗೆಯೇ ರನ್-ಔಟ್ ಆಗಿದ್ದರು” ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಅಂದರೆ ಇಲ್ಲಿ ರೋಹಿತ್ ಶರ್ಮಾ ಪರವಾಗಿಲ್ಲ ಎನ್ನಲು ಮುಖ್ಯ ಕಾರಣ, ಅವರ ರನೌಟ್​ಗೆ ಅವರೇ ಕಾರಣವಾಗಿದ್ದು. ಏಕೆಂದರೆ ಶುಭ್​ಮನ್ ಗಿಲ್ ರನ್ ಬೇಡ ಎಂದು ಕರೆ ನೀಡಿದ್ದರೂ ಗಮನಿಸದೇ ರೋಹಿತ್ ಶರ್ಮಾ ಓಡಿ ಹೋಗಿದ್ದರು. ಆದರೆ ಅತ್ತ ಕಡೆಯಿಂದ ಗಿಲ್ ನಿರಾಕರಿಸುತ್ತಿರುವುದು ಗಮನಿಸಿ ಹಿಂತಿರುಗುವಷ್ಟರಲ್ಲಿ ರನೌಟ್ ಮಾಡಲಾಗಿತ್ತು. ಈ ರಿಪ್ಲೇ ಅನ್ನು ನೋಡಿದ ಬಳಿಕ ರೋಹಿತ್ ಶರ್ಮಾ ಎಲ್ಲಾ ಸರಿಯಿದೆ, ತಪ್ಪು ನನ್ನದೇ ಎಂದಿದ್ದಾರೆ ಎಂದು ಗಿಲ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್ ಬಗ್ಗೆ ಮಾತನಾಡಿದ ಗಿಲ್, “ನಾನು ಸ್ಲಿಪ್ ಕ್ಯಾಚಿಂಗ್‌ಗಾಗಿ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದೇನೆ. ಪಂದ್ಯಕ್ಕೂ ಮುನ್ನ ನನ್ನ ಸ್ನೇಹಿತನೊಬ್ಬ ‘ನೀನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಅದ್ಭುತ ಒನ್-ಹ್ಯಾಂಡೆಡ್ ಕ್ಯಾಚ್ ಹಿಡಿದಿಲ್ಲ’ ಎಂದು ರೇಗಿಸಿದ್ದ. ಈ ಪಂದ್ಯದಲ್ಲಿ ಅಂತಹ ಕ್ಯಾಚ್ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ” ಎಂದರು.

ಇದನ್ನೂ ಓದಿ: ತೂಫಾನ್ ಸೆಂಚುರಿ… ವೈಭವ್ ಸೂರ್ಯವಂಶಿ ತಮ್ಮನ ಆರ್ಭಟ ಶುರು!

ಒಟ್ಟಾರೆಯಾಗಿ ಹೇಳುವುದಾದರೆ, ಧರ್ಮಶಾಲಾದಲ್ಲಿ ನಡೆದ ಈ ಮುಖಾಮುಖಿ ಕೇವಲ ಒಂದು ಸರಣಿಯ ಆರಂಭವಾಗಿರಲಿಲ್ಲ. ಬದಲಿಗೆ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಗಳನ್ನು ಜಗತ್ತಿಗೆ ಪರಿಚಯಿಸಿದ ವೇದಿಕೆಯಾಗಿತ್ತು. ಮಳೆಯ ಅಡ್ಡಿಯ ನಡುವೆಯೂ ಟಿ20 ಶೈಲಿಯ ರೋಮಾಂಚನ ನೀಡಿದ ಈ ಪಂದ್ಯ, ನಾಯಕನಾಗಿ ಶುಭ್‌ಮನ್ ಗಿಲ್ ಅವರ ಪ್ರಬುದ್ಧತೆ ಮತ್ತು ಯುವ ಆಟಗಾರರ ಕದನ ಕೌಶಲಕ್ಕೆ ಸಾಕ್ಷಿಯಾಯಿತು. ಅಫ್ಘಾನ್ ಪಡೆಯ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಯುವ ಬೌಲರ್‌ಗಳು ನೀಡಿದ ತಿರುಗೇಟು ಭಾರತ ತಂಡದ ಬೆಂಚ್ ಸ್ಟ್ರೆಂತ್ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ಸಾರಿದೆ. ಇದೀಗ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಟೀಮ್ ಇಂಡಿಯಾ, ಇದೇ ಉತ್ಸಾಹದೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

 

Published On - 7:25 am, Sun, 14 June 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us