AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 4 ವಿಕೆಟ್ ಕಳೆದುಕೊಂಡ ಲಂಕಾ; ಕೊನೆಯ ದಿನ 288 ರನ್ ಗುರಿ

India vs Sri Lanka 1st Test Day 4 Report: ಭಾರತ-ಶ್ರೀಲಂಕಾ ಗಾಲೆ ಟೆಸ್ಟ್‌ನ 4ನೇ ದಿನದ ಆಟ ಮುಕ್ತಾಯಗೊಂಡಿದೆ. ಭಾರತ 193 ರನ್‌ಗಳಿಗೆ ಆಲೌಟ್ ಆದ ನಂತರ, ಶ್ರೀಲಂಕಾ 84 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಕೊನೆಯ ದಿನ ಲಂಕಾಕ್ಕೆ ಗೆಲ್ಲಲು 288 ರನ್‌ಗಳ ಗುರಿಯಿದೆ. ಮಾನವ್ ಸುತಾರ್ (2), ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದು ಭಾರತದ ಗೆಲುವಿನ ಆಸೆ ಜೀವಂತವಿರಿಸಿದ್ದಾರೆ. ಪಂದ್ಯದ ಅಂತಿಮ ದಿನ ತೀವ್ರ ಕುತೂಹಲ ಮೂಡಿಸಿದೆ.

IND vs SL: 4 ವಿಕೆಟ್ ಕಳೆದುಕೊಂಡ ಲಂಕಾ; ಕೊನೆಯ ದಿನ 288 ರನ್ ಗುರಿ
Ind Vs Sl
ಪೃಥ್ವಿಶಂಕರ
|

Updated on:Aug 18, 2026 | 7:06 PM

Share

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಅಂತ್ಯವಾಗಿದೆ. 4ನೇ ದಿನದ ಎರಡನೇ ಸೆಷನ್​ನಲ್ಲಿ ಟೀಂ ಇಂಡಿಯಾವನ್ನು 193 ರನ್​ಗಳಿಗೆ ಆಲೌಟ್ ಮಾಡಿದ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿತು. 4ನೇ ದಿನದಾಟದಂತ್ಯಕ್ಕೆ ಶ್ರೀಲಂಕಾ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 84 ರನ್ ಕಲೆಹಾಕಿದೆ. ಹೀಗಾಗಿ ಕೊನೆಯ ದಿನ ಶ್ರೀಲಂಕಾ 288 ರನ್​ಗಳ ಗುರಿ ಬೆನ್ನಟ್ಟಬೇಕಾಗಿದೆ. ಇತ್ತ ಟೀಂ ಇಂಡಿಯಾ ಪರ ಮಾನವ್ ಸುತಾರ್ 2 ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು. ರವೀಂದ್ರ ಜಡೇಜಾಗೂ ವಿಕೆಟ್ ಸಿಕ್ಕಿತ್ತಾದರೂ, ಅದು ನೋ ಬಾಲ್ ಆಗಿದ್ದ ಕಾರಣ ಜಡೇಜಾ ವಿಕೆಟ್ ವಂಚಿತರಾದರು.

4 ವಿಕೆಟ್ ಕಳೆದುಕೊಂಡ ಲಂಕಾ

ಎರಡನೇ ಇನ್ನಿಂಗ್ಸ್​ನಲ್ಲೂ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಉತ್ತಮ ಆರಂಭ ಒದಗಿಸಿಕೊಡುವುದಲ್ಲಿ ಆರಂಭಿಕರು ಎಡವಿದರು. ಆರಂಭಿಕ ನಿಶಾನ್ ಮದುಷ್ಕ 6 ರನ್ ಗಳಿಸಿ ಔಟಾದರೆ, ಲಹಿರು ಉಡಾರ ಅವರ ಇನ್ನಿಂಗ್ಸ್​ 16 ರನ್​ಗಳಿಗೆ ಅಂತ್ಯವಾಯಿತು. ಮೂರನೇ ಕ್ರಮಾಂಕದಲ್ಲಿ ಬಂದ ಪಸಿಂದು ಸೂರ್ಯಬಂಢಾರಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಕಮಿಂದು ಮೆಂಡಿಸ್ ಅವರ ಇನ್ನಿಂಗ್ಸ್ ಕೂಡ 2 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ಶ್ರೀಲಂಕಾ 47 ರನ್​ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ 5ನೇ ವಿಕೆಟ್​ಗೆ ಜೊತೆಯಾದ ಧನಂಜಯ ಡಿ ಸಿಲ್ವಾ 31 ರನ್ ಮತ್ತು ಸೋನಾಲ್ ದಿನುಶಾ 25 ರನ್ ಗಳಿಸಿ ಐದನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಭಾರತದ ಇನ್ನಿಂಗ್ಸ್ ಹೀಗಿತ್ತು

ಟೀಂ ಇಂಡಿಯಾದ ಎರಡನೇ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ, ಆರಂಭಿಕ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿಯೇ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಆದರೆ ಆ ಬಳಿಕ ಜೊತೆಯಾದ ರಾಹುಲ್ ಹಾಗೂ ಪಡಿಕ್ಕಲ್ ಎರಡನೇ ವಿಕೆಟ್​ಗೆ 65 ರನ್​ಗಳ ಜೊತೆಯಾಟ ನೀಡಿದರು. 35 ರನ್​ಗಳಿಗೆ ರಾಹುಲ್ ಔಟಾಗುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು. ನಾಯಕ ಶುಭ್​ಮನ್ ಗಿಲ್ ಕೇವಲ 8 ರನ್​ಗಳಿಗೆ ಔಟಾದರೆ, ದೇವದತ್ ಪಡಿಕ್ಕಲ್ 44 ರನ್​ಗಳಿಗೆ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು. ಪಡಿಕ್ಕಲ್ ವಿಕೆಟ್ ಬಳಿಕ ತಂಡ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ರಿಷಭ್ ಪಂತ್ ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಆದರೆ ಪಂತ್​ಗೆ ಬೇರೆ ಬ್ಯಾಟರ್​ಗಳಿಂದ ಬೆಂಬಲ ಸಿಗಲಿಲ್ಲ.

IND vs SL: ಟೆಸ್ಟ್ ಪಂದ್ಯದ ನಡುವೆ ಶ್ರೀಲಂಕಾ ತಂಡದಲ್ಲಿ ಬದಲಾವಣೆ

ಪಂತ್ ಹೊರತುಪಡಿಸಿ ಉಳಿದ ಯಾವುದೇ ಕೆಳಕ್ರಮಾಂಕದ ಬ್ಯಾಟ್ಸ್​ಮನ್​ಗಳು 10 ರನ್​ಗಳ ಗಡಿ ದಾಟಲಿಲ್ಲ. ಹೀಗಾಗಿ 111 ರನ್​ಗಳಿಗೆ ತನ್ನ 4 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ 193 ರನ್​ಗಳೊಳಗೆ ಉಳಿದ 6 ವಿಕೆಟ್​ಗಳನ್ನು ಕಳೆದುಕೊಂಡಿತು. ರಿಷಭ್ ಪಂತ್ 69 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 174 ರನ್​ ಆಗಿತ್ತು. ಆ ಹಂತದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಪಂತ್ ವಿಕೆಟ್ ಬಳಿಕ ಉಳಿದ 4 ವಿಕೆಟ್​ಗಳು 19 ರನ್​ಗಳಿಗೆ ಪತನಗೊಂಡವು. ಇದರಿಂದಾಗಿ ಟೀಂ ಇಂಡಿಯಾಕ್ಕೆ 200 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಇತ್ತ ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ, ಅಸಿತಾ ಫೆರ್ನಾಂಡೊ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಪ್ರಭಾತ್ ಜಯಸೂರ್ಯ ಮೂರು ವಿಕೆಟ್‌ಗಳನ್ನು ಪಡೆದರು. ಲಹಿರು ಕುಮಾರ ಎರಡು ಮತ್ತು ಕುಶಾರ ನುವಂತ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 18 August 26

Follow Us