AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಭಾರತದ ಪೆವಿಲಿಯನ್ ಪರೇಡ್; ಅಖಾಡಕ್ಕಿಳಿಯಲು ನಾನು ಸಿದ್ಧ ಎಂದ ಪೂಜಾರ

IND vs AUS: ಭಾರತ ತಂಡ ಆಸ್ಟ್ರೇಲಿಯಾದಲ್ಲಿ ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿದೆ. ಅನುಭವಿ ಆಟಗಾರರಾದ ರಹಾನೆ ಮತ್ತು ಪೂಜಾರ ಅವರ ಅನುಪಸ್ಥಿತಿಯು ತಂಡಕ್ಕೆ ತೀವ್ರ ಹೊಡೆತ ನೀಡಿದೆ. ಆಸೀಸ್ ವೇಗಿಗಳ ಎದುರು ಯುವ ಆಟಗಾರರು ಪರದಾಡುತ್ತಿದ್ದಾರೆ. ಈ ನಡುವೆ ವೀಕ್ಷಕ ವಿವರಣೆಗಾರನಾಗಿ ಪರ್ತ್​ ಟೆಸ್ಟ್​ನ ಭಾಗವಾಗಿರುವ ಪೂಜಾರ ನೀಡಿರುವ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗಿದೆ.

IND vs AUS: ಭಾರತದ ಪೆವಿಲಿಯನ್ ಪರೇಡ್; ಅಖಾಡಕ್ಕಿಳಿಯಲು ನಾನು ಸಿದ್ಧ ಎಂದ ಪೂಜಾರ
ಚೇತೇಶ್ವರ ಪೂಜಾರ
ಪೃಥ್ವಿಶಂಕರ
|

Updated on:Nov 22, 2024 | 12:16 PM

Share

ಅನುಭವಿಗಳಿಲ್ಲದೆ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ಟೀಂ ಇಂಡಿಯಾ ಅದರ ಭಾರವನ್ನು ಮೊದಲ ಟೆಸ್ಟ್ ಪಂದ್ಯದಲ್ಲೇ ಹೊರಬೇಕಾಗಿ ಬಂದಿದೆ. ಇದೇ ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ಆಡುತ್ತಿರುವ ಅನಾನುಭವಿ ಆಟಗಾರರು ಆಸೀಸ್ ವೇಗಿಗಳ ಮುಂದೆ ರನ್ ಗಳಿಸಲು ಪರದಾಡುತ್ತಿದ್ದಾರೆ. ಒಂದೆಡೆ ಆಸೀಸ್ ವೇಗಿಗಳು ತಮ್ಮ ಕರಾರುವಕ್ಕಾದ ದಾಳಿಯಿಂದ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೇಲುಬು ಮುರಿದರೆ, ಇನ್ನೊಂದೆಡೆ ತಂಡದ ಅನುಭವಿಗಳು ಕೂಡ ಸಂಕಷ್ಟದಲ್ಲಿ ಸಮಯದಲ್ಲಿ ಇನ್ನಿಂಗ್ಸ್ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಭಾರತದ ಟೆಸ್ಟ್ ಸ್ಪೆಷಲಿಸ್ಟ್​ಗಳೆಂದೇ ಪ್ರಸಿದ್ದರಾಗಿದ್ದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರ ಅನುಪಸ್ಥಿತಿ ಟೀಂ ಇಂಡಿಯಾ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ಈ ನಡುವೆ ಚೇತೇಶ್ವರ ಪೂಜಾರ ನೀಡಿರುವ ಹೇಳಿಕೆ ಇದೀಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ಬ್ಯಾಟಿಂಗ್ ಮಾಡಲು ಸದಾ ಸಿದ್ಧ

ವಾಸ್ತವವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೇತೇಶ್ವರ ಪೂಜಾರಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಆಟಗಾರನಾಗಿ ಅಲ್ಲದಿದ್ದರೂ, ವೀಕ್ಷಕ ವಿವರಣೆಗಾರನಾಗಿ ಈ ಟೆಸ್ಟ್​ನ ಭಾಗವಾಗಿರುವ ಪೂಜಾರ, ಹಿಂದಿ ಭಾಷೆಯ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ಔಟಾದ ಬಳಿಕ ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತಿದ್ದ ಪೂಜಾರ, ತಾನು ಬ್ಯಾಟಿಂಗ್ ಮಾಡಲು ಸದಾ ಸಿದ್ಧ ಎಂದು ಹೇಳುವ ಮೂಲಕ ಟೀಂ ಇಂಡಿಯಾದಲ್ಲಿ ಮತ್ತೆ ಆಡುವ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ ಪೂಜಾರ ಯಾವುದೇ ಕೆಟ್ಟ ಆಲೋಚನೆಯಿಂದ ಹೀಗೆ ಹೇಳಿಕೆ ನಿಡಲಿಲ್ಲ. ಬದಲಿಗೆ, ಯಶಸ್ವಿ ವಿಕೆಟ್ ಪತನದ ನಂತರ ಕಾಮೆಂಟರಿ ಬಾಕ್ಸ್​ನಲ್ಲಿ ಪೂಜಾರ ಜೊತೆಗಿದ್ದ ಜತಿನ್ ಸಪ್ರು, ಆಸ್ಟ್ರೇಲಿಯಾ ವಿರುದ್ಧ ಪೂಜಾರ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೂಜಾರ, ನಾನು ಯಾವಾಗ ಬೇಕಾದರೂ ಬ್ಯಾಟಿಂಗ್ ಮಾಡಲು ಸಿದ್ಧ ಎಂದು ಹೇಳಿದರು.

ಯಶಸ್ವಿ ವಿಕೆಟ್ ಬಗ್ಗೆ ಪೂಜಾರ ಹೇಳಿದ್ದೇನು?

ಇನ್ನು ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ವಿಶ್ಲೇಷಣೆ ಮಾಡಿದ ಪೂಜಾರ, ಯಶಸ್ವಿ ಸ್ವಲ್ಪ ಅವಸರ ಮಾಡಿದರು. ಯಶಸ್ವಿ ಡ್ರೈವ್ ಶಾಟ್ ಅನ್ನು ಚೆನ್ನಾಗಿ ಆಡುತ್ತಾರೆ. ಆದರೆ ಪಿಚ್‌ನಲ್ಲಿ ಬೌನ್ಸ್ ಇದ್ದ ಕಾರಣ, ಆ ಶಾಟ್ ಆಡಲು ಅವರು ಸ್ವಲ್ಪ ಕಾಯಬೇಕಿತ್ತು ಎಂದರು. ಪೂಜಾರ ಪ್ರಕಾರ, ಯಶಸ್ವಿ ಅವರ ಆತುರವೇ ಅವರ ವಿಕೆಟ್‌ ಪತನಕ್ಕೆ ಕಾರಣವಾಯಿತು. ಪಂದ್ಯದ ವಿಚಾರಕ್ಕೆ ಬರುವುದಾದರೆ… ಈ ಸುದ್ದಿ ಬರೆಯುವ ಹೊತ್ತಿಗೆ ಟೀಂ ಇಂಡಿಯಾ ಪ್ರಮುಖ 6 ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿದೆ. ತಂಡದ ಪರ ರಿಷಬ್ ಪಂತ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಕ್ರೀಸ್​ನಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Fri, 22 November 24