
ಭಾರತದ ಮಾಜಿ ಸ್ಟಾರ್ ಬ್ಯಾಟರ್ ವಿನೋದ್ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಕಳವಳಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಾಂಬ್ಳಿ ಅವರ ಮೆದುಳಿನಲ್ಲಿ ‘ಇನ್-ಆಪರೇಬಲ್’ ರಕ್ತದ ಹೆಪ್ಪುಗಟ್ಟುವಿಕೆ ಇರುವುದು ಪತ್ತೆಯಾಗಿದ್ದು, ಅವರು ಮೆದುಳಿನ ಪಾರ್ಶ್ವವಾಯುವಿಗೆ (Brain Stroke) ಒಳಗಾಗುವ ಅಪಾಯದಲ್ಲಿದ್ದಾರೆ ಎಂದು ಅವರ ಆಪ್ತ ಸ್ನೇಹಿತ ಮತ್ತು ಮಾಜಿ ಅಂಪೈರ್ ಮಾರ್ಕಸ್ ಕೌಟೊ ತಿಳಿಸಿದ್ದಾರೆ.
ಕಾಂಬ್ಳಿ ಅವರ ಮೆದುಳಿನ ಸೂಕ್ಷ್ಮ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ವೈದ್ಯರ ಪ್ರಕಾರ, ಇದಕ್ಕೆ ಶಸ್ತ್ರಚಿಕಿತ್ಸೆ ಮಾಡುವುದು ಅತ್ಯಂತ ಅಪಾಯಕಾರಿ. ಈ ಸ್ಥಿತಿ ಕಳೆದ 18 ತಿಂಗಳುಗಳಿಂದ ಮುಂದುವರಿದಿದೆ.
ನ್ಯೂರೋಸರ್ಜನ್ ಆದಿಲ್ ಚಾಗ್ಲಾ ಅವರು ಕಾಂಬ್ಳಿ ಅವರ ಸ್ಥಿತಿಯನ್ನು ಪರಿಶೀಲಿಸಿದ್ದು, ಮುಂದಿನ ಹಂತವು ಪಾರ್ಶ್ವವಾಯು ಆಗುವ ಸಾಧ್ಯತೆ ದಟ್ಟವಾಗಿದೆ ಎಂದು ಎಚ್ಚರಿಸಿದ್ದಾರೆ.
ವಿನೋದ್ ಕಾಂಬ್ಳಿ ಅವರ ಸ್ಮರಣಶಕ್ತಿ ತೀವ್ರವಾಗಿ ಬಾಧಿತವಾಗಿದೆ. ವಿಷಯಗಳನ್ನು ನೆನಪಿಸಿಕೊಳ್ಳಲು ಅವರು ಕಷ್ಟಪಡುತ್ತಿದ್ದಾರೆ ಮತ್ತು ಆಗಾಗ್ಗೆ ವಿಷಯಗಳನ್ನು ಮರೆತುಬಿಡುತ್ತಿದ್ದಾರೆ.
ಇದಾಗ್ಯೂ ಆರು ತಿಂಗಳ ಹಿಂದೆ ನಡೆಯಲು ಪೀಠೋಪಕರಣಗಳ ಸಹಾಯ ಬೇಕಿದ್ದ ಕಾಂಬ್ಳಿ, ಈಗ ವಾಕಿಂಗ್ ಸ್ಟಿಕ್ ನೆರವಿನಿಂದ ನಡೆಯುತ್ತಿದ್ದಾರೆ. ಇದು ಸ್ವಲ್ಪಮಟ್ಟದ ದೈಹಿಕ ಸುಧಾರಣೆಯನ್ನು ತೋರಿಸುತ್ತಿದೆ.
ಕಾಂಬ್ಳಿ ಅವರು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆಯಾದರೂ, ಧೂಮಪಾನವನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಇದು ಅವರ ಮೆದುಳಿನ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ವಿನೋದ್ ಕಾಂಬ್ಳಿ ಅವರ ಕಷ್ಟದ ಸಮಯದಲ್ಲಿ ಭಾರತೀಯ ಕ್ರಿಕೆಟ್ನ ದಿಗ್ಗಜರು ಬೆಂಬಲವಾಗಿ ನಿಂತಿದ್ದಾರೆ. ಈ ಹಿಂದೆ
ಸಚಿನ್ ತೆಂಡೂಲ್ಕರ್ ಹಾಗೂ ಕಪಿಲ್ ದೇವ್ ನೆರವಿನ ಹಸ್ತ ಚಾಚಿದ್ದರು. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಸುನಿಲ್ ಗವಾಸ್ಕರ್ ಕಳೆದ ವರ್ಷ ತಮ್ಮ CHAMPS ಫೌಂಡೇಶನ್ ಮೂಲಕ ಕಾಂಬ್ಳಿ ಅವರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದ್ದರು.
ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ಕಾಂಬ್ಳಿ ಅವರ ಜೀವಿತಾವಧಿಯವರೆಗೆ ಪ್ರತಿ ತಿಂಗಳು ₹30,000 ಸಹಾಯಧನ ನೀಡಲಾಗುವುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದರು.
ಅಷ್ಟೇ ಅಲ್ಲದೆ, ಕಾಂಬ್ಳಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ವಾರ್ಷಿಕವಾಗಿ ಹೆಚ್ಚುವರಿ ₹30,000 ನೀಡುವುದಾಗಿ ಗವಾಸ್ಕರ್ ತಿಳಿಸಿದ್ದರು.
ಅಷ್ಟೇ ಅಲ್ಲದೆ ವಿನೋದ್ ಕಾಂಬ್ಳಿ ಅವರ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸ್ನೇಹಿತರು ಒಂದು ವಾಟ್ಸಾಪ್ ಗ್ರೂಪ್ನ್ನು ರಚಿಸಿಕೊಂಡು ಹಣ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
1990ರ ದಶಕದಲ್ಲಿ ಸಚಿನ್ ತೆಂಡೂಲ್ಕರ್ ಜೊತೆಗೆ ಶಾಲಾ ಕ್ರಿಕೆಟ್ನಲ್ಲಿ ದಾಖಲೆಯ ಜೊತೆಯಾಟವಾಡಿ ಪ್ರಸಿದ್ಧರಾಗಿದ್ದ ವಿನೋದ್ ಕಾಂಬ್ಳಿ, ಭಾರತದ ಪರ 17 ಟೆಸ್ಟ್ ಮತ್ತು 104 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಟೆಸ್ಟ್ನಲ್ಲಿ 1084 ರನ್ ಕಲೆಹಾಕಿದರೆ, ಏಕದಿನ ಕ್ರಿಕೆಟ್ನಲ್ಲಿ 2477 ರನ್ಗಳಿಸಿದ್ದರು.
ಇದನ್ನೂ ಓದಿ: CSK ಅಂಪೈರ್ಗಳೊಂದಿಗೆ ಫಿಕ್ಸಿಂಗ್ ಮಾಡ್ತಿದ್ರು: ಗಂಭೀರ ಆರೋಪ
ಸದ್ಯ ಮುಂಬೈನಲ್ಲಿ ವಿನೋದ್ ಕಾಂಬ್ಳಿ ಚಿಕಿತ್ಸೆ ಪಡೆಯುತ್ತಿದ್ದು, ಅಭಿಮಾನಿಗಳು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.