
ಟೀಮ್ ಇಂಡಿಯಾದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿಯ ಅಬ್ಬರ ಏಕದಿನ ಕ್ರಿಕೆಟ್ನಲ್ಲೂ ಶುರುವಾಗಿದೆ. ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿದ ಸೂರ್ಯವಂಶಿ, ಪಂದ್ಯದ ನಂತರ ಬಿಸಿಸಿಐ ಆಯ್ಕೆಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ವೈಭವ್ ಸೂರ್ಯವಂಶಿಗೆ ಟಿ20 ಸ್ಪೆಷಲಿಸ್ಟ್ ಎಂದು ಮುದ್ರೆ ಹೊತ್ತಲಾಗಿತ್ತು. ಆದರೆ ಇದೀಗ ಏಕದಿನ ಪಂದ್ಯದಲ್ಲೂ ನಾನು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬಲ್ಲೇ ಎಂಬುದನ್ನು ವೈಭವ್ ನಿರೂಪಿಸಿದ್ದಾರೆ. ಅದು ಕೂಡ ಶ್ರೀಲಂಕಾ ಎ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ.
ಈ ಪಂದ್ಯದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ, “ಜನರಿಗೆ ಇದರ ಬಗ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ… ನಾನು 50 ಓವರ್ಗಳ (ಏಕದಿನ) ಕ್ರಿಕೆಟ್ ಅನ್ನು ತುಂಬಾ ಆಡಿದ್ದೇನೆ” ಎಂದು ಮಾರ್ಮಿಕವಾಗಿ ನೆನಪಿಸಿದ್ದಾರೆ.
ಈ ಮೂಲಕ ತಾನು ಕೇವಲ ಟಿ20 ಕ್ರಿಕೆಟ್ಗೆ ಮಾತ್ರವಲ್ಲ, ಹಿರಿಯರ ಏಕದಿನ ತಂಡಕ್ಕೂ ಸಿದ್ಧನಿದ್ದೇನೆ ಎಂಬ ನೇರ ಸಂದೇಶವನ್ನು ವೈಭವ್ ಸೂರ್ಯವಂಶಿ ಆಯ್ಕೆಗಾರರಿಗೆ ರವಾನಿಸಿದ್ದಾರೆ.
ಇದಾಗ್ಯೂ ವೈಭವ್ ಸೂರ್ಯವಂಶಿಯನ್ನು ಭಾರತ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಅಂದರೆ ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿರುವ ವೈಭವ್ ಅವರನ್ನು ಭಾರತ ಏಕದಿನ ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಭಾರತದ ಒನ್ಡೇ ಟೀಮ್ನಲ್ಲಿ ಸ್ಥಾನ ಪಡೆಯಲು ವೈಭವ್ ಸೂರ್ಯವಂಶಿ ಮತ್ತೊಂದಷ್ಟು ದಿನಗಳವರೆಗೆ ಕಾಯಬೇಕಾಗಿ ಬರಬಹುದು.
ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಲಂಕಾ ಬೌಲರ್ಗಳನ್ನು ಚೆಂಡಾಡಿದ್ದರು. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದರು.
ಇದನ್ನೂ ಓದಿ: ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್: 12 ಅಂಕಗಳು ಕಡಿತ..!
ವೈಭವ್ ಸೂರ್ಯವಂಶಿಯ ಈ ಪ್ರಚಂಡ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ 50 ಓವರ್ಗಳಲ್ಲಿ 377/9 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಎ ತಂಡ 311 ರನ್ಗಳಿಸಿ ಆಲೌಟ್ ಆಗಿದ್ದರು. ಈ ಮೂಲಕ ಟೀಮ್ ಇಂಡಿಯಾ 66 ರನ್ಗಳ ಭರ್ಜರಿ ಜಯ ಸಾಧಿಸಿದೆ.
Published On - 12:58 pm, Mon, 22 June 26