Vidhwath Kaverappa: ವಿಧ್ವತ್ ಕಾವೇರಪ್ಪ ಬೆಂಕಿ ಬೌಲಿಂಗ್: ಕೇವಲ 60 ರನ್​ಗೆ ಆಲೌಟ್

| Updated By: ಝಾಹಿರ್ ಯೂಸುಫ್

Updated on: Jul 25, 2023 | 3:32 PM

Deodhar Trophy 2023: ದಕ್ಷಿಣ ವಲಯ ಪರ ಕರಾರುವಾಕ್ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ ಕೇವಲ 17 ರನ್ 5 ವಿಕೆಟ್​ ಕಬಳಿಸಿ ಮಿಂಚಿದ್ದಾರೆ.

Vidhwath Kaverappa: ವಿಧ್ವತ್ ಕಾವೇರಪ್ಪ ಬೆಂಕಿ ಬೌಲಿಂಗ್: ಕೇವಲ 60 ರನ್​ಗೆ ಆಲೌಟ್
Vidhwath Kaverappa
Follow us on

Deodhar Trophy 2023: ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ಭರ್ಜರಿ ಜಯ ಸಾಧಿಸಿದೆ. ಉತ್ತರ ವಲಯ ವಿರುದ್ಧದ ಈ ಪಂದ್ಯದ ಗೆಲುವಿನ ರೂವಾರಿ ಕೊಡಗಿನ ಕುವರ ವಿಧ್ವತ್ ಕಾವೇರಪ್ಪ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ವಲಯ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ರೋಹನ್ ಕುನ್ನುಮ್ಮಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 117 ರನ್​ಗಳ ಜೊತೆಯಾಟವಾಡಿದ ಈ ಜೋಡಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
61 ಎಸೆತಗಳನ್ನು ಎದುರಿಸಿದ ರೋಹನ್ 3 ಭರ್ಜರಿ ಸಿಕ್ಸ್, 8 ಫೋರ್​ಗಳೊಂದಿಗೆ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನೊಂದೆಡೆ ಮಯಾಂಕ್ ಅಗರ್ವಾಲ್ 68 ಎಸೆತಗಳಲ್ಲಿ 64 ರನ್​ ಸಿಡಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಕೇವಲ 17 ರನ್​ಗಳಿಸಿ ನಿರಾಸೆ ಮೂಡಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಎನ್​. ಜಗದೀಸನ್ 66 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್​ ಹಾಗೂ 4 ಫೋರ್​ಗಳೊಂದಿಗೆ 72 ರನ್​ ಚಚ್ಚಿದರು. ಈ ಮೂಲಕ ತಂಡದ ಮೊತ್ತ 300 ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ 50 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ದಕ್ಷಿಣ ವಲಯ ತಂಡ 303 ರನ್ ಕಲೆಹಾಕಿತು.

304 ರನ್​ಗಳ ಕಠಿಣ ಗುರಿ ಪಡೆದ ಉತ್ತರ ವಲಯ ತಂಡಕ್ಕೆ ಆರಂಭದಲ್ಲೇ ಕನ್ನಡಿಗ ವಿಧ್ವತ್ ಕಾವೇರಪ್ಪ ಆಘಾತ ನೀಡಿದರು. ಮೂರನೇ ಓವರ್​ನಲ್ಲಿ ಅಭಿಷೇಕ್ ಶರ್ಮಾ (1) ಹಾಗೂ ಶುಭಂ ಖಜುರಿಯಾ (10) ವಿಕೆಟ್ ಉರುಳಿಸಿದ ವಿಧ್ವತ್ ದಕ್ಷಿಣ ವಲಯಕ್ಕೆ ಉತ್ತಮ ಆರಂಭ ಒದಗಿಸಿದರು.

ಇನ್ನು 5ನೇ ಓವರ್​ನಲ್ಲಿ ವಿಧ್ವತ್ ಕಾವೇರಪ್ಪ ಪ್ರಭ್​ಸಿಮ್ರಾನ್ ಸಿಂಗ್ (2) ಹಾಗೂ ನಾಯಕ ನಿತೀಶ್ ರಾಣಾ (4) ವಿಕೆಟ್ ಕಬಳಿಸಿದರು. ಹಾಗೆಯೇ ವಿವ್ರಾಂತ್ ಶರ್ಮಾ (4) ರನ್ನು ಔಟ್ ಮಾಡಿ ವಿ ಕೌಶಿಕ್ 5ನೇ ಯಶಸ್ಸು ತಂದುಕೊಟ್ಟರು.

ಇತ್ತ ಕೇವಲ 26 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಉತ್ತರ ವಲಯ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿತು. ಆ ಬಳಿಕ ಪಂದ್ಯ ಶುರುವಾದಾಗ ವಿಜೆಡಿ ನಿಯಮ ಅನ್ವಯ 35 ಓವರ್​ಗಳಲ್ಲಿ 262 ರನ್​ಗಳ ಟಾರ್ಗೆಟ್ ನೀಡಲಾಯಿತು.

ಆದರೆ ಅದಾಗಲೇ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ದಕ್ಷಿಣ ವಲಯ ಪರ ವಿಜಯಕುಮಾರ್ ವೈಶಾಕ್ ಮತ್ತೆರಡು ವಿಕೆಟ್ ಪಡೆದರು. ಇನ್ನು ಸಂದೀಪ್ ಶರ್ಮಾ ವಿಕೆಟ್ ಕಬಳಿಸಿ ವಿಧ್ವತ್ ಕಾವೇರಪ್ಪ 5 ವಿಕೆಟ್​ಗಳ ಸಾಧನೆ ಮಾಡಿದರು. ಪರಿಣಾಮ ಉತ್ತರ ವಲಯ ತಂಡವು ಕೇವಲ 60 ರನ್​ಗಳಿಗೆ ಆಲೌಟ್ ಆಯಿತು.

ದಕ್ಷಿಣ ವಲಯ ಪರ ಕರಾರುವಾಕ್ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ 6 ಓವರ್​ಗಳಲ್ಲಿ 17 ರನ್ 5 ವಿಕೆಟ್​ ಕಬಳಿಸಿ ಮಿಂಚಿದರು.

ಉತ್ತರ ವಲಯ (ಪ್ಲೇಯಿಂಗ್ XI): ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಮನ್‌ದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ಶುಭಂ ಖಜುರಿಯಾ, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಾಂಡೆ, ರಿಷಿ ಧವನ್, ಮಯಾಂಕ್ ದಾಗರ್, ಮಯಾಂಕ್ ಯಾದವ್, ಸಂದೀಪ್ ಶರ್ಮಾ.

ಇದನ್ನೂ ಓದಿ: Vidhwath Kaverappa: ದೇಶೀಯ ಅಂಗಳದಲ್ಲಿ ಕನ್ನಡಿಗ ಕಾವೇರಪ್ಪನ ಕರಾಮತ್ತು

ದಕ್ಷಿಣ ವಲಯ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಎನ್ ಜಗದೀಸನ್ (ವಿಕೆಟ್ ಕೀಪರ್), ಅರುಣ್ ಕಾರ್ತಿಕ್, ರಿಕಿ ಭುಯಿ, ವಾಷಿಂಗ್ಟನ್ ಸುಂದರ್, ರೋಹನ್ ಕುನ್ನುಮ್ಮಲ್, ಸಾಯಿ ಕಿಶೋರ್, ವಾಸುಕಿ ಕೌಶಿಕ್, ವಿಜಯ್‌ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ.