
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಪಂಜಾಬ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಬೇಕೆಂದು ಬಯಸಿದವರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು. ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೆಹ್ವಾಗ್, ಈ ಬಾರಿ ನಾನು ಪಂಜಾಬ್ ಕಿಂಗ್ಸ್ ತಂಡ ಗೆಲ್ಲಬೇಕೆಂದು ಬಯಸುತ್ತೇನೆ. ಅದಕ್ಕಾಗಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುವುದಾಗಿ ತಿಳಿಸಿದ್ದರು.
ಸೆಹ್ವಾಗ್ ಇಂತಹದೊಂದು ಹೇಳಿಕೆ ನೀಡಲು ಮುಖ್ಯ ಕಾರಣ, ಅವರು ಈ ಬಾರಿ ಬೆಂಬಲಿಸಿದ ತಂಡಗಳು ಸೋಲನುಭವಿಸಿರುವುದು. ಈ ಟ್ರೆಂಡ್ ಅನ್ನು ಮುಂದುವರೆಸಲು ಟೀಮ್ ಇಂಡಿಯಾದ ಮಾಜಿ ಆಟಗಾರ ಫೈನಲ್ ಪಂದ್ಯದಲ್ಲಿ ನನ್ನ ಬೆಂಬಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂದಿದ್ದರು.
ಇದಕ್ಕೂ ಮುನ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡ ಗೆಲ್ಲಲಿದೆ ಎಂದಿದ್ದರು. ಆದರೆ ಗೆದ್ದಿದ್ದು ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಗೆಲ್ಲಲಿದೆ ಎಂದು ತಿಳಿಸಿದ್ದರು. ಆದರೆ ಗೆದ್ದಿರುವುದು ಮುಂಬೈ ಇಂಡಿಯನ್ಸ್.
ಇನ್ನು ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿದೆ ಎಂದು ಸೆಹ್ವಾಗ್ ಭವಿಷ್ಯ ನುಡಿದ್ದರು. ಆದರೆ ಗೆದ್ದಿದ್ದು ಪಂಜಾಬ್ ಕಿಂಗ್ಸ್. ಇಲ್ಲಿ ತನ್ನ ಭವಿಷ್ಯವೆಲ್ಲವೂ ಉಲ್ಟಾ ಆದ ಕಾರಣ, ಅವರು ಆರ್ಸಿಬಿ ಗೆಲ್ಲಲಿದೆ ಎಂದಿದ್ದರು.
ಈ ಬಾರಿ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಗೆಲ್ಲಲಿದೆ. ಆದರೆ ನನಗೆ ಗೆಲ್ಲಬೇಕಿರುವುದು ಪಂಜಾಬ್ ಕಿಂಗ್ಸ್ ತಂಡ. ಹೀಗಾಗಿ ನಾನು ಆರ್ಸಿಬಿ ತಂಡಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದೇನೆ. ನಾನು ಬೆಂಬಲಿಸಿದ ತಂಡ ಸೋಲುವ ಕಾರಣ, ಅದೇ ಟ್ರೆಂಡ್ ಅನ್ನು ಮುಂದುವರೆಸುವುದಾಗಿ ವೀರೇಂದ್ರ ಸೆಹ್ವಾಗ್ ಕ್ರಿಕ್ಬಝ್ ಸಂದರ್ಶನದಲ್ಲಿ ಹೇಳಿದ್ದರು.
ಆದರೆ ವೀರೇಂದ್ರ ಸೆಹ್ವಾಗ್ ಅವರ ಲೆಕ್ಕಾಚಾರ ಕೊನೆಗೂ ತಲೆಕೆಳಗಾಗಿದೆ. ಇದೇ ಮೊದಲ ಬಾರಿಗೆ ಅವರು ಗೆಲ್ಲಲಿ ಎಂದು ಹೇಳಿದ ತಂಡವೇ ಜಯ ಸಾಧಿಸಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇದನ್ನೂ ಓದಿ: IPL 2025 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?
ಅಂದಹಾಗೆ ವೀರೇಂದ್ರ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡಕ್ಕೆ ಬೆಂಬಲ ಸೂಚಿಸಲು ಮುಖ್ಯ ಕಾರಣ ಅವರು ಈ ಹಿಂದೆ ಪಂಜಾಬ್ ಪಡೆಯ ನಾಯಕರಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಹೀಗಾಗಿಯೇ ಸೆಹ್ವಾಗ್ ಪಂಜಾಬ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವುದನ್ನು ಎದುರು ನೋಡಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ರೋಚಕ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಎತ್ತಿ ಹಿಡಿದಿದೆ.