
ಬೆಂಗಳೂರು (ಮೇ. 04): ಐಪಿಎಲ್ 2023 ರಲ್ಲಿ ಯಶ್ ದಯಾಳ್ (Yash Dayal) ಗುಜರಾತ್ ಟೈಟಾನ್ಸ್ ಪರ ಆಡುವಾಗ ಅವರ ಒಂದೇ ಓವರ್ನಲ್ಲಿ ರಿಂಕು ಸಿಂಗ್ 5 ಸಿಕ್ಸರ್ಗಳನ್ನು ಬಾರಿಸಿದ್ದರು. ಆಗ ಯಶ್ ದಯಾಳ್ ತಮ್ಮ ವೃತ್ತಿಜೀವನ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಲಾಗಿತ್ತು. ಕೆಕೆಆರ್ ವಿರುದ್ಧದ ಆ ಪಂದ್ಯದಲ್ಲಿ ಯಶ್ ದಯಾಳ್ ಅತಿದೊಡ್ಡ ವಿಲನ್ ಆದರು. ಆ ಋತುವಿನ ನಂತರ ಗುಜರಾತ್ ಯಶ್ ದಯಾಳ್ ಅವರನ್ನು ಬಿಡುಗಡೆ ಮಾಡಿತು, ಆದರೆ ಆರ್ಸಿಬಿ ಹರಾಜಿನಲ್ಲಿ ಯಶ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿತು. ತಮ್ಮ ತಪ್ಪುಗಳಿಂದ ಪಾಠ ಕಲಿತ ಯಶ್ ದಯಾಳ್ ಐಪಿಎಲ್ 2024 ರಲ್ಲಿ ಆರ್ಸಿಬಿ ಪರ ಒಟ್ಟು 15 ವಿಕೆಟ್ಗಳನ್ನು ಕಬಳಿಸಿದರು.
ಯಶ್ ದಯಾಳ್ ಅವರ ಈ ಅದ್ಭುತ ಪ್ರದರ್ಶನವನ್ನು ನೋಡಿದ ಆರ್ಸಿಬಿ ಐಪಿಎಲ್ 2025 ಕ್ಕೆ ಅವರನ್ನು ಉಳಿಸಿಕೊಂಡಿತು. ಯಶ್ ಆರ್ಸಿಬಿಯ ನಂಬಿಕೆಗೆ ತಕ್ಕಂತೆ ಬದುಕಿದರು ಮತ್ತು ಈಗ ಅವರ ತಂಡದ ಅತಿದೊಡ್ಡ ಪ್ರಮುಖ ಬೌಲರ್ ಆಗಿದ್ದಾರೆ. ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ, ವಿಶ್ವದ ಶ್ರೇಷ್ಠ ಫಿನಿಷರ್ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಹೇಂದ್ರ ಸಿಂಗ್ ಧೋನಿ ಕೂಡ ಅವರ ಬಿಗಿಯಾದ ಬೌಲಿಂಗ್ ಮುಂದೆ ಅಸಹಾಯಕರಾಗಿ ಕಂಡರು. ಐಪಿಎಲ್ 2025 ರ ಹಿಂದಿನ ಪಂದ್ಯದಲ್ಲಿ ಕೂಡ ಇದೇರೀತಿ ಕಂಡುಬಂದಿದೆ.
ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ, ಯಶ್ ದಯಾಳ್ ಕೊನೆಯ ಓವರ್ನಲ್ಲಿ 15 ರನ್ಗಳನ್ನು ರಕ್ಷಿಸಿಕೊಳ್ಳಬೇಕಾಯಿತು. ಕೊನೆಯ ಓವರ್ನ ಮೊದಲ ಮೂರು ಎಸೆತಗಳಲ್ಲಿ ಯಶ್ ದಯಾಳ್ ಸಿಎಸ್ಕೆ ಸೋಲನ್ನು ದೃಢಪಡಿಸಿದರು. ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್ನಲ್ಲಿ ನಿಂತಿದ್ದರು. ಮೊದಲ ಚೆಂಡು ಫುಲ್-ಟಾಸ್ ಆಗಿತ್ತು ಆದರೆ ಧೋನಿ ಅದನ್ನು ಸರಿಯಾಗಿ ಟಚ್ ಮಾಡಲು ವಿಫಲರಾದರು ಮತ್ತು ಸಿಂಗಲ್ ತೆಗೆದುಕೊಂಡು ಜಡೇಜಾಗೆ ಸ್ಟ್ರೈಕ್ ನೀಡಿದರು. ಯಶ್ ಅದ್ಭುತ ಯಾರ್ಕರ್ ಮೂಲಕ ಜಡೇಜಾ ಅವರನ್ನೂ ಕಟ್ಟಿಹಾಕಿದರು. ಮೂರನೇ ಎಸೆತದಲ್ಲಿ ಧೋನಿ ಮತ್ತೊಮ್ಮೆ ಸ್ಟ್ರೈಕ್ಗೆ ಬಂದರು ಮತ್ತು ಈ ಬಾರಿ ಯಶ್ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದರು.
Yash Dayal: ಯಶ್ ದಯಾಳ್ ಮಾಡಿದ 20ನೇ ಓವರ್ ಹೇಗಿತ್ತು?: ಇಲ್ಲಿದೆ ಬಾಲ್-ಬೈ-ಬಾಲ್ ಸ್ಟೋರಿ
ಧೋನಿ ಔಟಾದ ತಕ್ಷಣ, ಪಂದ್ಯವು ಆರ್ಸಿಬಿ ಪರವಾಗಿ ಬಂದಿತು. ನಾಲ್ಕನೇ ಎಸೆತದಲ್ಲಿ ನೋ ಬಾಲ್ ಹಾಗೂ ಸಿಕ್ಸ್ ಹೋದರು ಯಶ್ ಮತ್ತೆ ಕಮ್ಬ್ಯಾಕ್ ಮಾಡಿದರು. ಯಶ್ ತಮ್ಮ ಹಿಡಿತವನ್ನು ಕಾಯ್ದುಕೊಂಡು ಕೊನೆಯ ಮೂರು ಎಸೆತಗಳಲ್ಲಿ ಕೇವಲ ಮೂರು ರನ್ಗಳನ್ನು ಬಿಟ್ಟುಕೊಟ್ಟರು, ಇದರಿಂದಾಗಿ ಆರ್ಸಿಬಿ ಪಂದ್ಯವನ್ನು ಗೆದ್ದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸಿಎಸ್ಕೆ 5 ವಿಕೆಟ್ಗೆ 211 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ