ನಾಯಕ ರೋಹಿತ್ ಶರ್ಮ ಅವರ ಅಮೋಘ ಬ್ಯಾಟಿಂಗ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಉತ್ಕೃಷ್ಟ ಬೌಲಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಸುಲಭ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಖಾತೆ ತೆರೆಯಿತು. ಅತ್ಯಂತ ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ ಅಪಾಯಕಾರಿ ಬ್ಯಾಟ್ಸ್ಮನ್ ಆಂದ್ರೆ ರಸ್ಸೆಲ್ ಮತ್ತು ಅಯಾನ್ ಮೊರ್ಗನ್ ಅವರ ವಿಕೆಟ್ಗಳನ್ನು ತಮ್ಮ ಮೂರನೇ ಓವರ್ನಲ್ಲಿ ಪಡೆದು ಕೆಕೆಆರ್ ಟೀಮಿನ ಗೆಲುವಿನಾಸೆಯನ್ನು ಅಕ್ಷರಶಃ ನಾಶಗೊಳಿಸಿದರು. […]
ಅರುಣ್ ಕುಮಾರ್ ಬೆಳ್ಳಿ
Updated on:
Sep 23, 2020 | 11:56 PM
ನಾಯಕ ರೋಹಿತ್ ಶರ್ಮ ಅವರ ಅಮೋಘ ಬ್ಯಾಟಿಂಗ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಉತ್ಕೃಷ್ಟ ಬೌಲಿಂಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಸುಲಭ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ಖಾತೆ ತೆರೆಯಿತು.
ಅತ್ಯಂತ ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡಿದ ಬುಮ್ರಾ ಅಪಾಯಕಾರಿ ಬ್ಯಾಟ್ಸ್ಮನ್ ಆಂದ್ರೆ ರಸ್ಸೆಲ್ ಮತ್ತು ಅಯಾನ್ ಮೊರ್ಗನ್ ಅವರ ವಿಕೆಟ್ಗಳನ್ನು ತಮ್ಮ ಮೂರನೇ ಓವರ್ನಲ್ಲಿ ಪಡೆದು ಕೆಕೆಆರ್ ಟೀಮಿನ ಗೆಲುವಿನಾಸೆಯನ್ನು ಅಕ್ಷರಶಃ ನಾಶಗೊಳಿಸಿದರು. ಮೊದಲ ಓವರ್ಗಳಲ್ಲಿ ಕೇವಲ 4 ರನ್ ನೀಡಿದ್ದ ಅವರು ಕೊನೆ ಓವರ್ನಲ್ಲಿ ಮಾತ್ರ 28ರನ್ಗಳನ್ನು ನೀಡಿದರು. ರಾಹುಲ್ ಚಹರ್, ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ಪ್ಯಾಟಿಸನ್ ಸಹ ತಲಾ ಎರಡು ವಿಕೆಟ್ ಪಡೆದರು.
ಕೊಲ್ಕತಾ ಪರ ನಾಯಕ ದಿನೇಶ್ ಕಾರ್ತೀಕ್ 30 (23 5X4), ನಿತಿಶ್ ರಾಣಾ 24 (18 2X4), ಲಾಂಗ್ ಹ್ಯಾಂಡಲ್ ಬಳಸಿದ ಪ್ಯಾಟ್ ಕಮ್ಮಿನ್ಸ್ ಕೇವಲ 12 ಎಸೆತಗಳಲ್ಲಿ 4 ಸಿಕ್ಸರ್ಗಳಿದ್ದ 33 ರನ್ ಬಾರಿಸಿದರು.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಕಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ಎರಡನೇ ಓವರ್ನಲ್ಲೇ ಕ್ವಿಂಟನ್ ಡಿ ಕಾಕ್ ಅವರನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದರೂ ರೋಹಿತ್ ಶರ್ಮ ಎರಡನೇ ವಿಕೆಟ್ ಜೊತೆಯಾಟದಲ್ಲಿ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರೊಂದಿಗೆ 90 ರನ್ಗಳನ್ನು ಸೇರಿಸಿದರು. 54 ಎಸೆತಗಳಲ್ಲಿ 80 ರನ್ (3X4 6X6) ಬಾರಿಸಿದ ರೋಹಿತ್, ಪ್ರತಿಭಾನ್ವಿತ ಯುವ ಬೌಲರ್ ಶಿವಮ್ ಮಾವಿಗೆ ವಿಕೆಟ್ ಒಪ್ಪಿಸಿದರು. ಯಾದವ್ 47ರನ್ಗಳ ( 6X4 1X6) ಕಾಣಿಕೆ ನೀಡಿದರು.
ನಾಲ್ಕನೇ ಕ್ರಮಾಕದಲ್ಲಿ ಆಡಿದ ಸೌರಬ್ ತಿವಾರಿ 21 ರನ್ (13 1X4 1X6) ಗಳಿಸಿದರೆ, ಹಾರ್ದಿಕ್ ಪಾಂಡ್ಯ 18 (2X4 1X6) ಮತ್ತು ಕೈರನ್ ಪೊಲ್ಲಾರ್ಡ್ 13 (1X4) ರನ್ಗಳ ಕಾಣಿಕೆ ನೀಡಿದರು. ಕೆಕೆಆರ್ ಪರ ಯಶಸ್ವೀ ಬೌಲರ್ ಎನಿಸಿದ ಮಾವಿ 32 ರನ್ ನೀಡಿ 2 ವಿಕೆಟ್ ಪಡೆದರೆ ಎಂದಿನ ಜಿಗುಟುತದ ಬೌಲಿಂಗ್ ಮಾಡಿದ ಸುನಿಲ್ ನರೈನ್ ಕೇವಲ 22 ರನ್ ನೀಡಿ 1 ವಿಕೆಟ್ ಪಡೆದರು. ವೇಗದ ಬೌಲರ್ ರಸ್ಸೆಲ್ಗೂ ಒಂದು ವಿಕೆಟ್ ದಕ್ಕಿತು.
Arun Belly
ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.