WITT 2024: ಕ್ರಿಕೆಟ್ ಹೊರತಾದ ಕ್ರೀಡೆಗಳಲ್ಲೂ ಮಿಂಚುತ್ತಿರುವ ಭಾರತೀಯರು: ಅನುರಾಗ್ ಠಾಕೂರ್

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 25, 2024 | 6:15 PM

What India Thinks Today Global Summit: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಭಾನುವಾರ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆ 2024 ರಲ್ಲಿ ಪಾಲ್ಗೊಂಡಿದ್ದಾರೆ. ಕ್ರಿಕೆಟ್ ಆಟಗಾರನಾಗಿದ್ದು, ಬಳಿಕ ಕ್ರಿಕೆಟ್ ಆಡಳಿತ ಮತ್ತು ರಾಜಕೀಯ ನಡೆ ಹೀಗೆ ತಮ್ಮ ಪ್ರಯಾಣದ ಬಗ್ಗೆ ಠಾಕೂರ್ ವಿವರ ನೀಡಿದ್ದಾರೆ. ಭಾರತದಲ್ಲಿ ಕ್ರೀಡೆಗೆ ಸರ್ಕಾರ ಸಾಕಷ್ಟು ಉತ್ತೇಜನ ಕೊಡುತ್ತಿದೆ. ಕ್ರಿಕೆಟ್ ಹೊರತಾಗಿ ಬೇರೆ ಕ್ರೀಡೆಗಳಲ್ಲೂ ಸ್ಟಾರ್​ಗಳು ಹೆಚ್ಚುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

WITT 2024: ಕ್ರಿಕೆಟ್ ಹೊರತಾದ ಕ್ರೀಡೆಗಳಲ್ಲೂ ಮಿಂಚುತ್ತಿರುವ ಭಾರತೀಯರು: ಅನುರಾಗ್ ಠಾಕೂರ್
ಅನುರಾಗ್ ಠಾಕೂರ್, ಬರುಣ್ ದಾಸ್
Follow us on

ದೇಶದ ಅತಿದೊಡ್ಡ ಟಿವಿ9 ನೆಟ್‌ವರ್ಕ್ ರಾಜಧಾನಿ ನವದೆಹಲಿಯಲ್ಲಿ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಶೃಂಗಸಭೆ 2024 ಅನ್ನು (What India Thinks Today Global Summit) ಆಯೋಜಿಸಿದೆ . ರಾಜಕೀಯ, ಕ್ರೀಡೆ, ಮನರಂಜನಾ ಕ್ಷೇತ್ರದ ದಿಗ್ಗಜರು ಇಲ್ಲಿಗೆ ಬಂದಿದ್ದಾರೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಇದರ ಭಾಗವಾಗಿ ನಡೆದ ಸಂವಾದ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದರು. ಭಾರತದ ಕ್ರೀಡಾ ಉನ್ನತಿ ಬಗ್ಗೆ ಅವರು ಮಾತನಾಡಿದರು. ಸರ್ಕಾರದ ಪ್ರೋತ್ಸಾಹದಿಂದ ಕ್ರಿಕೆಟ್ ಹೊರತಾಗಿ ಬೇರೆ ಕ್ರೀಡೆಗಳಲ್ಲಿ ಆಟಗಾರರು ದೇಶಕ್ಕೆ ಹೇಗೆ ಕೀರ್ತಿ ತಂದಿದ್ದಾರೆ ಎಂಬುದನ್ನು ಠಾಕೂರ್ ತಿಳಿಸಿದರು.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ‘1983ಕ್ಕಿಂತ ಮೊದಲು ಕ್ರಿಕೆಟ್‌ನಲ್ಲಿ ಹೆಚ್ಚು ಹಣ ಇರಲಿಲ್ಲ, ಆಗ ಬಿಸಿಸಿಐ ಬಳಿಯೂ ಅಷ್ಟು ಹಣ ಇರಲಿಲ್ಲ. ಆದರೆ ಬ್ರಾಡ್​ಕ್ಯಾಸ್ಟಿಂಗ್ ಹಕ್ಕು ವಿಚಾರದಲ್ಲಿ ಪ್ರಸಾರ ಭಾರತಿ ಪ್ರಕರಣವನ್ನು ಬಿಸಿಸಿಐ ಗೆದ್ದ ಬಳಿಕ ಕ್ರಿಕೆಟ್​ಗೆ ಹಣ ಬರಲು ಆರಂಭಿಸಿತು. ಇಂದು ನಮ್ಮ ಕ್ರಿಕೆಟಿಗರು ಹೇಗೆ ವಿಶ್ವದ ತಾರೆಗಳಾಗಿದ್ದಾರೆ ಎಂಬುದನ್ನು ನಾವು ನೋಡುತ್ತೇವೆ. ಈಗ ಕ್ರಿಕೆಟ್‌ನ ಹೊರತಾಗಿ ಇತರ ಕ್ರೀಡೆಗಳಲ್ಲಿ ಆಟಗಾರರು ತಮ್ಮ ಹೆಸರನ್ನು ಮುಂಚೂಣಿಯಲ್ಲಿರಿಸುವ ಸಮಯ ಬಂದಿದೆ’ ಎಂದು ಹೇಳಿದರು.

ಸರ್ಕಾರದ ಯೋಜನೆಯಿಂದ ಆಟಗಾರರಿಗೆ ಲಾಭ

ಇಂದು ಖೇಲೋ ಇಂಡಿಯಾ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ನಡೆಸುತ್ತಿದೆ. ಅಲ್ಲಿ ಆಟಗಾರರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅದರ ಫಲಶೃತಿಗಳನ್ನೂ ಸಹ ನೋಡುತ್ತಿದ್ದೇವೆ. ಏಷ್ಯನ್ ಗೇಮ್ಸ್​ನಲ್ಲಿ ಭಾರತ 100ಕ್ಕೂ ಹೆಚ್ಚು ಪದಕ ಗೆದ್ದಿರುವುದು ಇದೇ ಮೊದಲು. ಇವತ್ತು ಭಾರತ ಮಾಡುತ್ತಿರುವ ಕೆಲಸಗಳಿಗೆ ಫಲ ತನ್ನಂತಾನೇ ಸಿಗುತ್ತಿದೆ ಎಂದರು ಕೇಂದ್ರ ಕ್ರೀಡಾ ಸಚಿವರು.

ಇದನ್ನೂ ಓದಿ: ಟಿವಿ9 ನೆಟ್ವರ್ಕ್ ಸಿಇಒರಿಂದ ಡಬ್ಲ್ಯುಐಟಿಟಿ ಶೃಂಗಸಭೆಗೆ ಚಾಲನೆ; ಭಾರತದ ಸಾಫ್ಟ್​ಪವರ್, ಸ್ಯಾಂಡಲ್ವುಡ್ ಪವರ್ ಉಲ್ಲೇಖ

ಈ ಹಿಂದೆ ಆಟಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಇಂದು ಖೇಲೋ ಇಂಡಿಯಾ ಟಾಪ್ಸ್ ಯೋಜನೆಯಡಿ ಸರ್ಕಾರವು ಆಟಗಾರರ ಸಂಪೂರ್ಣ ವೆಚ್ಚವನ್ನು ಭರಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಅಷ್ಟೇ ಅಲ್ಲ, ಪ್ರತ್ಯೇಕವಾಗಿ 6 ​​ಲಕ್ಷ ರೂ.ನೀಡಲಾಗಿದೆ. ನಮ್ಮ ಸರ್ಕಾರ 1 ಸಾವಿರಕ್ಕೂ ಹೆಚ್ಚು ಕ್ರೀಡಾ ಕೇಂದ್ರಗಳನ್ನು ನಿರ್ಮಿಸಿದೆ. ರಾಜ್ಯ ಸರ್ಕಾರಗಳಿಂದಲೂ ಸಹಾಯ ಸಿಕ್ಕರೆ ಇದರಲ್ಲಿ ದೊಡ್ಡ ಹೆಜ್ಜೆ ಇಡಬಹುದು ಎಂದು ಅವರು ವಿವರಿಸಿದರು.

ಮಾಧ್ಯಮಗಳ ಪಾತ್ರವೂ ಬಹಳ ಮುಖ್ಯ: ಬರುಣ್ ದಾಸ್

ಈ ಸಂವಾದ ಕಾರ್ಯಕ್ರಮದಲ್ಲಿ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಕೂಡ ಪಾಲ್ಗೊಂಡಿದ್ದರು. ಕ್ರೀಡಾ ಲೋಕದಲ್ಲಿ ಸೂಪರ್ ಪವರ್ ಸೃಷ್ಟಿಸುವಲ್ಲಿ ಮಾಧ್ಯಮಗಳೂ ಪ್ರಮುಖ ಪಾತ್ರ ವಹಿಸಬಲ್ಲವು ಎಂದ ಅವರು, ಮೊದಲು ಜನರ ಮನಸ್ಥಿತಿಯನ್ನು ಬದಲಿಸಿ ಅವರಲ್ಲಿ ಗೆಲುವಿನ ಭಾವನೆ ಮೂಡಿಸಲಾಗುತ್ತಿದೆ. ಗೋಪಿ ಪುಲ್ಲೇಲ್ ಚಂದ್ ಅವರು ನಮಗೆಲ್ಲ ಉದಾಹರಣೆಯಾಗಿದ್ದಾರೆ. ಅವರು ಮೊದಲು ಇತಿಹಾಸವನ್ನು ಸೃಷ್ಟಿಸಿದರು ಮತ್ತು ನಂತರ ಹೊಸ ಪೀಳಿಗೆಯನ್ನು ಬೆಳೆಸಿದರು ಎಂದರು.

ಒಲಿಂಪಿಕ್ಸ್‌ನಲ್ಲಿ ಭಾರತ ಇತಿಹಾಸ ಸೃಷ್ಟಿಸಲಿದೆ

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಮಾಧ್ಯಮಗಳು ಆಟಗಾರರಿಗೆ ನೀಡುವ ಮನ್ನಣೆಯು ಹಣಕ್ಕಿಂತ ಮಿಗಿಲಾದುದು ಎಂದರು.

ಇದನ್ನೂ ಓದಿ: ಮೋದಿ ಸರ್ಕಾರದ ಡಿಜಿಟಲ್ ಯೋಜನೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ: ಅಭಯ್ ಭೂತಾಡ

‘ನಾನು ಕ್ರಿಕೆಟ್ ಆಡುತ್ತಿದ್ದೆ. ಆದರೆ ಕೌಟುಂಬಿಕ ಪರಿಸ್ಥಿತಿಯಿಂದಾಗಿ ನಾನು ಆಟ ಆಡುವುದನ್ನು ಬಿಡಬೇಕಾಯಿತು. ನಾನು 25 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿದ್ದೆ ಮತ್ತು ನನ್ನ ನನ್ನ ಅವಧಿಯಲ್ಲಿ ಧರ್ಮಶಾಲಾದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಿದೆ. ಆ ನಂತರ ರಾಜಕೀಯದ ದಾರಿಗಳು ತೆರೆದುಕೊಂಡವು ಮತ್ತು ಬಹುಶಃ ಆ ಕ್ರೀಡಾಂಗಣವನ್ನು ನಿರ್ಮಿಸದಿದ್ದರೆ, ನಾನು ನಾಲ್ಕು ಬಾರಿ ಲೋಕಸಭೆಯ ಸಂಸದನಾಗಲು ಆಗುತ್ತಿರಲಿಲ್ಲ,’ ಎಂದು ಕೇಂದ್ರ ಸಚಿವರು ತಮ್ಮ ಕ್ರಿಕೆಟ್ ಹಾಗೂ ರಾಜಕೀಯ ಪ್ರಯಾಣದ ಬಗ್ಗೆ ಮಾತನಾಡಿದರು.

ಪ್ಯಾರಿಸ್ ಒಲಿಂಪಿಕ್ಸ್ ತಯಾರಿ ಬಗ್ಗೆ ಅನುರಾಗ್ ಠಾಕೂರ್ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ ಕೊರೋನಾ ಸಮಯದಲ್ಲಿ ನಾವು ಆಟಗಾರರನ್ನು ತಯಾರು ಮಾಡಿದ್ದೇವೆ. ಆಟಗಾರರಿಗೆ ವಿದೇಶದಲ್ಲಿ ತರಬೇತಿ ಕೊಡಿಸಿದ್ದೇವೆ. ಮೀರಾಬಾಯಿ ಚಾನು ಗಾಯಗೊಂಡಾಗ, ಸರ್ಕಾರ ಆಕೆಗೆ ಅಮೆರಿಕಾದಲ್ಲಿ ಚಿಕಿತ್ಸೆ ನೀಡಿಸಿತು. ಆಕೆ ಪದಕವನ್ನೂ ಗೆದ್ದರು. ನಮ್ಮ ಆಟಗಾರರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾತ್ರವಲ್ಲದೆ ಪ್ಯಾರಾ ಒಲಿಂಪಿಕ್ಸ್‌ನಲ್ಲೂ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಸಚಿವರು ಹೇಳಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ