ಪಾಳುಬಿದ್ದ ಮನೆಯಲ್ಲಿದ್ದ ಹೆಣ್ಣು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ ಖ್ಯಾತ ನಟಿಯ ಸಹೋದರಿ

ಮಾನವೀಯತೆಯು ಸತ್ತು ಹೋಗಿದೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಥಿತಿ ಯಾರಲ್ಲಿಯು ಇಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಇದೀಗ ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಹಾಗೂ ಮಾಜಿ ಭಾರತೀಯ ಸೇನಾ ಅಧಿಕಾರಿ ಖುಷ್ಬೂ ಪಟಾನಿ ಅವರು ತಮ್ಮ ಮನೆಯ ಹಿಂಬದಿಯ ಪಾಳುಬಿದ್ದ ಕಟ್ಟಡದಲ್ಲಿದ್ದ ಹೆಣ್ಣು ಮಗುವೊಂದನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ ಅವರ ಈ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಪಾಳುಬಿದ್ದ ಮನೆಯಲ್ಲಿದ್ದ ಹೆಣ್ಣು ಮಗುವನ್ನು ರಕ್ಷಿಸಿ ಮಾನವೀಯತೆ ಮೆರೆದ ಖ್ಯಾತ ನಟಿಯ ಸಹೋದರಿ
ವೈರಲ್​​ ವಿಡಿಯೋ
Edited By:

Updated on: Apr 22, 2025 | 12:38 PM

ಬರೇಲಿ, ಏ.22 : ಇದು ಕಲಿಯುಗ, ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ, ಬೇರೆಯವರ ನೋವು, ಕಷ್ಟವನ್ನು ಕೇಳಿಸಿಕೊಳ್ಳುವ ವ್ಯವಧಾನವಂತೂ ಇಲ್ಲ. ಮಾನವೀಯ ವ್ಯಕ್ತಿಗಳು ಸಿಗುವುದೇ ಅಪರೂಪ ಎನ್ನುವಂತಾಗಿದೆ. ಆದರೆ ಕೆಲವು ವ್ಯಕ್ತಿಗಳು ಮಾಡುವ ಕೆಲಸ ಕಾರ್ಯ ನೋಡಿದಾಗ ಮಾನವೀಯತೆ (humanity) ಎನ್ನುವುದು ಇವತ್ತಿಗೂ ಜೀವಂತವಾಗಿದೆ ಎಂದೆನೆನಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಾಜಿ ಭಾರತೀಯ ಸೇನಾ ಅಧಿಕಾರಿ ಖುಷ್ಬೂ ಪಟಾನಿ(Khushboo Patani) ಬರೇಲಿ (bareilly) ಯಲ್ಲಿರುವ ತನ್ನ ಮನೆಯ ಹಿಂಬದಿಯಲ್ಲಿರುವ ಪಾಳುಬಿದ್ದ ಕಟ್ಟಡ ವೊಂದರಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಹೆಣ್ಣು ಮಗುವನ್ನು ರಕ್ಷಿಸಿ, ಪೊಲೀಸರಿಗೆ ಒಪ್ಪಿಸಿದ್ದು ಇವರ ಈ ಕೆಲಸಕ್ಕೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

Khushboo patani ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಖುಷ್ಬೂ ಪಟಾನಿಯವರು ಪಾಳು ಬಿದ್ದ ಕಟ್ಟಡವನ್ನು ಪ್ರವೇಶಿಸಿದ ವೇಳೆ ಒಂಬತ್ತರಿಂದ ಹತ್ತು ತಿಂಗಳ ಹೆಣ್ಣು ಮಗುವೊಂದು ಕೊಳಕಿನಲ್ಲಿ ಬಿದ್ದು ಅಳುತ್ತಿರುವುನ್ನು ಕಾಣಬಹುದು. ಆ ತಕ್ಷಣವೇ ಅದನ್ನು ಎತ್ತಿಕೊಂಡು ಅಲ್ಲಿಂದ ಬಂದಿರುವುದನ್ನು ಕಾಣಬಹುದು.

ಮತ್ತೊಂದು ವಿಡಿಯೋದಲ್ಲಿ ಖುಷ್ಬೂ ಪಟಾನಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ್ತು ಇತರ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ‘ಜಾಕೋ ರಾಖೆ ಸೈಯಾನ್, ಮಾರ್ ಸಕೆ ನಾ ಕೋಯ್’ ಎಂಬ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಗುವಿಗೆ ‘ರಾಧಾ’ ಎಂದು ನಾಮಕರಣ ಮಾಡಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿಡಲು ತಾವು ಖಾತರಿಪಡಿಸುವುದಾಗಿ ಖುಷ್ಬೂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು

ವೈರಲ್ ವಿಡಿಯೋ ಇಲ್ಲಿದೆ ನೋಡಿ


ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದಿಶಾ ಪಟಾನಿ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಖುಷ್ಬೂ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಬಳಕೆದಾರರೊಬ್ಬರು, ದೇವರ ಆಶೀರ್ವಾದವು ಆ ಮಗುವಿನ ಮೇಲೆ ಹಾಗೂ ನಿಮ್ಮ ಮೇಲೆ ಇರಲಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಈ ದೃಶ್ಯವು ನೋಡಿದಾಗ ಕಣ್ಣಲ್ಲಿ ನೀರು ಬಂದಿದೆ. ಆ ಮಗುವನ್ನು ರಕ್ಷಿಸಲು ಆ ದೇವರೇ ನಿಮ್ಮನ್ನು ಅಲ್ಲಿಗೆ ಕಳುಹಿಸಬೇಕು ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ಧೈರ್ಯದಿಂದ ಆ ಮಗುವಿನ ಜೀವ ಉಳಿಯಿತು ಎಂದು ಕಾಮೆಂಟ್ ಮಾಡಿದ್ದಾರೆ.

ಖುಷ್ಬೂ ಪಟಾನಿ ಈ ಹೆಣ್ಣು ಮಗುವನ್ನು ರಕ್ಷಿಸಿದ ಬಳಿಕ ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ನೀಡಿದ ಪೊಲೀಸರು ಪೋಷಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಮಗುವಿನ ತಾಯಿಯು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಈಕೆಯನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ, ರೈಲ್ವೆ ಸ್ಟೇಷನ್‌ನಲ್ಲಿ ಮಗು ಜೋರಾಗಿ ಅಳುತ್ತಿತ್ತು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬನು ಮಗುವನ್ನು ಆಡಿಸುವ ನೆಪದಲ್ಲಿ ಬಂದು ತಾಯಿ ಕೈಯಿಂದ ತನ್ನ ಬಳಿ ಹಿಡಿದುಕೊಂಡು ಎಂದು ಓಡಿ ಹೋಗಿದ್ದಾನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಮಗುವನ್ನು ಕದ್ದ ವ್ಯಕ್ತಿಯನ್ನು ಪತ್ತೆಹಚ್ಚುವ ಸಲುವಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:38 am, Tue, 22 April 25

Loading...
Unable to load recommendations.
Follow Us