ಬಡಗುತಿಟ್ಟು ಯಕ್ಷರಂಗದ ಮದ್ದಳೆಯಲ್ಲಿ ಹೊಸ ಪ್ರಯೋಗ, ಅದುವೇ ಈ ಸಿಂಥೆಟಿಕ್ ಮದ್ದಳೆ, ವಿಡಿಯೋ ವೈರಲ್
ಯಕ್ಷಗಾನ ಎಂದ ಕೂಡಲೇ ಬಡಗುತಿಟ್ಟು ಹಾಗೂ ತೆಂಕುತಿಟ್ಟು ಎರಡು ಪ್ರಕಾರಗಳು ನೆನಪಿಗೆ ಬರುತ್ತದೆ. ಆದರೆ ಇದೀಗ ಬಡಗುತಿಟ್ಟಿನಲ್ಲಿ ಮದ್ದಳೆಗೆ ಹೊಸ ರೂಪವನ್ನು ನೀಡಲಾಗಿದೆ. ಹೌದು, ಕಾರುಣ್ಯ ಮ್ಯೂಸಿಕಲ್ಸ್ ನ ಡಾ. ಕೆ ವರದರಂಗನ್ ಅವರು ಬಡಗುತಿಟ್ಟಿನ ಮದ್ದಳೆಯಲ್ಲಿ ಸುಧಾರಿತ ಮಾದರಿಯ ಸಿಂಥೆಟಿಕ್ ಮದ್ದಳೆಯನ್ನು ಪರಿಚಯಿಸಿದ್ದಾರೆ. ಈ ಸಿಂಥೆಟಿಕ್ ಮದ್ದಳೆಯನ್ನು ಬಡಗುತಿಟ್ಟುವಿನ ಮದ್ದಳೆಗಾರ ಅನಂತ ಪದ್ಮನಾಭ ಫಾಟಕ್ ನುಡಿಸುತ್ತಿದ್ದು, ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಮೆಚ್ಚುಗೆ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕರಾವಳಿ ಗಂಡು ಕಲೆ ಯಕ್ಷಗಾನ (yakshagana) . ಭಾಗವತಿಕೆ, ಆಕರ್ಷಕ ವೇಷ ಭೂಷಣ, ಪ್ರಸಂಗದ ಹಾಡಿಗೆ ಆಧರಿಸಿದ ಕಲಾವಿದರ ನೃತ್ಯ ಹಾಗೂ ಅಭಿನಯ, ಚಂಡೆ ಮದ್ದಳೆಗಳು ಇದಿಷ್ಟು ಇದ್ದರೇನೇ ಯಕ್ಷಗಾನ ಪರಿಪೂರ್ಣ. ಈಗಾಗಲೇ ಯಕ್ಷಗಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದೀಗ ಬಡಗುತಿಟ್ಟು ಮದ್ದಳೆಗೆ ಹೊಸ ರೂಪ ನೀಡುವ ಮೂಲಕ ಸುಧಾರಿತ ಮಾದರಿಯ ಸಿಂಥೆಟಿಕ್ ಮದ್ದಳೆ (synthetic mridangam) ಯನ್ನು ಪರಿಚಯಿಸಲಾಗಿದೆ. ಕಾರುಣ್ಯ ಮ್ಯೂಸಿಕಲ್ಸ್ ನ ಡಾ. ಕೆ ವರದರಂಗನ್ (Dr. K varadarangan) ಅವರು ಬಡಗುತಿಟ್ಟುವಿನ ಸುಧಾರಿತ ಮಾದರಿಯ ಸಿಂಥೆಟಿಕ್ ಮದ್ದಳೆಯನ್ನು ಅನೇಕರ ಮಾರ್ಗದರ್ಶನದಲ್ಲಿ ತಯಾರಿಸಿದ್ದು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ (social media) ದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವರದರಂಗನ್ ಕೆ ಹೆಸರಿನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಬಡಗುತಿಟ್ಟಿನ ಸುಧಾರಿತ ಮಾದರಿಯ ಸಿಂಥೆಟಿಕ್ ಮದ್ದಳೆಯನ್ನು ನೋಡಬಹುದು. ಈ ವಿಡಿಯೋದೊಂದಿಗೆ, ‘ ಇಂದು ಮತ್ತೊಂದು ಆಶೀರ್ವಾದದ ದಿನ! ಬಡಗುತಿಟ್ಟು ಯಕ್ಷಗಾನ ಮದ್ದಳೆಯ ಡೋಯೆನ್ ಶ್ರೀ ಎಪಿ ಫಾಟಕ್, ನಮ್ಮ ಇತ್ತೀಚಿನ ವಾದ್ಯ ಆವೃತ್ತಿಯನ್ನು ಪರೀಕ್ಷಿಸಿದ್ದು ಅದರ ನಾದದ ಗುಣಮಟ್ಟದಿಂದ ಸಂಪೂರ್ಣವಾಗಿ ಸಂತೋಷಗೊಂಡಿದ್ದಾರೆ. ಅವರು ಕಾರುಣ್ಯ ಮ್ಯೂಸಿಕಲ್ಸ್ ನ ಮೊದಲ ಗ್ರಾಹಕರಾಗಿದ್ದಾರೆ ಎಂದು ತಿಳಿಸಲು ಹೆಮ್ಮೆಪಡುತ್ತೇನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ಮದ್ದಳೆಯ ಅಭಿವೃದ್ಧಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕಾಗಿ ನಾವು ಅವರಿಗೆ ಅಪಾರವಾಗಿ ಧನ್ಯವಾದ ಹೇಳುತ್ತೇನೆ. ಈ ಮದ್ದಳೆಯ ಅಭಿವೃದ್ಧಿಯ ಸಮಯದಲ್ಲಿ ಹಲವು ಬಾರಿ ಭೇಟಿ ನೀಡಿದ್ದಕ್ಕಾಗಿ, ಪರೀಕ್ಷಿಸಿದ್ದಕ್ಕಾಗಿ ಹಾಗೂ ಅಮೂಲ್ಯವಾದ ಸಲಹೆಗಳನ್ನು ನೀಡಿದ್ದಕ್ಕೆ ಶ್ರೀ ಚಿನ್ಮಯ ಹೆಗ್ಡೆ (ಶ್ರೀ ಫಾಟಕ್ ಅವರ ಶಿಷ್ಯ) ಅವರಿಗೆ ನನ್ನ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತುಂಬಾ ಸ್ನೇಹಪರ, ಸರಳ ಮತ್ತು ಮುಕ್ತ ಮನಸ್ಸಿನ ವ್ಯಕ್ತಿಯಾದ ಶ್ರೀ ಫಾಟಕ್ ಅವರೊಂದಿಗೆ ಸಂವಹನ ನಡೆಸುವುದು ಬಹಳ ಉತ್ತಮ ಅನುಭವವಾಗಿದ್ದು, ಅವರು ಇಂದು ನಮ್ಮನ್ನು ಭೇಟಿ ಮಾಡಿ ಮದ್ದಳೆಯನ್ನು ಖರೀದಿಸಿದ್ದು, ಅವರು ಮದ್ದಳೆ ನುಡಿಸುವ ಸಣ್ಣ ಕ್ಲಿಪ್ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬಡಗುತಿಟ್ಟುವಿನ ಮದ್ದಳೆಗಾರ ಅನಂತ ಪದ್ಮನಾಭ ಪಟಾಕ್ ಸುಧಾರಿತ ಮಾದರಿಯ ಸಿಂಥೆಟಿಕ್ ಮದ್ದಳೆಯನ್ನು ಖರೀದಿಸಿ ನುಡಿಸುವುದನ್ನು ನೋಡಬಹುದು.
ಇದನ್ನೂ ಓದಿ : RCB ಪರ ಮೋದಿ, CSK ಪರ ಅಮಿತ್ ಶಾ, ರಾಹುಲ್ ಗಾಂಧಿ ಯಾರ ಪರ? ಹೇಗಿದೆ ನೋಡಿ ರಾಜಕಾರಣಿಗಳ ಐಪಿಎಲ್ ತಂಡ
“ಬಡಗು ತಿಟ್ಟಿನ ಮದ್ದಳೆಯ ಮುಚ್ಚಿಗೆಗೆ ಚರ್ಮ ಹಾಗೂ ಮರ ಅಲಭ್ಯತೆಯಿದೆ. ಚರ್ಮ ಹಾಗೂ ಮರ ಸಿಕ್ಕಿದರೂ ಕಾನೂನಿನ ತೊಡಕು ಇದೆ. ಈ ಕಾರಣದಿಂದಾಗಿ ಪರ್ಯಾಯ ಯೋಚನೆಯನ್ನು ಮಾಡಲೇಬೇಕಾಗಿದೆ. ಈ ಬಗ್ಗೆ ಯೋಚಿಸುತ್ತಿದ್ದಾಗ ಬೆಂಗಳೂರಿನ ಕಾರುಣ್ಯ ಮ್ಯೂಸಿಕಲ್ಸ್ ನ ಡಾ ವರದರಂಗನ್ ಅವರ ಪರಿಚಯವಾಯಿತು. ಸುಮಾರು ಏಳರಿಂದ ಎಂಟು ತಿಂಗಳ ಅವರ ನಿರಂತರ ಸಂಪರ್ಕದಲ್ಲಿ ನಾನಿದ್ದು ನಮ್ಮ ಒಂದು ಮದ್ದಳೆಯನ್ನು ಕೂಡ ಅಲ್ಲಿಯೇ ಬಿಟ್ಟಿದ್ದೆ. ನಮ್ಮ ವಿದ್ಯಾರ್ಥಿ ಚಿನ್ಮಯ್ ಸುಮಾರು ಹನ್ನೆರಡು ಬಾರಿ ಇವರು ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಸಲಹೆ ಸೂಚನೆಗಳನ್ನು ಕೊಟ್ಟಿದ್ದು, ಆ ಆಧಾರದ ಮೇಲೆಯೇ ಅವರು ಕೆಲಸ ಮಾಡುತ್ತಾ ಮಾಡುತ್ತಾ ಈ ಹಂತವನ್ನು ತಲುಪಿದೆ. ಹುಡುಕಾಟ ಎನ್ನುವುದು ನಿರಂತರ. ಈ ಸುಧಾರಿತ ಮದ್ದಳೆಯೂ ಭಾರವಿಲ್ಲದ ಕಾರಣ ಸುಲಭವಾಗಿ ಎಲ್ಲೆಡೆ ಕೊಂಡೊಯ್ಯಬಹುದು“
ಬಡಗುತಿಟ್ಟುವಿನ ಮದ್ದಳೆಗಾರ ಅನಂತ ಪದ್ಮನಾಭ ಫಾಟಕ್ |
ಈ ವಿಡಿಯೋ ಈಗಾಗಲೇ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸ್ವತಃ ಮದ್ದಳೆಗಾರ ಅನಂತಪದ್ಮನಾಭ ಫಾಟಕ್ ಅವರೇ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ‘ಸುಮಾರು ಒಂದು ವರ್ಷದ ನಿಮ್ಮ ಪರಿಶ್ರಮಕ್ಕೆ ಇಂದು ಫಲ ದೊರಕಿತು ಸರ್. ನನಗೂ ತುಂಬಾ ಸಂತೋಷದ ದಿನ. ಧನ್ಯವಾದಗಳು’ ಎಂದಿದ್ದಾರೆ. ಮತ್ತೊಬ್ಬರು, ‘ಶುಭಾಶಯಗಳನ್ನು’ ತಿಳಿಸಿದ್ದಾರೆ. ಮತ್ತೊರ್ವರು, ‘ಸರ್ ಚಾಲ್ತಿಯಲ್ಲಿರುವ ಮದ್ದಳೆಗೆ ಹಾಗೂ ಇದಕ್ಕೆ ಏನಾದ್ರೂ ವ್ಯತ್ಯಾಸ ಇದೆಯಾ’ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Tue, 15 April 25