ನನ್ನ ಗಂಡ ದೇವಸ್ಥಾನಕ್ಕೆ ಮಾತ್ರ ಹೋಗ್ತಾನೆ, ಆತನಿಗೆ ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
ಕೇರಳದಲ್ಲಿ, ಮಹಿಳೆಯೊಬ್ಬರು ಪತಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲಎಂದು ಹೇಳಿ ವಿಚ್ಛೇದನ ಪ್ರಕರಣ ದಾಖಲಿಸಿದ್ದರು. ತನ್ನ ಪತಿ ದಿನವಿಡೀ ಪ್ರಾರ್ಥನೆ ಮತ್ತು ಪೂಜೆಯಲ್ಲಿ ನಿರತನಾಗಿರುತ್ತಾನೆ, ಯಾವಾಗ ನೋಡಿದ್ರೂ ದೇವಸ್ಥಾನಕ್ಕೆ ಮಾತ್ರ ಹೋಗುತ್ತಾನೆ, ನನಗೂ ಕೂಡಾ ಆಧ್ಯಾತ್ಮಿಕತೆಯತ್ತ ಒಲವನ್ನು ತೋರು ಎಂದು ಒತ್ತಾಯಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದರು. ಇದೀಗ ಹೈ ಕೋರ್ಟ್ ವಿಚ್ಛೇದನ ಮಂಜೂರು ಮಾಡಿ, ಈ ಕೇಸ್ಗೆ ಸಂಬಂಧಪಟ್ಟಂತೆ ವಿಶೇಷವಾದ ತೀರ್ಪನ್ನುಕೂಡ ನೀಡಿದೆ.

ಕೇರಳ, ಏ. 01: ಕೌಟುಂಬಿಕ ಕಲಹ ಸೇರಿದಂತೆ ಹಲವಾರು ಕಾರಣಗಳಿಗೆ ದಂಪತಿಗಳು (Couples) ಕೋರ್ಟ್ ಮೇಟ್ಟಿಲೇರುವ ಸುದ್ದಿಗಳು ಈಗಂತೂ ಪ್ರತಿನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಇತ್ತೀಚಿಗೆ ಅಂತಹದ್ದೇ ಪ್ರಕರಣವೊಂದು ನಡೆದಿದ್ದು, ಕೇರಳ (Kerala) ಮೂಲದ ಮಹಿಳೆಯೊಬ್ಬರು ತನ್ನ ಗಂಡನಿಗೆ (husband) ದೈಹಿಕ ಸಂಪರ್ಕದಲ್ಲಿ (physical relationship) ಆಸಕ್ತಿಯೇ ಇಲ್ಲ ಎಂದು ಆರೋಪಿಸಿ ಕೇಸ್ ದಾಖಲಿಸಿದ್ದರು. ಆತ ಹೆಚ್ಚು ಹೊತ್ತು ಪೂಜೆ ಪುನಸ್ಕಾರದಲ್ಲಿಯೇ ನಿರತನಾಗಿರುತ್ತಾನೆ, ಯಾವಾಗ ನೋಡಿದ್ರೂ ದೇವಸ್ಥಾನ, ಮಂದಿರ ಅಂತ ಸುತ್ತುತ್ತಿರುತ್ತಾರೆ. ಅಷ್ಟೇ ಅಲ್ಲದೆ ಆಧ್ಯಾತ್ಮಿಕತೆಯನ್ನು ಮೈಗೂಡಿಸಿಕೋ ಎಂದು ನನಗೂ ಒತ್ತಾಯಿಸುತ್ತಾನೆ ಎಂದು ಮಹಿಳೆ ತನ್ನ ಗಂಡನ ವಿರುದ್ಧ ಆರೋಪ ಮಾಡಿದ್ದರು. ಇದೀಗ ಕೇರಳದ ಹೈ ಕೋರ್ಟ್ (high court) ವಿಚ್ಛೇದನ (divorce) ಮಂಜೂರು ಮಾಡಿ, ಈ ವಿಶಿಷ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಪನ್ನು ನೀಡಿದೆ.
ನ್ಯಾಯಾಲಯ ಕೊಟ್ಟ ತೀರ್ಪೇನು?
ಬಾರ್ ಅಂಡ್ ಬೆಂಚ್’ ವರದಿಯ ಪ್ರಕಾರ, ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಎಂ.ಬಿ. ಸ್ನೇಹಲತಾ ಅವರ ಪೀಠವು ಈ ಪ್ರಕರಣದ ಕುರಿತಾದ ತೀರ್ಪಿನಲ್ಲಿ, ‘ಮದುವೆಯು ಒಬ್ಬ ವ್ಯಕ್ತಿಗೆ ತನ್ನ ಸಂಗಾತಿಯ ವೈಯಕ್ತಿಕ ನಂಬಿಕೆಗಳನ್ನು, ಅದು ಆಧ್ಯಾತ್ಮಿಕವಾಗಿರಲಿ ಅಥವಾ ಬೇರೆಯದೇ ಆಗಿರಲಿ ಅದನ್ನು ನಿರ್ಧರಿಸುವ ಹಕ್ಕನ್ನು ನೀಡುವುದಿಲ್ಲ’ ಎಂದು ಹೇಳಿದೆ. ಜೊತೆಗೆ ಲೈಂಗಿಕತೆಯ ಬಗ್ಗೆ ನಿರಾಸಕ್ತಿ, ಹೆಂಡತಿಯನ್ನು ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸುವುದು ಮತ್ತು ಅವಳಿಗೆ ಭಾವನಾತ್ಮಕವಾಗಿ ಕಿರುಕುಳ ನೀಡುವುದು ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಹೇಳಿದೆ.
ಏನಿದು ಪ್ರಕರಣ?
2016 ರಲ್ಲಿ ಮದುವೆಯಾದ ಈ ಜೋಡಿಯ ನಡುವೆ ಕೆಲ ಸಮಯದ ಬಳಿಕ ಮನಸ್ತಾಪಗಳು ತಲೆ ದೂರಿವೆ. ಗಂಡನ ಅತಿಯಾದ ಧಾರ್ಮಿಕ ಆಚರಣೆಗಳಿಂದಾಗಿ ಇದೆಲ್ಲವೂ ಸಂಭವಿಸಿದೆ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ. ತನ್ನ ಪತಿಗೆ ಲೈಂಗಿಕ ಕ್ರಿಯೆಯಲ್ಲಿ ಅಥವಾ ಮಕ್ಕಳನ್ನು ಹೊಂದುವಲ್ಲಿ ಯಾವುದೇ ಆಸಕ್ತಿ ಇಲ್ಲ. ಕಚೇರಿಯಿಂದ ಹಿಂತಿರುಗಿದ ನಂತರ ಆತ ದೇವಸ್ಥಾನ, ಮಂದಿರಗಳಿಗೆ ಮಾತ್ರ ಭೇಟಿ ನೀಡುತ್ತಿದ್ದ. ಜೊತೆಗೆ ನನಗೂ ಆಧ್ಯಾತ್ಮಿಕತೆಯತ್ತ ಒಲವನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದನು ಎಂದು ಆರೋಪಿಸಿದ್ದಾರೆ.
ಮಹಿಳೆ ಮೊದಲು 2019 ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಆದರೆ ನಂತರ ಅವರ ಪತಿ ತನ್ನ ನಡವಳಿಕೆಯನ್ನು ಬದಲಾಯಿಸುವುದಾಗಿ ಭರವಸೆ ನೀಡಿದ ನಂತರ ಅರ್ಜಿಯನ್ನು ಹಿಂತೆಗೆದುಕೊಂಡರು. ಆದರೆ ಗಂಡನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡು ಬಾರದಿದ್ದನ್ನು ಕಂಡು ಆ ಮಹಿಳೆ 2022 ರಲ್ಲಿ ಮತ್ತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಮತ್ತು ತನ್ನ ಗಂಡನ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿಕೊಂಡರು. ಈ ದೂರಿನ ಆಧಾರದ ಮೇಲೆ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿತು.
ಇದನ್ನೂ ಓದಿ: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ?
ಇದಾದ ಬಳಿಕ ತನ್ನ ಮೇಲಿನ ಆರೋಪವನ್ನು ನಿರಾಕರಿಸಿ, ʼಆಕೆ ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾಳೆʼ ಎಂದು ಪತಿ ಕೇರಳದ ಹೈ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾನೆ. ಇದೀಗ ಎರಡೂ ಕಡೆಯವರ ವಾದ ಆಲಿಸಿದ ನಂತರ, ನ್ಯಾಯಾಲಯವು ಮಹಿಳೆಯ ವಿಚ್ಛೇದನ ಆದೇಶವನ್ನು ಎತ್ತಿಹಿಡಿದಿದು, ಕುಟುಂಬ ಜೀವನದಲ್ಲಿ ಗಂಡನಿಗಿರುವ ನಿರಾಸಕ್ತಿಯು ಅವನು ತನ್ನ ವೈವಾಹಿಕ ಜೀವನದ ಕರ್ತವ್ಯಗಳನ್ನು ಪೂರೈಸುವಲ್ಲಿ ವಿಫಲನಾಗಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:20 am, Wed, 2 April 25