
ಉತ್ತರ ಪ್ರದೇಶ, ಮಾ.07: ಸಾಮಾನ್ಯವಾಗಿ ಪಟ್ಟಣ, ನಗರ ಪ್ರದೇಶಗಳಲ್ಲಿ ಬೀಡಾಡಿ ದನ, ಬೀದಿ ನಾಯಿಗಳ ಹಾವಳಿ ತುಸು ಹೆಚ್ಚೇ ಇರುತ್ತದೆ. ಇವುಗಳ ಕಾಟಕ್ಕೆ ಪಾದಚಾರಿಗಳು ಸೇರಿದಂತೆ ವಾಹನ ಸವಾರರು ಪರದಾಡುತ್ತಾರೆ. ಹೌದು ಇವುಗಳು ರಸ್ತೆಯ ಮಧ್ಯೆ ಮಲಗುವ ಮೂಲಕ ಸಂಚಾರಕ್ಕೂ ಅಡ್ಡಿ ಉಂಟು ಮಾಡುವುದು ಮಾತ್ರವಲ್ಲದೆ ಅಂಗಡಿ ಮುಂಗಟ್ಟುಗಳ ಬಳಿ ವ್ಯಾಪಾರಸ್ಥರಿಗೂ ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಆದ್ರೆ ಇಲ್ಲೊಂದು ಕಡೆ ಬೀಡಾಡಿ ದನದ ಕಾಟಕ್ಕೆ ರೈತರೊಬ್ಬರ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ವೃದ್ಧ ರೈತ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಮಾರುಕಟ್ಟೆಗೆ ಬಂದಿದ್ದ ಸಂದರ್ಭದಲ್ಲಿ ಮದವೇರಿದ ಹೋರಿ ಬಂದು ಗುದ್ದಿದ್ದು, ಈ ಆಘಾತಕಾರಿ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹೋರಿ ಗುದ್ದಿದ ಪರಿಣಾಮ ರೈತ ಅಬ್ದುಲ್ ವಾಹಿದ್ ಸಾವನ್ನಪ್ಪಿದ್ದಾರೆ. ಮಾರ್ಚ್ 6 ರಂದು ಬೆಳಗ್ಗೆ 11.45 ರ ಸುಮಾರಿಗೆ ಅವರು ರಾಜಾಪುರದ ಮಾರುಕಟ್ಟೆಗೆ ತರಕಾರಿ ಕೊಳ್ಳಲು ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹಸುವಿನೊಂದು ಮಿಲನವಾಗಲು ಹೋಗಿ ಬೀಡಾಡಿ ಹೋರಿಯೊಂದು ರೈತ ಅಬ್ದುಲ್ ವಾಹಿದ್ಗೆ ಗುದ್ದಿದೆ. ಹೋರಿಯ ಹೊಡೆತಕ್ಕೆ ಸಿಕ್ಕಿದ ವಾಹಿದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
उत्तर प्रदेश के जिला लखीमपुर खीरी में 2 सांडों की लड़ाई में किसान अब्दुल वाहिद की मौत हो गई !! pic.twitter.com/ElohyvhSaC
— Sachin Gupta (@SachinGuptaUP) March 6, 2025
ಸಚಿನ್ ಗುಪ್ತಾ (SachinGuptaUP) ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಾರುಕಟ್ಟೆಯ ಒಂದು ಕಡೆಯಲ್ಲಿ ಜನ ತರಕಾರಿ ಕೊಳ್ಳುವುದರಲ್ಲಿ ನಿರತರಾಗಿರುವ ಹಾಗೂ ಇನ್ನೊಂದು ಕಡೆ ಬೀಡಾಡಿ ದನಗಳ ಗುಂಪೊಂದು ಎಸೆದ ತರಕಾರಿಗಳನ್ನು ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಅಲ್ಲಿದ್ದ ಬೀಡಾಡಿ ಹೋರಿ ಹಸುವಿನೊಂದಿಗೆ ಮಿಲನವಾಗಲು ಹೋಗಿ ವೃದ್ಧರೊಬ್ಬರಿಗೆ ಗುದ್ದಿದೆ.
ಮಾರ್ಚ್ 06 ರಂದು ಶೇರ್ ಮಾಡಲಾದ ಈ ವಿಡಿಯೋ 2.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯ ತುಂಬಾ ದುಃಖಕರವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬೀಡಾಡಿ ದನಗಳ ಹಾವಳಿಯನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲʼ ಎಂದು ಕಿಡಿ ಕಾರಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ