ಕಣ್ಣಿಲ್ಲದವಳಿಗೆ ಕಿವಿ ಕೇಳದವನೇ ದಾರಿ: ಊಬರ್ ಚಾಲಕ ಮತ್ತು ಪ್ರಯಾಣಿಕರ ನಡುವಿನ ಸಂವಹನ ಕಂಡು ಜಗತ್ತೇ ಫಿದಾ

ಇದು ಕೇವಲ ಪ್ರಯಾಣವಲ್ಲ, ಭಾಷೆ ಮೀರಿದ ಮೌನ ಸಂವಾದದ ಕಥೆ. ದೃಷ್ಟಿಹೀನ ಪ್ರಯಾಣಿಕರು, ಶ್ರವಣದೋಷವುಳ್ಳ ಊಬರ್ ಚಾಲಕರ ನಡುವಿನ ಹೃದಯಸ್ಪರ್ಶಿ ಸಂವಹನ ಜಗತ್ತಿನ ಗಮನ ಸೆಳೆದಿದೆ. ಸವಾಲುಗಳನ್ನು ಮೀರಿ, ಮಾನವೀಯತೆ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಇಬ್ಬರೂ ಪಯಣ ಪೂರೈಸಿದ ರೀತಿ ವೈರಲ್ ಆಗಿದ್ದು, ಯಾವುದೇ ಅಂಗವೈಕಲ್ಯ ಪ್ರೀತಿಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ತೋರಿಸಿದೆ.

ಕಣ್ಣಿಲ್ಲದವಳಿಗೆ ಕಿವಿ ಕೇಳದವನೇ ದಾರಿ: ಊಬರ್ ಚಾಲಕ ಮತ್ತು ಪ್ರಯಾಣಿಕರ ನಡುವಿನ ಸಂವಹನ ಕಂಡು ಜಗತ್ತೇ ಫಿದಾ
ಸಾಂದರ್ಭಿಕ ಚಿತ್ರ
Image Credit source: Google Gemini

Updated on: Apr 09, 2026 | 9:48 AM

ಇದು ಕೇವಲ ಒಂದು ಪ್ರಯಾಣದ ಕತೆಯಲ್ಲ, ಭಾಷೆ ಮತ್ತು ಶಬ್ದಗಳನ್ನು ಮೀರಿದ ಎರಡು ಮನಸ್ಸುಗಳ ನಡುವಿನ ಮೌನ ಸಂವಾದ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಹೃದಯಸ್ಪರ್ಶಿ ಕಥೆ ‘ಮಾನವೀಯತೆ’ ಎನ್ನುವುದು ದೃಷ್ಟಿ ಅಥವಾ ಶ್ರವಣದ ಶಕ್ತಿಯ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ದೃಷ್ಟಿದೋಷವುಳ್ಳ ಪ್ರಯಾಣಿಕರೊಬ್ಬರು ಊಬರ್(Uber) ಬುಕ್ ಮಾಡಿದಾಗ ಅವರಿಗೆ ಸಿಕ್ಕ ಚಾಲಕ ಶ್ರವಣದೋಷವುಳ್ಳವರಾಗಿದ್ದರು. ಒಬ್ಬರಿಗೆ ದಾರಿ ಕಾಣಿಸುತ್ತಿರಲಿಲ್ಲ, ಇನ್ನೊಬ್ಬರಿಗೆ ಶಬ್ದ ಕೇಳಿಸುತ್ತಿರಲಿಲ್ಲ.

ಆದರೆ ಇವರಿಬ್ಬರು ತಮ್ಮ ನಡುವಿನ ಸವಾಲುಗಳನ್ನು ಮೀರಿ, ಅತ್ಯಂತ ಪ್ರೀತಿಯಿಂದ ಸಂವಹನ ನಡೆಸಿ ಪ್ರಯಾಣ ಪೂರೈಸಿದ ರೀತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾನವೀಯತೆಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಐಶ್ವರ್ಯ ಟಿವಿ ಪಿಳ್ಳೈ ಅವರು ತಮ್ಮ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಈ ಅನುಭವ, ಓದುಗರ ಕಣ್ಣಾಲಿಗಳನ್ನು ಒದ್ದೆ ಮಾಡುವುದರ ಜೊತೆಗೆ ಮುಖದಲ್ಲಿ ನಗು ಮೂಡಿಸುತ್ತದೆ.

ಆ ಒಂದು ಕುತೂಹಲದ ನಿರ್ಧಾರ
ಐಶ್ವರ್ಯ ಅವರು ಅಂದು ಎಂದಿನಂತೆ ಊಬರ್ ರೈಡ್ ಬುಕ್ ಮಾಡಿದ್ದರು. ರೈಡ್ ದೃಢಪಟ್ಟಾಗ ಅವರಿಗೆ ಒಂದು ವಿಷಯ ತಿಳಿಯಿತು, ತಮ್ಮನ್ನು ಕರೆದೊಯ್ಯಲು ಬರುತ್ತಿರುವ ಚಾಲಕನಿಗೆ ಶ್ರವಣದೋಷವಿದೆ ಎಂಬುದು. ಐಶ್ವರ್ಯ ಅವರಿಗೆ ಒಂದು ಕ್ಷಣ ತಮಾಷೆ ಎನಿಸಿತು, ಏಕೆಂದರೆ ಸ್ವತಃ ಅವರೂ ದೃಷ್ಟಿಹೀನರಾಗಿದ್ದರು.

ಮತ್ತಷ್ಟು ಓದಿ: ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?

ಶ್ರವಣದೋಷವುಳ್ಳ ಚಾಲಕ ಮತ್ತು ದೃಷ್ಟಿದೋಷವುಳ್ಳ ಪ್ರಯಾಣಿಕ ಈ ಜೋಡಿಯ ಪಯಣ ಹೇಗಿರುತ್ತೆ?” ಎಂಬ ಕುತೂಹಲದಲ್ಲಿ ಐಶ್ವರ್ಯ ರೈಡ್ ರದ್ದುಗೊಳಿಸದೆ, ಏನಾಗುತ್ತದೋ ನೋಡೋಣ ಎಂದು ಕಾಯುತ್ತಾ ನಿಂತರು. ಕ್ಯಾಬ್ ಬಂದಿತು. ಐಶ್ವರ್ಯ ತಮ್ಮ ಬಿಳಿ ಸ್ಟಿಕ್ ಸಹಾಯದಿಂದ ಆತ್ಮವಿಶ್ವಾಸದಿಂದ ಕಾರಿನೊಳಗೆ ಕುಳಿತರು. ಚಾಲಕನಿಗೆ ತನ್ನ ಪ್ರಯಾಣಿಕರಿಗೆ ಕಣ್ಣು ಕಾಣಿಸುವುದಿಲ್ಲ ಎಂಬುದು ಅರಿವಾಯಿತು. ಐಶ್ವರ್ಯ ಅವರಿಗೆ ಚಾಲಕನಿಗೆ ಕಿವಿ ಕೇಳಿಸುವುದಿಲ್ಲ ಎಂಬುದು ಗೊತ್ತಿತ್ತು.

ಐಶ್ವರ್ಯ ತಮ್ಮ ಫೋನ್‌ನಲ್ಲಿ OTP ಟೈಪ್ ಮಾಡಿ, ಬೆರಳುಗಳ ಮೂಲಕ ಚಾಲಕನಿಗೆ ತೋರಿಸಿದರು. ದಾರಿಯ ಮಧ್ಯೆ, “ನನ್ನನ್ನು ನಿಖರವಾಗಿ ಪ್ರವೇಶದ್ವಾರದಲ್ಲೇ ಬಿಡಿ” ಎಂದು ಫೋನ್ ಮೂಲಕ ಸಂದೇಶ ಕಳುಹಿಸಿದರು. ಚಾಲಕ ಆ ಸಂದೇಶವನ್ನು ಓದಿ, ಯಾವುದೇ ಗೊಂದಲವಿಲ್ಲದೆ ಸಮ್ಮತಿಸಿದರು.

ಪ್ರಯಾಣದ ಸುಂದರ ಅಂತ್ಯ
ಹೋಗಬೇಕಾದ ಜಾಗ ತಲುಪಿದಾಗ ಅಸಲಿ ಮ್ಯಾಜಿಕ್ ನಡೆಯಿತು. ಐಶ್ವರ್ಯ ಪಾವತಿ ಮುಗಿಸಿ ಕಾರಿನಿಂದ ಇಳಿದರು. ಆಗ ಚಾಲಕ ತಾನಾಗಿಯೇ ಕೆಳಗಿಳಿದು ಬಂದು, ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಕರೆದರು. ಯಾವುದೇ ಮಾತಿಲ್ಲದೆ, ಸನ್ನೆಯ ಮೂಲಕವೇ ಐಶ್ವರ್ಯ ಅವರನ್ನು ಸುರಕ್ಷಿತವಾಗಿ ಗೇಟ್​ವರೆಗೆ ತಲುಪಿಸುವಂತೆ ಸೂಚಿಸಿದರು.

ನಮ್ಮ ನಡುವೆ ಸಂಭಾಷಣೆ ಇರಲಿಲ್ಲ, ಆದರೆ ಎಲ್ಲವೂ ಅರ್ಥವಾಗುತ್ತಿತ್ತು ಎಂದು ಐಶ್ವರ್ಯ ಆ ಕ್ಷಣವನ್ನು ನೆನೆಯುತ್ತಾರೆ. ಆ ರೈಡ್‌ಗೆ ಅವರು 5 ಸ್ಟಾರ್ ರೇಟಿಂಗ್ ನೀಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:39 am, Thu, 9 April 26

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us