DC vs GT: ಸಿಂಗಲ್ ನಿರಾಕರಿಸಿದ ಮಿಲ್ಲರ್, ಕುಲ್ದೀಪ್ ಎಡವಟ್ಟು; 1 ರನ್ನಿಂದ ಸೋತ ಡೆಲ್ಲಿ
IPL 2026, GT Edges DC by 1 Run: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ IPL 2026ರ ಡೆಲ್ಲಿ ಕ್ಯಾಪಿಟಲ್ಸ್-ಗುಜರಾತ್ ಟೈಟಾನ್ಸ್ ಪಂದ್ಯವು ರೋಚಕ ತಿರುವು ಪಡೆದಿತ್ತು. ಗುಜರಾತ್ 1 ರನ್ನಿಂದ ಗೆಲುವು ಸಾಧಿಸಿತು. ಕೊನೆಯ ಓವರ್ನಲ್ಲಿ ಡೇವಿಡ್ ಮಿಲ್ಲರ್ ಸಿಂಗಲ್ ನಿರಾಕರಿಸಿದ ನಿರ್ಧಾರವೇ ಡೆಲ್ಲಿ ಸೋಲಿಗೆ ಪ್ರಮುಖ ಕಾರಣವಾಯಿತು. ಇದು ಗುಜರಾತ್ನ ಮೊದಲ ಗೆಲುವು ಮತ್ತು ಡೆಲ್ಲಿಯ ಮೊದಲ ಸೋಲಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 211 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನೀಡಿತ್ತಾದರೂ ಅದು ಸಾಧ್ಯವಾಗಲಿಲ್ಲ. ಡೆಲ್ಲಿ ಪರ ರಾಹುಲ್ 92 ರನ್ಗಳ ಇನ್ನಿಂಗ್ಸ್ ಹಾಗೂ ಕೊನೆಯಲ್ಲಿ ಡೇವಿಡ್ ಮಿಲ್ಲರ್ 41 ರನ್ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಎಡವಿದರು. ಇದು ಈ ಆವೃತ್ತಿಯಲ್ಲಿ ಡೆಲ್ಲಿ ತಂಡದ ಮೊದಲ ಸೋಲಾದರೆ, ಇತ್ತ ಗುಜರಾತ್ ತಂಡ ಈ ಸೀಸನ್ನಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ.
21 ರನ್ ನೀಡಿದ ಸಿರಾಜ್
ಈ ಪಂದ್ಯದ 18ನೇ ಓವರ್ವರೆಗೂ ಗುಜರಾತ್ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಡೆಲ್ಲಿ ಗೆಲುವಿಗೆ 12 ಎಸೆತಗಳಲ್ಲಿ 35 ರನ್ ಬೇಕಿತ್ತು. ಈ ವೇಳೆ 19ನೇ ಓವರ್ ಬೌಲ್ ಮಾಡಿದ ಸಿರಾಜ್ ಬರೋಬ್ಬರಿ 21 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ಮಿಲ್ಲರ್ 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರೆ, ವಿಪ್ರಾಜ್ 1 ಬೌಂಡರಿ ಬಾರಿಸಿದರು. ಹೀಗಾಗಿ ಕೊನೆಯ ಓವರ್ನಲ್ಲಿ ಡೆಲ್ಲಿ ಗೆಲುವಿಗೆ 14 ರನ್ ಬೇಕಿತ್ತು.
20ನೇ ಓವರ್ ರೋಚಕತೆ
20ನೇ ಓವರ್ ಎಸೆದ ಪ್ರಸಿದ್ಧ್ ಕೃಷ್ಣ ಅವರ ಮೊದಲ ಎಸೆತವನ್ನು ವಿಪ್ರಾಜ್ ಬೌಂಡರಿಗಟ್ಟಿದರು. ಆದರೆ ಮುಂದಿನ ಎಸೆತದಲ್ಲಿಯೇ ವಿಪ್ರಜ್ ನಿಗಮ್ ಔಟಾದರು. ನಂತರ ಬಂದ ಕುಲ್ದೀಪ್ ಯಾದವ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಸ್ಟ್ರೈಕ್ಗೆ ಬಂದ ಮಿಲ್ಲರ್ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಹೀಗಾಗಿ ದೆಹಲಿ ಗೆಲುವಿಗೆ ಎರಡು ರನ್ಗಳ ಅಗತ್ಯವಿತ್ತು. ಐದನೇ ಎಸೆತದಲ್ಲಿ ಮಿಲ್ಲರ್ ಬಿಗ್ ಶಾಟ್ ಹೊಡೆಯಲು ಯತ್ನಿಸಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಇಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿತ್ತು, ಆದರೆ ಮಿಲ್ಲರ್ ಸಿಂಗಲ್ ನಿರಾಕರಿಸಿದರು. ಒಂದು ವೇಳೆ ಮಿಲ್ಲರ್ ಸಿಂಗಲ್ ತೆಗೆದುಕೊಂಡಿದ್ದರೆ, ಪಂದ್ಯ ಟೈ ಆಗುತ್ತಿತ್ತು.
ಇದರಿಂದ ಫಲಿತಾಂಶ ನಿರ್ಣಹಿಸಲು ಸೂಪರ್ ಓವರ್ ಆಡಬೇಕಿತ್ತು. ಆದರೆ ಮಿಲ್ಲರ್ ಸಿಂಗಲ್ ನಿರಾಕರಿಸಿದ್ದು, ಡೆಲ್ಲಿ ಸೋಲಿಗೆ ಪ್ರಮುಖ ಕಾರಣವಾಯಿತು. ಉಳಿದಂತೆ ಆರನೇ ಎಸೆತದಲ್ಲಿ ಮಿಲ್ಲರ್ಗೆ ರನ್ ಗಳಿಸಲು ಆಗಲಿಲ್ಲ. ಚೆಂಡು ನೇರವಾಗಿ ಕೀಪರ್ ಕೈಗೆ ಹೋಯಿತು. ಕೀಪರ್ ಬಟ್ಲರ್ ಚೆಂಡನ್ನು ಹಿಡಿದು ವಿಕೆಟ್ಗೆ ಹೊಡದರು, ಇತ್ತ ನಾನ್ ಸ್ಟ್ರೈಕ್ನಲ್ಲಿದ್ದ ಕುಲ್ದೀಪ್ ಯಾದವ್ ತಮ್ಮ ಅಜಾಗರೂಕತೆಯಿಂದ ರನೌಟ್ ಆದರು. ಇದರಿಂದಾಗಿ ಗುಜರಾತ್ ಒಂದು ರನ್ನಿಂದ ಪಂದ್ಯವನ್ನು ಗೆದ್ದುಕೊಂಡಿತು.

