AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ

ಸಚಿನ್ ಕ್ರಿಕೆಟ್ ದೇವರಾದರೆ, ವೈಭವ್ ದೇವರ ಮಗ ಎಂದ ಟೀಂ ಇಂಡಿಯಾದ ಮಾಜಿ ನಾಯಕ

ಪೃಥ್ವಿಶಂಕರ
|

Updated on: Jun 18, 2026 | 8:45 PM

Share

Vaibhav Sooryavanshi: ಕೃಷ್ಣಮಾಚಾರಿ ಶ್ರೀಕಾಂತ್, 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು 'ದೇವರ ಮಗ' ಎಂದು ಬಣ್ಣಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್, ಶಾಂತ ಮನಸ್ಥಿತಿ ಮತ್ತು ಅಸಾಧಾರಣ ದಾಖಲೆಗಳನ್ನು ಪ್ರಶಂಸಿಸಿ, ವೈಭವ್ ಭಾರತೀಯ ಕ್ರಿಕೆಟ್‌ನ ಉಜ್ವಲ ಭವಿಷ್ಯ ಎಂದಿದ್ದಾರೆ. ಆದರೆ, ಸಚಿನ್‌ನಂತಹ ಶ್ರೇಷ್ಠ ಆಟಗಾರರೊಂದಿಗೆ ಹೋಲಿಸಿ ಅನಗತ್ಯ ಒತ್ತಡ ಹೇರಬಾರದು, ಅವರು ಸ್ವಾಭಾವಿಕವಾಗಿ ಬೆಳೆಯಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ಈಗ ಚರ್ಚೆಯಲ್ಲಿರುವ ಹೆಸರೆಂದರೆ ಅದು 15 ವರ್ಷದ ವೈಭವ್ ಸೂರ್ಯವಂಶಿ. ತನ್ನ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಅವರನ್ನು ಗುಣಗಾನ ಮಾಡದವರಿಲ್ಲ. ಇದೀಗ ಅಂತಹವರ ಸಾಲಿಗೆ ಭಾರತದ ಮಾಜಿ ನಾಯಕ ಮತ್ತು ಮಾಜಿ ಮುಖ್ಯ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ಕೂಡ ಸೇರಿದ್ದಾರೆ. ವೈಭವ್ ಬಗ್ಗೆ ಪಿಟಿಐ ಜೊತೆ ಮಾತನಾಡಿರುವ ಶ್ರೀಕಾಂತ್, ‘ವಿಭಿನ್ನ ಯುಗಗಳ ಆಟಗಾರರನ್ನು ಹೋಲಿಸುವುದು ಸರಿಯಲ್ಲ. ದಯವಿಟ್ಟು ಸಚಿನ್ ಅವರನ್ನು ವೈಭವ್ ಜೊತೆ ಹೋಲಿಸಬೇಡಿ. ಸಚಿನ್ ಕ್ರಿಕೆಟ್ ದೇವರು. ಆ ದೇವರಿಗೆ ಯಾರನ್ನು ಹೋಲಿಸಲು ಸಾಧ್ಯವಿಲ್ಲ. ಆದರೆ ನಾನು ಈ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಯನ್ನು ನೋಡಿದಾಗ, ಅವನು ಆ ದೇವರ ಮಗನಂತೆ ಕಾಣುತ್ತಾನೆ.

ಐಪಿಎಲ್ ಮತ್ತು 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ದಾಖಲೆಗಳು ಅಸಾಧಾರಣವಾಗಿವೆ. ಈ ಎಡಗೈ ಬ್ಯಾಟ್ಸ್‌ಮನ್ ಮೈದಾನದಲ್ಲಿ ಶಾಟ್‌ಗಳನ್ನು ಆಡುವ ರೀತಿ ಅದ್ಭುತವಾಗಿದೆ. ವೈಭವ್ ಅವರ ಮಣಿಕಟ್ಟಿನ ವೇಗ, ಬ್ಯಾಟ್ ವೇಗ ಮತ್ತು ಬ್ಯಾಟ್ ಸ್ವಿಂಗ್ ಅದ್ಭುತವಾಗಿದೆ. ವೈಭವ್ ಅವರ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅವರು ಎಷ್ಟೇ ಭಯಾನಕ ಬೌಲರ್ ಬಂದರೂ ಕ್ರೀಸ್‌ನಲ್ಲಿ ತುಂಬಾ ಶಾಂತ ಮನಸ್ಥಿತಿಯೊಂದಿಗೆ ನಿಲ್ಲುತ್ತಾರೆ.

ಇನ್ನು ಇದೇ ವೇಳೆ ಐಪಿಎಲ್ 2026 ರ ಅರ್ಹತಾ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಅವರ ಇನ್ನಿಂಗ್ಸ್ ಅನ್ನು ಶೇಷವಾಗಿ ನೆನಪಿಸಿಕೊಂಡ ಶ್ರೀಕಾಂತ್, ‘ಆ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಒತ್ತಡದಲ್ಲಿದ್ದರೂ, 15 ವರ್ಷದ ವೈಭವ್ 96 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಸಾಮಾನ್ಯವಾಗಿ ಇನ್ನಿಂಗ್ಸ್‌ನ ಮೊದಲ ಎಸೆತದಿಂದಲೇ ಔಟ್ ಆಗುವ ಅಭ್ಯಾಸ ಹೊಂದಿರುವ ವೈಭವ್, ಆ ಪಂದ್ಯದಲ್ಲಿ ತಂಡದ ಅಗತ್ಯಗಳಿಗಾಗಿ ಬಹಳ ತಾಳ್ಮೆಯಿಂದ ಆಡಿದರು.

ವೈಭವ್ ಸೂರ್ಯವಂಶಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವಿದೆ ಎಂದಿರುವ ಶ್ರೀಕಾಂತ್, ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಅವರ ಮೇಲೆ ಅನಗತ್ಯ ನಿರೀಕ್ಷೆಗಳನ್ನು ಹಾಕಬೇಡಿ ಮತ್ತು ಅವರನ್ನು ಇತರ ಆಟಗಾರರೊಂದಿಗೆ ಹೋಲಿಸುವ ಮೂಲಕ ಒತ್ತಡವನ್ನು ಹೆಚ್ಚಿಸಬೇಡಿ ಎಂದು ಸಲಹೆ ನೀಡಿದರು. ‘ವೈಭವ್ ಅವರನ್ನು ಯಾರೊಂದಿಗೂ ಹೋಲಿಸಬೇಡಿ. ಅವರು ಯಾವುದೇ ಒತ್ತಡವಿಲ್ಲದೆ ಸ್ವಾಭಾವಿಕವಾಗಿ ಬೆಳೆಯಲು ಮತ್ತು ಅವರು ಇಷ್ಟಪಡುವ ರೀತಿಯಲ್ಲಿ ಮುಕ್ತವಾಗಿ ಆಡಲು ನಾವು ಅವರನ್ನು ಪ್ರೋತ್ಸಾಹಿಸಬೇಕಾಗಿದೆ. ಈ ಮಗು ದೇಶಕ್ಕೆ ಅನೇಕ ಯಶಸ್ಸನ್ನು ತರುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us