ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ಭೀಕರ ದಾಳಿ; 4 ಭಾರತೀಯರ ಸಾವು

ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಪರಸ್ಪರ ದಾಳಿಗಳು ಮುಂದುವರಿದಿರುವ ಬೆನ್ನಲ್ಲೇ, ಉಕ್ರೇನ್‌ನ ಒಡೆಸ್ಸಾ ಬಂದರಿನ ಸಮೀಪ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಭಾರತೀಯ ಪ್ರಜೆಗಳು ದುರಂತವಾಗಿ ಮೃತಪಟ್ಟಿದ್ದಾರೆ. ಈ ಘಟನೆಯನ್ನು ಭಾರತ ಸರ್ಕಾರ ಖಂಡಿಸಿದೆ. ದಾಳಿಗೊಳಗಾದ ಹಡಗನ್ನು 'ಎಮ್.ವಿ. ಗೋಲ್ಡನ್ ಲಿಯೋ' ಎಂದು ಗುರುತಿಸಲಾಗಿದೆ. ಈ ಘಟನೆಯ ಸಮಯದಲ್ಲಿ ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದರು. ಅವರಲ್ಲಿ ಐವರು ಭಾರತೀಯರಾಗಿದ್ದರು.

ಉಕ್ರೇನ್‌ನ ಒಡೆಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ಭೀಕರ ದಾಳಿ; 4 ಭಾರತೀಯರ ಸಾವು
Attack On Vessel Near Ukraines Odesa
Image Credit source: x

Updated on: Jul 20, 2026 | 9:52 PM

ಮುಖ್ಯಾಂಶಗಳು

  • ಉಕ್ರೇನ್​ನ ಒಡಿಸ್ಸಾ ಬಂದರಿನಲ್ಲಿ ಹಡಗಿನ ಮೇಲೆ ದಾಳಿ
  • ಹಡಗಿನಲ್ಲಿದ್ದ ನಾಲ್ವರು ಭಾರತೀಯ ನಾವಿಕರು ಸಾವು
  • ಹಡಗಿನ ಮೇಲಿನ ದಾಳಿಗೆ ಭಾರತ ಖಂಡನೆ

ಕೈವ್, ಜುಲೈ 20: ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದ್ದು, ಉಕ್ರೇನ್‌ನ (Russia-Ukraine War) ಒಡೆಸ್ಸಾ ಬಂದರಿನಲ್ಲಿ ಭೀಕರ ದಾಳಿಯೊಂದು ನಡೆದಿದೆ. ಈ ದಾಳಿಯಲ್ಲಿ ಕಮರ್ಷಿಯಲ್ ಸರಕು ಸಾಗಣೆ ಹಡಗಿನಲ್ಲಿದ್ದ 4 ಮಂದಿ ಭಾರತೀಯ ನಾವಿಕರು ಕೂಡ ಸಾವನ್ನಪ್ಪಿದ್ದಾರೆ. ಅದೇ ಹಡಗಿನಲ್ಲಿದ್ದ ಮತ್ತೊಬ್ಬ ಭಾರತೀಯ ನಾವಿಕ ತೀವ್ರವಾಗಿ ಗಾಯಗೊಂಡಿದ್ದು, ಅವರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾನುವಾರ ಸಂಜೆ ಒಡೆಸ್ಸಾ ಬಂದರಿನಿಂದ ಹೊರಡುತ್ತಿದ್ದ ವೇಳೆ ಈ ಹಡಗಿನ ಮೇಲೆ ಭೀಕರ ದಾಳಿ ನಡೆದಿದೆ ಎಂದು ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ದಾಳಿಗೊಳಗಾದ ‘ಎಮ್.ವಿ. ಗೋಲ್ಡನ್ ಲಿಯೋ’ ವಾಣಿಜ್ಯ ಹಡಗಿನಲ್ಲಿ ಒಟ್ಟು 17 ಜನ ಸಿಬ್ಬಂದಿ ಇದ್ದರು. ಇವರಲ್ಲಿ 5 ಜನ ಭಾರತೀಯ ಪ್ರಜೆಗಳಾಗಿದ್ದರು. ದಾಳಿಯ ತೀವ್ರತೆಗೆ ನಾಲ್ವರು ಭಾರತೀಯರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಐದನೇ ಭಾರತೀಯ ನಾವಿಕ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೊಳಗಾದ ಹಡಗಿನಲ್ಲಿ ಬೆಂಕಿ ಅವಘಡ; ಸಿಬ್ಬಂದಿ ರಕ್ಷಣೆ

ಭಾರತದ ಅಧಿಕೃತ ಮಾಹಿತಿ:

“ಉಕ್ರೇನ್‌ನಲ್ಲಿರುವ ನಮ್ಮ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ದಾಳಿಯಿಂದ ತೊಂದರೆಗೆ ಒಳಗಾದವರಿಗೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ರೀತಿಯ ನೆರವು ಹಾಗೂ ಆಡಳಿತಾತ್ಮಕ ಸಹಾಯವನ್ನು ಒದಗಿಸಲು ನಿರಂತರ ಶ್ರಮಿಸುತ್ತಿದೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ವಿದೇಶಾಂಗ ಸಚಿವಾಲಯವು ಮೃತರ ಕುಟುಂಬಗಳಿಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಗಾಯಗೊಂಡಿರುವ ನಾವಿಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದೆ.


ದಾಳಿಯನ್ನು ತೀವ್ರವಾಗಿ ಖಂಡಿಸಿದ ಭಾರತ:

ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಈ ಹಿಂಸಾಚಾರವನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದೆ. ನಾಗರಿಕ ಸಿಬ್ಬಂದಿ ಇರುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಮತ್ತು ಅವರ ಜೀವಕ್ಕೆ ಆಪತ್ತು ತರುವುದು ತೀವ್ರ ಖಂಡನೀಯ ಎಂದು ಭಾರತ ಹೇಳಿದೆ. ಮುಕ್ತ ಸಮುದ್ರಯಾನದ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಅಡ್ಡಿಪಡಿಸುವ ಇಂತಹ ಕೃತ್ಯಗಳು ಅತ್ಯಂತ ವಿಷಾದಕರವಾಗಿದ್ದು, ಇಂತಹ ದಾಳಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸಚಿವಾಲಯವು ತನ್ನ ಅಧಿಕೃತ ಹೇಳಿಕೆಯಲ್ಲಿ ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us