ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ

| Updated By: Skanda

Updated on: Aug 20, 2021 | 10:28 PM

ತಾಲಿಬಾನ್ ವಿರುದ್ಧ ಹೋರಾಡಿ 3 ಜಿಲ್ಲೆಗಳು ಯಶಸ್ಸು ಕಂಡ ಸುದ್ದಿ ಹೊರಬೀಳುತ್ತಲೇ ಎಲ್ಲರಲ್ಲೂ ಹೊಸ ಭರವಸೆಯ ಕಿರಣವೊಂದು ಮೂಡಿದಂತಾಗಿದ್ದು, ಅಫ್ಘಾನಿಸ್ತಾನದ ಸಮಸ್ತರಿಗೂ ತಾಲಿಬಾನಿಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಸಿಗಲಿ ಎಂದು ಆಶಿಸುವಂತಾಗಿದೆ.

ತಿರುಗಿಬಿದ್ದ ಸ್ಥಳೀಯರು, ಅಫ್ಘಾನಿಸ್ತಾನದ 3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ; ಅಚ್ಚರಿಯ ಬೆಳವಣಿಗೆ
ಸಾಂಕೇತಿಕ ಚಿತ್ರ
Follow us on

ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ ಆಶಾಕಿರಣವೆಂಬಂತೆ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಸ್ಥಳೀಯರ ಹೋರಾಟದ ಫಲವಾಗಿ 3 ಜಿಲ್ಲೆಗಳು ತಾಲಿಬಾನ್​ ಹಿಡಿತದಿಂದ ಮುಕ್ತವಾಗಿವೆ. ಬಾಗಲನ್ ಪ್ರಾಂತ್ಯದ 3 ಜಿಲ್ಲೆಗಳು ಇದೀಗ ತಾಲಿಬಾನ್ ಕೈತಪ್ಪಿದ್ದು, ಸ್ಥಳೀಯರ ಕೆಚ್ಚೆದೆಯ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ತಾಲಿಬಾನ್ ವಿರುದ್ಧ ಹೋರಾಡಿ 3 ಜಿಲ್ಲೆಗಳು ಯಶಸ್ಸು ಕಂಡ ಸುದ್ದಿ ಹೊರಬೀಳುತ್ತಲೇ ಎಲ್ಲರಲ್ಲೂ ಹೊಸ ಭರವಸೆಯ ಕಿರಣವೊಂದು ಮೂಡಿದಂತಾಗಿದ್ದು, ಅಫ್ಘಾನಿಸ್ತಾನದ ಸಮಸ್ತರಿಗೂ ತಾಲಿಬಾನಿಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಸಿಗಲಿ ಎಂದು ಆಶಿಸುವಂತಾಗಿದೆ.

ಅಫ್ಘಾನಿಸ್ತಾನದಲ್ಲಿ ಆತಂಕ ಬಿತ್ತಿರುವ ತಾಲಿಬಾನ್​ ಉಗ್ರರು ಬಾಯಲ್ಲಿ ಶಾಂತಿಯ ಮಾತುಗಳನ್ನು ಆಡುತ್ತಿದ್ದರೂ ತಮ್ಮ ಕ್ರೌರ್ಯವನ್ನು ಬಿಟ್ಟಿಲ್ಲ. ಯಾರೂ ದೇಶ ಬಿಟ್ಟು ಹೋಗಬೇಡಿ, ಮಹಿಳೆಯರಿಗೆ ತೊಂದರೆ ಮಾಡುವುದಿಲ್ಲ, ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗಿ ಎಂದೆಲ್ಲಾ ಹೇಳುವ ತಾಲಿಬಾನಿ ಉಗ್ರರು ಇಂದು ಪೊಲೀಸ್​ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹೀಗೆ ಕ್ರೌರ್ಯತೆ ಮೆರೆಯುವವರ ವಿರುದ್ಧ 3 ಜಿಲ್ಲೆಗಳ ಜನರು ತಿರುಗಿ ಬಿದ್ದಿರುವುದು ನಿಜಕ್ಕೂ ಸಾಹಸಗಾಥೆಯಾಗಿದ್ದು, ಸ್ಥಳೀಯರ ಹೋರಾಟದಿಂದಾಗಿ ಸದರಿ ಜಿಲ್ಲೆಗಳು ತಾಲಿಬಾನ್ ಹಿಡಿತದಿಂದ ಮುಕ್ತಗೊಂಡಿವೆ.

ಇಂದು ಪೊಲೀಸ್ ಇಲಾಖೆ ಮುಖ್ಯಸ್ಥ ಹಾಜಿ ಮುಲ್ಲಾನ‌ ಬರ್ಬರ ಹತ್ಯೆಗೈದಿರುವ ತಾಲಿಬಾನಿಗಳು ಬಂದೂಕಿನಿಂದ ಗುಂಡಿನ ಸುರಿಮಳೆ ಸುರಿಸಿದ್ದು, ಕೈ ಕಟ್ಟಿ, ಕಣ್ಣುಗಳಿಗೆ ಬಟ್ಟೆ ಕಟ್ಟಿ ಕೊಲೆ ಮಾಡಿದ್ದಾರೆ. ಇದು ಅವರ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದು, ಜನರು ಬೆಚ್ಚಿಬೀಳುವಂತಿದೆ. ಅಫ್ಘನ್‌ನ ಬಡಗೀಸ್ ಪ್ರಾಂತ್ಯದಲ್ಲಿ ಈ ಅಮಾನುಷ ಘಟನೆ ನಡೆದಿದ್ದು ಪೊಲೀಸ್​ ಅಧಿಕಾರಿಯ ಎರಡೂ ಕೈಗಳನ್ನು ಕಟ್ಟಿ ಹಾಕಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ಕೂರಿಸಿದ ಉಗ್ರರು ನಂತರ ಬಂದೂಕಿನಿಂದ ಹತ್ಯೆ ಮಾಡಿದ್ದಾರೆ. ಹಾಜಿ ಮುಲ್ಲಾ ಎಂಬುವವರಿಗೆ ಗುಂಡಿಕ್ಕಿರುವ ತಾಲಿಬಾನಿಗಳು ಸಾವಿನ‌ ಬಳಿಕವೂ ಗುಂಡಿನ ಸುರಿಮಳೆಗೈದಿದ್ದು, ಕ್ರೌರ್ಯತೆ ಮೆರೆದಿದ್ದಾರೆ.

ಜರ್ಮನಿಯ ಪತ್ರಕರ್ತ ಸಿಗದೇ ಇದ್ದಾಗ ಆತನ ಸಂಬಂಧಿ ಮೇಲೆ ಗುಂಡು ಹಾರಿಸಿ ಹತ್ಯೆಗೈದ ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೋರಾಟಗಾರರು ಡೊಯಿಚಿ ವೆಲ್ಲೆ (Deutsche Welle ) ಪತ್ರಕರ್ತನಿಗಾಗಿ ಹುಡುಕಾಡಿ ಆತ ಸಿಗದೇ ಇದ್ದಾಗ ಆತನ ಸಂಬಂಧಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಜರ್ಮನ್ ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ. ಈಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗಾಗಿ ಉಗ್ರರು ಮನೆ-ಮನೆಗೆ ಶೋಧ ನಡೆಸುತ್ತಿದ್ದಾರೆ ಎಂದು ಡಿಡಬ್ಲ್ಯೂ ಗುರುವಾರ ಹೇಳಿದೆ. ಮತ್ತೊಬ್ಬ ಸಂಬಂಧಿ ಗಂಭೀರವಾಗಿ ಗಾಯಗೊಂಡರು, ಇತರರು ತಪ್ಪಿಸಿಕೊಂಡರು ಎಂದು ಘಟನೆಯ ವಿವರಗಳನ್ನು ನೀಡದೆಯೇ ಡಿಡಬ್ಯೂ ಹೇಳಿದೆ.

ಡಿಡಬ್ಲ್ಯೂ ಡೈರೆಕ್ಟರ್ ಜನರಲ್ ಪೀಟರ್ ಲಿಂಬರ್ಗ್ ಈ ಹತ್ಯೆಯನ್ನು ಖಂಡಿಸಿದ್ದು, ಪತ್ರಕರ್ತರು ಮತ್ತು ಅಫ್ಘಾನಿಸ್ತಾನದಲ್ಲಿರುವ ಅವರ ಕುಟುಂಬಗಳಿಗೆ ಅಪಾಯವಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ. “ನಿನ್ನೆ ತಾಲಿಬಾನ್ ನಮ್ಮ ಸಂಪಾದಕರೊಬ್ಬರ ಹತ್ತಿರದ ಸಂಬಂಧಿಯನ್ನು ಹತ್ಯೆ ಮಾಡಿರುವುದು ಖಂಡನೀಯ. ಅಫ್ಘಾನಿಸ್ತಾನದಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಇಲ್ಲಿ ತೀವ್ರ ಅಪಾಯದಲ್ಲಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.

ತಾಲಿಬಾನ್ ಈಗಾಗಲೇ ಪತ್ರಕರ್ತರಿಗಾಗಿ ಕಾಬೂಲ್ ಮತ್ತು ಪ್ರಾಂತ್ಯಗಳಲ್ಲಿ ಸಂಘಟಿತ ಹುಡುಕಾಟಗಳನ್ನು ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ನಮ್ಮಲ್ಲೀಗ ಸಮಯವಿಲ್ಲ ಎಂದಿದ್ದಾರೆ ಲಿಂಬರ್ಗ್. ತಾಲಿಬಾನ್ ಕನಿಷ್ಠ ಮೂರು ಇತರ ಡಿಡಬ್ಲ್ಯೂ ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದೆ ಎಂದು ಬ್ರಾಡ್‌ಕಾಸ್ಟರ್ ಹೇಳಿದ್ದಾರೆ.

(Afghanistan Crisis Resistant forces recapture 3 districts in Afghanistan from Taliban)

ಇದನ್ನೂ ಓದಿ:
ಅಮೆರಿಕ ಜೊತೆಗಿನ ಒಪ್ಪಂದದ ಪ್ರಕಾರ ಆಗಸ್ಟ್ 31 ರವರೆಗೆ ತಾಲಿಬಾನ್ ಹೊಸ ಸರ್ಕಾರವನ್ನು ಘೋಷಿಸಲ್ಲ: ವರದಿ 

ಅಫ್ಘಾನಿಸ್ತಾನಕ್ಕೆ ದುಡ್ಡು ಕೊಡಲು ಐಎಂಎಫ್​ ನಕಾರ, ರಿಸರ್ವ್ ಬ್ಯಾಂಕ್​ ಹಣ ಅಮೆರಿಕಾ ಪಾಲು; ತಾಲಿಬಾನಿಗಳ ಆದಾಯ ಏನು?