AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿ ಖಲಿಸ್ತಾನಿ ಬ್ರಿಗೇಡ್​​​ಗಾಗಿ ಮಾನವ ಕಳ್ಳಸಾಗಣೆ; ಅಮಾಯಕ ಸಿಖ್ ಯುವಕರೇ ಇವರ ಗುರಿ

Human trafficking in Canada: ಮೂಲಗಳ ಪ್ರಕಾರ ಕೆನಡಾದಲ್ಲಿ ಅನೇಕ ಭಾರತೀಯರು ಓದುತ್ತಿದ್ದಾರೆ. ಆದರೆ ಕಲಿಕೆ ಪೂರ್ಣಗೊಳಿಸಿದ ನಂತರ, ಅವರಿಗೆ ಉತ್ತಮ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಖಲಿಸ್ತಾನಿ ಬೆಂಬಲಿಗರು ಅಂತಹ ಯುವಕರನ್ನು ತಮ್ಮ ಖಲಿಸ್ತಾನಿ ಬ್ರಿಗೇಡ್‌ಗೆ ಉದ್ಯೋಗದ ಆಮಿಷಗಳ ಮೂಲಕ ಅಥವಾ ಅವರಿಗೆ ಉದ್ಯೋಗ ನೀಡುವುದಾಗಿ ಹೇಳಿ ಸೇರಿಸಿಕೊಂಡಿದ್ದಾರೆ.

ಕೆನಡಾದಲ್ಲಿ ಖಲಿಸ್ತಾನಿ ಬ್ರಿಗೇಡ್​​​ಗಾಗಿ ಮಾನವ ಕಳ್ಳಸಾಗಣೆ; ಅಮಾಯಕ ಸಿಖ್ ಯುವಕರೇ ಇವರ ಗುರಿ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Sep 26, 2023 | 2:16 PM

ದೆಹಲಿ ಸೆಪ್ಟೆಂಬರ್ 26: ಪ್ರತಿದಿನ ಕೆನಡಾದಲ್ಲಿ (Canada) ಖಲಿಸ್ತಾನಿ ಬೆಂಬಲಿಗರು ಮತ್ತು ಭಯೋತ್ಪಾದಕರ (khalistani terrorists) ಬಗ್ಗೆ ಒಂದೊಂದೇ ಮಾಹಿತಿ ಬಹಿರಂಗವಾಗುತ್ತಿದೆ. ಇದೀಗ ಕೆನಡಾದಲ್ಲಿ ಖಲಿಸ್ತಾನಿ ಗುಂಪುಗಳು ಮಾನವ ಕಳ್ಳಸಾಗಣೆ (human trafficking) ನಡೆಸುತ್ತಿರುವುದು ಬೆಳಕಿಗೆ ಬಂದಿರುವುದಾಗಿ ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖಿಸಿ ಮೂಲಗಳು ವರದಿ ಮಾಡಿವೆ. ಪಂಜಾಬ್‌ನ ಯುವಕರಿಗೆ ಕೆನಡಾದಲ್ಲಿ ನೆಲೆಸುವ ಆಸೆ ಜಾಸ್ತಿ. ಅಂತಹ ಯುವಕರನ್ನು ಬಳಸಿಕೊಂಡು ಖಲಿಸ್ತಾನಿಗಳು ತಮ್ಮ ‘ಖಲಿಸ್ತಾನಿ ಬ್ರಿಗೇಡ್’ ಅನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಟಿವಿ9 ಭಾರತ್​​ವರ್ಷ್ ವರದಿ ಮಾಡಿದೆ.

ವಾಸ್ತವವಾಗಿ, ಪ್ರತಿಯೊಬ್ಬರೂ ‘ಸೆಲೆಕ್ಟಿವ್’ ಕೆನಡಾ ವೀಸಾವನ್ನು ಪಡೆಯಲು ಸಾಧ್ಯವಿಲ್ಲ. ಖಲಿಸ್ತಾನಿ ಭಯೋತ್ಪಾದಕರಾದ ಹರ್ದೀಪ್ ಸಿಂಗ್ ನಿಜ್ಜಾರ್, ಮೊನೀಂದರ್ ಸಿಂಗ್ ಬುವಾಲ್, ಪರ್ಮಿಂದರ್ ಪಾಂಗ್ಲಿ ಮತ್ತು ಭಗತ್ ಸಿಂಗ್ ಬ್ರಾರ್ ಅವರಂತಹ ಖಲಿಸ್ತಾನಿ ಬೆಂಬಲಿಗರು ಕೆನಡಾದ ನೆಲದಿಂದ ತಮ್ಮ ಖಲಿಸ್ತಾನ್ ಪರ ಅಜೆಂಡಾವನ್ನು ಮುಂದುವರಿಸಲು ಇರುವ ಕಾರಣವೂ ಇದೇ. ಇದಕ್ಕಾಗಿ ಈ ಜನರು ಕೆನಡಾದಲ್ಲಿರುವ ಅಮಾಯಕ ಸಿಖ್ ಯುವಕರನ್ನು ಬಳಸಿಕೊಳ್ಳುತ್ತಿದ್ದಾರೆ.

ಸಿಖ್ ಯುವಕರು ಖಲಿಸ್ತಾನಿ ಗುಂಪು ಸೇರುತ್ತಿರುವುದು ಹೇಗೆ?

ಈ ಜನರು ಪಂಜಾಬ್‌ನ ಅಮಾಯಕ ಸಿಖ್ ಯುವಕರನ್ನು ಕೆನಡಾಕ್ಕೆ ಪ್ಲಂಬರ್‌ಗಳು, ಟ್ರಕ್ ಡ್ರೈವರ್‌ಗಳಂತಹ ಕೆಲಸಗಳಿಗಾಗಿ ಅಥವಾ ಗುರುದ್ವಾರಗಳಲ್ಲಿ ಧಾರ್ಮಿಕ ಕೆಲಸಗಳಿಗಾಗಿ ಕೆನಡಾಕ್ಕೆ ಆಹ್ವಾನಿಸುತ್ತಿದ್ದಾರೆ. ಅಲ್ಲಿ ಅವರನ್ನು ತಮ್ಮ ಖಲಿಸ್ತಾನಿ ಗುಂಪುಗಳಿಗೆ ಸೇರಿಸುತ್ತಿದ್ದಾರೆ. ಈ ಜನರು ತಮ್ಮ ಯೋಜನೆಗಳನ್ನು ಯಶಸ್ವಿಗೊಳಿಸಲು ಕೆನಡಾದಲ್ಲಿ ಭಾರತೀಯ ಯುವಕರು ಮತ್ತು ವಿದ್ಯಾರ್ಥಿಗಳನ್ನು ಗುರುತಿಸುತ್ತಾರೆ. ತಮ್ಮ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಮತ್ತು ಉದ್ಯೋಗದ ಅವಶ್ಯಕತೆ ಇರುವಂತಹ ಚಿಕ್ಕ ಹುಡುಗರನ್ನೇ ಇವರು ಗುರುತಿಸಿ ತಮ್ಮ ಗುಂಪಿಗೆ ಸೇರಿಸುತ್ತಾರೆ.

ಮೂಲಗಳ ಪ್ರಕಾರ ಕೆನಡಾದಲ್ಲಿ ಅನೇಕ ಭಾರತೀಯರು ಓದುತ್ತಿದ್ದಾರೆ. ಆದರೆ ಕಲಿಕೆ ಪೂರ್ಣಗೊಳಿಸಿದ ನಂತರ, ಅವರಿಗೆ ಉತ್ತಮ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಖಲಿಸ್ತಾನಿ ಬೆಂಬಲಿಗರು ಅಂತಹ ಯುವಕರನ್ನು ತಮ್ಮ ಖಲಿಸ್ತಾನಿ ಬ್ರಿಗೇಡ್‌ಗೆ ಉದ್ಯೋಗದ ಆಮಿಷಗಳ ಮೂಲಕ ಅಥವಾ ಅವರಿಗೆ ಉದ್ಯೋಗ ನೀಡುವುದಾಗಿ ಹೇಳಿ ಸೇರಿಸಿಕೊಂಡಿದ್ದಾರೆ.

ಐಎಸ್‌ಐ ಬೆಂಬಲಿತ ಖಲಿಸ್ತಾನಿ ಗುಂಪು ‘ಸಿಖ್ ಫಾರ್ ಜಸ್ಟೀಸ್’ ತನ್ನ ಭಾರತ ವಿರೋಧಿ ಅಭಿಯಾನ ‘ಪಂಜಾಬ್ ಸ್ವಾತಂತ್ರ್ಯ ಜನಾಭಿಪ್ರಾಯ’ಕ್ಕೆ ಬೆಂಬಲವನ್ನು ಪಡೆಯುವುದು ಕಷ್ಟಕರವಾದಾಗ, ಅಭಿಯಾನ ಯಶಸ್ವಿಯಾಗುತ್ತಿದೆ ಎಂದು ತೋರಿಸಲು ನಿಜ್ಜರ್ ಮತ್ತು ಅವನ ಸ್ನೇಹಿತರು ಹೊಸದಾಗಿ ನೇಮಕಗೊಂಡ ಈ ಹುಡುಗರನ್ನು ಬಳಸಿಕೊಂಡರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತದ ರಾಷ್ಟ್ರಧ್ವಜ ಸುಟ್ಟು, ಮೋದಿ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಸಿಖ್ಖರ ಪ್ರತಿಭಟನೆ

ಖಲಿಸ್ತಾನಿಗಳು 30 ಕ್ಕೂ ಹೆಚ್ಚು ಗುರುದ್ವಾರಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದಾರೆ

ಮೂಲಗಳ ಪ್ರಕಾರ, ಖಲಿಸ್ತಾನಿಗಳು ಕೆನಡಾದ ಸರ್ರೆ, ಬ್ರಾಂಪ್ಟನ್ ಮತ್ತು ಎಡ್ಮಂಟನ್‌ನಂತಹ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಗುರುದ್ವಾರಗಳಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದಾರೆ. ಇದಲ್ಲದೇ ನಿಜ್ಜರ್, ಬುವಾಲ್ ಮತ್ತು ಭಗತ್ ಸಿಂಗ್ ಬ್ರಾರ್ ಅವರು ಪಂಜಾಬ್‌ನ ದವಿಂದರ್ ಬಾಂಬಿಯಾ ಗ್ಯಾಂಗ್, ಅರ್ಶ್ ದಲ್ಲಾ ಗ್ಯಾಂಗ್ ಮತ್ತು ಲಖ್ಬೀರ್ ಲಾಂಡಾ ಗ್ಯಾಂಗ್‌ಗಳಂತಹ ಗ್ಯಾಂಗ್​​​ಸ್ಟರ್ ಗಳ ಜತೆ ನಂಟು ಬೆಳೆಸಿದ್ದಾರೆ. ಈ ಜನರು ಈ ಕುಖ್ಯಾತ ಗ್ಯಾಂಗ್​​ಸ್ಟರ್ ಗಳನ್ನು ಕೆನಡಾಕ್ಕೆ ಕರೆತಂದರು. ಪಂಜಾಬ್‌ನಲ್ಲಿ ತಮ್ಮ ಕಾರ್ಯಕರ್ತರನ್ನು ಭಯೋತ್ಪಾದಕ ದಾಳಿಗೆ ಬಳಸಿಕೊಂಡರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ