ಇತ್ತ ಸದನದಲ್ಲಿ ಅಮೆರಿಕದ ಮಧ್ಯಸ್ಥಿಕೆಯಿರಲಿಲ್ಲ ಎಂದ ಜೈಶಂಕರ್, ಅತ್ತ ಮತ್ತೆ ನಾನೇ ಯುದ್ಧ ನಿಲ್ಲಿಸಿದ್ದು ಎಂದ ಟ್ರಂಪ್!
ಇತ್ತ ಭಾರತದ ಲೋಕಸಭಾ ಅಧಿವೇಶನದಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಇಂಗ್ಲೆಂಡ್ ಪ್ರವಾಸದಲ್ಲಿರುವ ಡೊನಾಲ್ಡ್ ಟ್ರಂಪ್, ನಾನು ಇಲ್ಲದೇ ಇದ್ದಿದ್ದರೆ ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ. ಟ್ರಂಪ್ ಈ ರೀತಿ ಹೇಳುತ್ತಿರುವುದು ಇದೇ ಮೊದಲೇನಲ್ಲ. ಭಾರತ ಅಮೆರಿಕದ ಮಧ್ಯಸ್ಥಿಕೆಯನ್ನು ತಳ್ಳಿಹಾಕಿದ್ದರೂ ಟ್ರಂಪ್ ಮಾತ್ರ ಚಾನ್ಸ್ ಸಿಕ್ಕಾಗಲೆಲ್ಲ ಭಾರತ-ಪಾಕ್ ಕದನವಿರಾಮಕ್ಕೆ ನಾನೇ ಕಾರಣ ಎಂದು ಪುಕ್ಕಟೆ ಕ್ರೆಡಿಟ್ ತೆಗೆದುಕೊಳ್ಳುತ್ತಲೇ ಇದ್ದಾರೆ.

ನವದೆಹಲಿ, ಜುಲೈ 28: ಇಂದು ಲೋಕಸಭಾ ಅಧಿವೇಶನದಲ್ಲಿ ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಚರ್ಚೆ ನಡೆಯುತ್ತಿದೆ ಈ ವೇಳೆ ಕಾಂಗ್ರೆಸ್ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನವಿರಾಮವನ್ನು ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ಏಪ್ರಿಲ್ 22 (ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ದಿನ) ಮತ್ತು ಜೂನ್ 17 (ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿದ 1 ತಿಂಗಳ ನಂತರ) ನಡುವೆ ಡೊನಾಲ್ಡ್ ಟ್ರಂಪ್ (Donald Trump) ಮತ್ತು ಪ್ರಧಾನಿ ಮೋದಿ (PM Modi) ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾದ ಮಾತುಕತೆಯ ಬಳಿಕ ಕದನವಿರಾಮ ಘೋಷಿಸಲಾಯಿತು ಎಂದು ಪ್ರತಿಪಾದಿಸಿದ್ದರು. ಆದರೆ, ಅತ್ತ ಇಂಗ್ಲೆಂಡ್ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಾನೇ ಭಾರತ-ಪಾಕಿಸ್ತಾನದ ನಡುವೆ ಯುದ್ಧವಾಗುವುದನ್ನು ತಡೆದಿದ್ದು ಎಂದು ಘೋಷಿಸಿದ್ದಾರೆ.
ಅಧಿಕೃತ ಮಾತುಕತೆಗೆ ಮುನ್ನ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಜೊತೆಗೆ ಸ್ಕಾಟ್ಲೆಂಡ್ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಸೇರಿದಂತೆ ಒಟ್ಟು 6 ಪ್ರಮುಖ ಯುದ್ಧಗಳನ್ನು ತಡೆಯಲು ನಾನು ಮಧ್ಸ್ಥಿಕೆ ವಹಿಸಿದ್ದೆ ಎಂದು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ.
President Trump Participates in a Bilateral Meeting with the Prime Minister of the United Kingdom https://t.co/WoLmysqlu3
— The White House (@WhiteHouse) July 28, 2025
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮತ್ತೊಮ್ಮೆ, ಎಲ್ಲಾ ವ್ಯಾಪಾರ ಮಾತುಕತೆಗಳನ್ನು ನಿಲ್ಲಿಸುವ ಬೆದರಿಕೆಯೊಂದಿಗೆ ತಾನು ಸಕಾಲದಲ್ಲಿ ಮಧ್ಯಪ್ರವೇಶಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಈಗ ಯುದ್ ನಡೆಯುತ್ತಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ನಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ವಿರೋಧಿಸಲ್ಲ ಎಂದ ಶಶಿ ತರೂರ್; ಕಾಂಗ್ರೆಸ್ ಮನವಿಗೆ ಒಪ್ಪದ ಸಂಸದ
ಹಮಾಸ್ ಜೊತೆಗಿನ ಕದನ ವಿರಾಮ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಗಾಜಾದಲ್ಲಿ ಸಂಘರ್ಷವನ್ನು ಕೊನೆಗೊಳಿಸಲು ಇಸ್ರೇಲ್ ಅನ್ನು ಒತ್ತಾಯಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುವಾಗ ಭಾರತ-ಪಾಕ್ ಪ್ರಸ್ತಾಪವನ್ನೂ ಮಾಡಿದ್ದಾರೆ.
“ನಮ್ಮಲ್ಲಿ ಅನೇಕ ಕದನ ವಿರಾಮಗಳು ನಡೆಯುತ್ತಿವೆ. ನಾನು ಇಲ್ಲದಿದ್ದರೆ ನೀವು 6 ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಗಬೇಕಿತ್ತು. ಭಾರತ ಪಾಕಿಸ್ತಾನದೊಂದಿಗೆ ಹೋರಾಡುತ್ತಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡದಿದ್ದರೆ ಅದರ ಪರಿಣಾಮ ಕೆಟ್ಟದಾಗಿರುತ್ತಿತ್ತು. ಎರಡು ಪರಮಾಣು ರಾಷ್ಟ್ರಗಳ ನಡುವೆ ಯುದ್ಧ ನಡೆದರೆ ಅದರ ಪರಿಣಾಮ ಎಷ್ಟು ದೊಡ್ಡದಾಗಿರಬಹುದು ಎಂದು ನೀವೇ ಊಹಿಸಿ” ಎಂದು ಟ್ರಂಪ್ ಸ್ಕಾಟ್ಲೆಂಡ್ನ ದಕ್ಷಿಣ ಐರ್ಶೈರ್ನಲ್ಲಿರುವ ತಮ್ಮ ಟರ್ನ್ಬೆರಿ ಗಾಲ್ಫ್ ರೆಸಾರ್ಟ್ನಿಂದ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ.
At no stage, in any conversation with the United States, was there any linkage with trade and what was going on, EAM Jaishankar dismisses Trump’s mediation claim between India, Pakistan pic.twitter.com/uGIPJb1vgb
— Sidhant Sibal (@sidhant) July 28, 2025
“ನನಗೆ ಪಾಕಿಸ್ತಾನ ಮತ್ತು ಭಾರತದ ನಾಯಕರ ಪರಿಚಯವಿದೆ. ನನಗೆ ಆ ಎರಡೂ ದೇಶಗಳ ನಾಯಕರು ಆಪ್ತರು. ಅವರು ವ್ಯಾಪಾರ ಒಪ್ಪಂದದ ಮಧ್ಯದಲ್ಲಿದ್ದಾರೆ. ಆದರೆ ಅವರು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಹುಚ್ಚುತನ. ಹಾಗಾಗಿ, ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಅವರು ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಲು ಬಯಸಲಿಲ್ಲ. ಅವರಿಗೆ ಅದು ಬಹಳ ಅಗತ್ಯವಿದೆ. ನೀವು ಯುದ್ಧ ಮಾಡಲು ನಿರ್ಧರಿಸಿದರೆ ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಅದಕ್ಕೆ ಆ ಎರಡೂ ದೇಶಗಳು ಕದನವಿರಾಮಕ್ಕೆ ಒಪ್ಪಿಕೊಂಡವು” ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ಇದು ಸದನದಲ್ಲಿ ವಿಪಕ್ಷಗಳ ಟೀಕೆಗೆ ಮತ್ತಷ್ಟು ಪುಷ್ಠಿ ಕೊಟ್ಟಂತಾಗಿದೆ.
ಆದರೆ, ಇಂದು ಸದನದಲ್ಲಿ ಮತ್ತೊಮ್ಮೆ ವಿದೇಶಾಂಗ ಸಚಿವ ಜೈಶಂಕರ್ ಕದನವಿರಾಮದಲ್ಲಿ ಅಮೆರಿಕದ ಯಾವುದೇ ಮಧ್ಯಸ್ಥಿಕೆಯೂ ಇರಲಿಲ್ಲ ಎಂದು ಖಚಿತಪಡಿಸಿದ್ದರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಅಮೆರಿಕದೊಂದಿಗೆ ನಡೆಸಿದ ಚರ್ಚೆಗಳ ಬಗ್ಗೆ ಬೆಳಕು ಚೆಲ್ಲಿದ ಸಚಿವ ಜೈಶಂಕರ್, “ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪ್ರಧಾನಿ ಮೋದಿಗೆ ಕರೆ ಮಾಡಿ ಪಾಕಿಸ್ತಾನದಿಂದ ಭಾರಿ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ, ಟ್ರಂಪ್ ಯಾವುದೇ ಕರೆ ಮಾಡಿಲ್ಲ. ವ್ಯಾನ್ಸ್ ಅವರ ಬಳಿ ಪ್ರಧಾನಿ ಮೋದಿ ಅವರು ಭಾರತವು ಪಾಕಿಸ್ತಾನದ ದಾಳಿಗೆ ಇನ್ನಷ್ಟು ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಉತ್ತರಿಸಿದ್ದರು. ಅಮೆರಿಕ ಮಾತ್ರವಲ್ಲ ಹಲವಾರು ದೇಶಗಳು ಮೇ 10ರಂದು ಭಾರತವನ್ನು ಸಂಪರ್ಕಿಸಿ ಪಾಕಿಸ್ತಾನವು ಕದನ ವಿರಾಮಕ್ಕೆ ಸಿದ್ಧವಾಗಿದೆ ಎಂದು ಭಾರತಕ್ಕೆ ತಿಳಿಸಿದ್ದವು. ಆದರೆ, ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಚಾನೆಲ್ ಮೂಲಕ ಬಂದರೆ ಮಾತ್ರ ಪಾಕಿಸ್ತಾನದಿಂದ ಕದನ ವಿರಾಮದ ಮಾತುಕತೆಗಳನ್ನು ಪರಿಗಣಿಸುವುದಾಗಿ ಭಾರತ ಎಲ್ಲಾ ದೇಶಗಳಿಗೆ ಸ್ಪಷ್ಟಪಡಿಸಿತ್ತು” ಎಂದು ಸಚಿವ ಜೈಶಂಕರ್ ಹೇಳಿದ್ದಾರೆ. ಹಾಗಾದರೆ, ಅಮೆರಿಕದ ಅಧ್ಯಕ್ಷರ ಹೇಳಿಕೆಯನ್ನು ನೀವು ಯಾಕೆ ತೀಕ್ಷ್ಣವಾಗಿ ವಿರೋಧಿಸುತ್ತಿಲ್ಲ? ಎಂದು ವಿಪಕ್ಷಗಳ ಪ್ರಶ್ನೆ ತೂರಿಬಂದಿತು. ನಾಳೆ ಆಪರೇಷನ್ ಸಿಂಧೂರದ ಬಗ್ಗೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 pm, Mon, 28 July 25




