ಸಂಸತ್ನಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ವಿರೋಧಿಸಲ್ಲ ಎಂದ ಶಶಿ ತರೂರ್; ಕಾಂಗ್ರೆಸ್ ಮನವಿಗೆ ಒಪ್ಪದ ಸಂಸದ
ಇತ್ತೀಚೆಗೆ ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿಗೆ ಸೇರ್ಪಡೆಯಾಗುವ ವದಂತಿಯನ್ನು ನಿರಾಕರಿಸಿದ್ದರೂ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ನಿಲುವಿನ ವಿರುದ್ಧ ನಡೆದುಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂದು ಲೋಕಸಭಾ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚಿಸಲಾಗಿದೆ. ಈ ವೇಳೆ ಕೇಂದ್ರ ಸರ್ಕಾರದ ಈ ಕಾರ್ಯಾಚರಣೆಯ ವಿರುದ್ಧ ಮಾತನಾಡಲು ಕಾಂಗ್ರೆಸ್ ಹೈಕಮಾಂಡ್ ಶಶಿ ತರೂರ್ ಅವರಿಗೆ ಸೂಚಿಸಿತ್ತು. ಆದರೆ, ಶಶಿ ತರೂರ್ ಅದಕ್ಕೆ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.

ನವದೆಹಲಿ, ಜುಲೈ 28: ಕಾಂಗ್ರೆಸ್ನೊಂದಿಗಿನ ತಮ್ಮ ಸಂಬಂಧ ಹಳಸಿದೆ ಎಂದು ಬಹಿರಂಗವಾಗಿಯೇ ಒಪ್ಪಿಕೊಂಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಇತ್ತೀಚೆಗೆ ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಪರೇಷನ್ ಸಿಂಧೂರ್ ಬಗ್ಗೆ ಹಾಗೂ ಭಯೋತ್ಪಾದನೆ ವಿರುದ್ಧ ತಮ್ಮ ನಿಲುವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಭಾರತದಿಂದ ಬೇರೆ ದೇಶಗಳಿಗೆ ಹೋಗಿದ್ದ ಸಂಸದರ ನಿಯೋಗದಲ್ಲಿ ಶಶಿ ತರೂರ್ ಕೂಡ ಇದ್ದರು. ಇದಾದ ನಂತರ ಶಶಿ ತರೂರ್ ಬಗ್ಗೆ ಕಾಂಗ್ರೆಸ್ ಅಸಮಾಧಾನ ಹೆಚ್ಚಾಗಿತ್ತು. ಇಂದು ಸಂಸತ್ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್ (Operation Sindoor) ಬಗ್ಗೆ ಚರ್ಚೆ ಆರಂಭವಾಗಿದೆ. ಈ ವೇಳೆ ಈ ಕಾರ್ಯಾಚರಣೆಯನ್ನು ಟೀಕಿಸಲು ಕಾಂಗ್ರೆಸ್ ತನ್ನ ಸಂಸದ ಶಶಿ ತರೂರ್ ಅವರಿಗೆ ಸೂಚಿಸಿತ್ತು. ಆದರೆ, ಅವರು ಅದಕ್ಕೆ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರ್ ಬಗ್ಗೆ ಟೀಕಿಸಲು ಲೋಕಸಭಾ ಚರ್ಚೆಯಲ್ಲಿ ಭಾಗವಹಿಸಲು ಪಕ್ಷದ ನಾಯಕತ್ವ ನೀಡಿದ ಸೂಚನೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಆಪರೇಷನ್ ಸಿಂಧೂರ್ ಬಗ್ಗೆ ಲೋಕಸಭೆಯ ಚರ್ಚೆಯಲ್ಲಿ ಭಾಗವಹಿಸಲು ಪಕ್ಷದ ನಾಯಕರು ಶಶಿ ತರೂರ್ ಅವರನ್ನು ಸಂಪರ್ಕಿಸಿದ್ದರು. ಆದರೆ, ಈ ಕಾರ್ಯಾಚರಣೆಯ ಕುರಿತು ಸರ್ಕಾರವನ್ನು ಟೀಕಿಸುವ ಪಕ್ಷದ ನಿಲುವಿಗೆ ಬದ್ಧರಾಗಲು ಸಾಧ್ಯವಿಲ್ಲ ಎಂದು ಶಶಿ ತರೂರ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: Parliament Monsoon Session: ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ, ಯಾವೆಲ್ಲಾ ವಿಚಾರಗಳ ಕುರಿತು ಚರ್ಚೆ?
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳನ್ನು ಎತ್ತಿ ತೋರಿಸಲು ಒಟ್ಟು 5 ದೇಶಗಳಲ್ಲಿ ಅಮೆರಿಕಕ್ಕೆ ಸರ್ವಪಕ್ಷ ನಿಯೋಗವನ್ನು ಮುನ್ನಡೆಸಿದ್ದ ಶಶಿ ತರೂರ್, ಆಪರೇಷನ್ ಸಿಂಧೂರ್ ಅನ್ನು ಬೆಂಬಲಿಸುವ ಹೇಳಿಕೆಗಳಿಗಾಗಿ ಕೆಲವು ಕಾಂಗ್ರೆಸ್ ನಾಯಕರಿಂದ ಟೀಕೆಗೆ ಗುರಿಯಾಗಿದ್ದರು. ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ ಅನ್ನು ಬೆಂಬಲಿಸುವ ನಿಯೋಗವನ್ನು ಮುನ್ನಡೆಸಲು ಶಶಿ ತರೂರ್ ಅವರನ್ನು ಆಯ್ಕೆ ಮಾಡಿದಾಗ ಆಂತರಿಕ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಯಿತು. ಅಲ್ಲಿಂದ ಬಂದಮೇಲೂ ಅನೇಕ ಬಾರಿ ಶಶಿ ತರೂರ್ ಬಹಿರಂಗವಾಗಿಯೇ ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದರು. ಇದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ತುಪ್ಪ ಸುರಿದಿತ್ತು.
ಇದನ್ನೂ ಓದಿ: Video: ಮುಂಗಾರು ಅಧಿವೇಶನಕ್ಕೂ ಮುನ್ನ ಆಪರೇಷನ್ ಸಿಂಧೂರ್, ಭಯೋತ್ಪಾದನೆ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು?
ಒಂದು ವಾರದ ಅಡಚಣೆಗಳ ನಂತರ ಸಂಸತ್ತು ಇಂದು ಮುಂಗಾರು ಅಧಿವೇಶನದಲ್ಲಿ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಚರ್ಚೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಆದರೆ, ಸಂಸತ್ತಿನ ನಿರಂತರ ಅಡಚಣೆಗಳು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಆಪರೇಷನ್ ಸಿಂಧೂರ್ ಚರ್ಚೆಗಳನ್ನು ಪ್ರಾರಂಭಿಸಲು ಅಡ್ಡಿಯಾದವು. ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಚರ್ಚೆಗಳಿಗೆ ತಮ್ಮ ನಾಯಕರನ್ನು ಕಣಕ್ಕಿಳಿಸಲು ಸಜ್ಜಾಗಿವೆ.
ಕಾಂಗ್ರೆಸ್ ಒದಗಿಸಿದ ಸ್ಪೀಕರ್ಗಳ ಪಟ್ಟಿಯ ಪ್ರಕಾರ, ಗೌರವ್ ಗೊಗೊಯ್, ಪ್ರಿಯಾಂಕಾ ಗಾಂಧಿ ವಾದ್ರಾ, ದೀಪೇಂದ್ರ ಹೂಡಾ, ಪ್ರಣೀತಿ ಶಿಂಧೆ, ಸಪ್ತಗಿರಿ ಉಲಕ ಮತ್ತು ಬಿಜೇಂದ್ರ ಓಲಾ ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡಲಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಾಳೆ ಚರ್ಚೆಯಲ್ಲಿ ಮಾತನಾಡಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Mon, 28 July 25




