Nepal Flood: ನೇಪಾಳ ಜಲಪ್ರಳಯದಲ್ಲಿ ಕೈಲಾಸ ಯಾತ್ರಿಕರು ನಾಪತ್ತೆ: ಇಶಾ ಫೌಂಡೇಶನ್‌ನ 77 ಮಂದಿ ಹಾಗೂ ಕೋಲ್ಕತ್ತಾದ 32 ಯಾತ್ರಿಕರ ಸಂಪರ್ಕ ಕಟ್

ನೇಪಾಳದ ಭೋಟೆ ಕೋಶಿ ನದಿಯ ಹಠಾತ್ ಪ್ರವಾಹದಲ್ಲಿ ಕೈಲಾಸ ಮಾನಸಸರೋವರ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ಯಾತ್ರಿಕರು ನಾಪತ್ತೆಯಾಗಿದ್ದಾರೆ. ಆಧ್ಯಾತ್ಮಿಕ ಗುರು ಸದ್ಗುರು ಅವರ ಇಶಾ ಫೌಂಡೇಶನ್‌ನ 77 ಸದಸ್ಯರು ಹಾಗೂ ಕೋಲ್ಕತ್ತಾದ 32 ಪ್ರವಾಸಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ. ಒಟ್ಟು 384 ಯಾತ್ರಿಕರು, 105 ಭಾರತೀಯರು ಸೇರಿದಂತೆ, ನಾಪತ್ತೆಯಾಗಿದ್ದು, ನೇಪಾಳ ಮತ್ತು ಚೀನಾ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

Nepal Flood: ನೇಪಾಳ ಜಲಪ್ರಳಯದಲ್ಲಿ ಕೈಲಾಸ ಯಾತ್ರಿಕರು ನಾಪತ್ತೆ: ಇಶಾ ಫೌಂಡೇಶನ್‌ನ 77 ಮಂದಿ ಹಾಗೂ ಕೋಲ್ಕತ್ತಾದ 32 ಯಾತ್ರಿಕರ ಸಂಪರ್ಕ ಕಟ್
ನೇಪಾಳ ಪ್ರವಾಹ

Updated on: Aug 27, 2026 | 8:53 AM

ಕಠ್ಮಂಡು, ಆಗಸ್ಟ್​ 27: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಹಠಾತ್ ಪ್ರವಾಹ(Flood)ಕ್ಕೆ ಸಿಲುಕಿ, ಕೈಲಾಸ ಮಾನಸಸರೋವರ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಆಧ್ಯಾತ್ಮಿಕ ಗುರು ಸದ್ಗುರು ಅವರ ಇಶಾ ಫೌಂಡೇಶನ್‌ನ 77 ಸದಸ್ಯರು ಹಾಗೂ ಕೋಲ್ಕತ್ತಾದ 32 ಪ್ರವಾಸಿಗರ ಗುಂಪು ಸಂಪರ್ಕಕ್ಕೆ ಸಿಗುತ್ತಿಲ್ಲ. ಟಿಬೆಟ್‌ನ ಗೈರಾಂಗ್ (ಕ್ಸಿಗೇಜ್) ಮತ್ತು ನೇಪಾಳದ ರಸುವಾಗಧಿ ಗಡಿ ವಲಸೆ ಕಚೇರಿಗಳ ಮೇಲೆ ಏಕಾಏಕಿ ನುಗ್ಗಿದ ಬೃಹತ್ ಜಲರಾಶಿಯು ಕಟ್ಟಡಗಳನ್ನು ಮುಳುಗಿಸಿದ್ದು, ನೂರಾರು ಯಾತ್ರಿಕರು ಸಿಲುಕಿಕೊಂಡಿದ್ದಾರೆ.

ಸದ್ಗುರುಗಳ ಮಾಹಿತಿ ಮತ್ತು ಇಶಾ ಫೌಂಡೇಶನ್ ಪರಿಸ್ಥಿತಿ

ವಲಸೆ ಕಚೇರಿಯಲ್ಲಿ ಸಿಲುಕಿದ ತಂಡ: ಕೈಲಾಸ ಯಾತ್ರೆ ಮುಗಿಸಿ ಗೈರಾಂಗ್ ವಲಸೆ ಕಚೇರಿಯಲ್ಲಿ ಕ್ಲಿಯರೆನ್ಸ್ ಪ್ರಕ್ರಿಯೆಯಲ್ಲಿದ್ದಾಗ ಭೀಕರ ಅಲೆಯೊಂದು ಇಡೀ ಪಟ್ಟಣ ಮತ್ತು ಕಚೇರಿಯನ್ನು ಆವರಿಸಿತು ಎಂದು ಸದ್ಗುರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರವಾಸದಲ್ಲಿದ್ದ 21 ಗುಂಪುಗಳ ಪೈಕಿ 495 ಮಂದಿ ಸುರಕ್ಷಿತವಾಗಿ ಮರಳಿದ್ದು, 743 ಜನರು ಟಿಬೆಟ್‌ನಲ್ಲಿ ಹಾಗೂ 145 ಜನರು ನೇಪಾಳ ಭಾಗದಲ್ಲಿದ್ದಾರೆ.

ರಕ್ಷಣೆಗೆ ಇಶಾ ತಂಡ ಸನ್ನದ್ಧ: ಸಂಕಷ್ಟದಲ್ಲಿರುವ ಯಾತ್ರಿಕರನ್ನು ರಕ್ಷಿಸಲು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದ್ದು, ಯಾವುದೇ ಅಪಾಯವನ್ನು ಎದುರಿಸಿ ರಕ್ಷಣಾ ಕಾರ್ಯಾಚರಣೆಗೆ ಇಳಿಯಲು ತಮ್ಮ ಸ್ವಯಂಸೇವಕ ಪಡೆ ಸಿದ್ಧವಿದೆ ಎಂದು ಸದ್ಗುರು ಹೇಳಿದ್ದಾರೆ.

ಮತ್ತಷ್ಟು ಓದಿ: ಪ್ರವಾಹ ಪೀಡಿತ ನೇಪಾಳಕ್ಕೆ ಭಾರತದಿಂದ 10 ಟನ್ ಮಾನವೀಯ ನೆರವು ರವಾನೆ

ಕೊನೆಯ ಸಂಪರ್ಕ: ಕೋಲ್ಕತ್ತಾದಿಂದ ಆಗಸ್ಟ್ 21 ರಂದು ತೆರಳಿದ್ದ 30 ಯಾತ್ರಿಕರು ಮತ್ತು ಇಬ್ಬರು ಟೂರ್ ಮ್ಯಾನೇಜರ್‌ಗಳಿದ್ದ ತಂಡವು ರಸುವಾಗಧಿ ಗಡಿಯಲ್ಲಿದ್ದಾಗ ಬೆಳಗ್ಗೆ 8.30 ರ ಸುಮಾರಿಗೆ ಸಂಪರ್ಕ ಕಡಿದುಕೊಂಡಿದೆ.

ಬಂಗಾಳ ಸರ್ಕಾರದ ಸಹಾಯವಾಣಿ: ಸಂತ್ರಸ್ತ ಯಾತ್ರಿಕರ ಕುಟುಂಬಗಳಿಗಾಗಿ ಭವಾನಿ ಭವನ ಪೊಲೀಸ್ ಪ್ರಧಾನ ಕಚೇರಿಯಲ್ಲಿ 033-24793311 ಮತ್ತು 9147890181 ತುರ್ತು ಸಹಾಯವಾಣಿಗಳನ್ನು ಸಕ್ರಿಯಗೊಳಿಸಲಾಗಿದೆ.

ಒಟ್ಟು 384 ಯಾತ್ರಿಕರ ಶೋಧ: ನೇಪಾಳ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಪ್ರವಾಹ ಪೀಡಿತ ಗಡಿ ಪ್ರದೇಶದಲ್ಲಿ 105 ಭಾರತೀಯರು ಸೇರಿದಂತೆ 291 ವಿದೇಶಿಯರು ಮತ್ತು 93 ನೇಪಾಳಿ ನಾಗರಿಕರು ನಾಪತ್ತೆಯಾಗಿದ್ದಾರೆ.

ವಿಡಿಯೋ

ಚೀನಾ-ನೇಪಾಳ ಜಂಟಿ ಕಾರ್ಯಾಚರಣೆ: ಟಿಬೆಟ್ ಕಡೆಯಿಂದ ಚೀನಾದ ಪೀಪಲ್ಸ್ ಆರ್ಮ್ಡ್ ಪೊಲೀಸ್ ಮತ್ತು ನೇಪಾಳ ಕಡೆಯಿಂದ ಸೇನಾ ಹೆಲಿಕಾಪ್ಟರ್‌ಗಳು ಸಂವಹನ ಸಂಪೂರ್ಣ ಸ್ಥಗಿತಗೊಂಡಿರುವ ಕಣಿವೆ ಪ್ರದೇಶಗಳಲ್ಲಿ ಯಾತ್ರಿಕರ ಪತ್ತೆಗೆ ತೀವ್ರ ಶೋಧ ನಡೆಸುತ್ತಿವೆ.

ಹಠಾತ್ ಪ್ರವಾಹವು ಹಲವಾರು ವಸಾಹತುಗಳು, ರಸ್ತೆಗಳು, ಸೇತುವೆಗಳು, ಭದ್ರತಾ ಕಂಬಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ತಂಡಗಳು ನಿರಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

 

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us