ಶಾಲೆಯ ಗಂಟೆ ಬಾರಿಸಿ 1,643 ಮಕ್ಕಳ ಜೀವ ಉಳಿಸಿದ ಶಿಕ್ಷಕ: ಪ್ರವಾಹಕ್ಕೆ ಶಾಲೆಯೇ ಧ್ವಂಸವಾದರೂ ಮಕ್ಕಳು ಬಚಾವ್

Nepal Flood: ನೇಪಾಳದ ರಾಜೇಂದ್ರ ದಾವಾಡಿ ಎಂಬ ಮುಖ್ಯೋಪಾಧ್ಯಾಯರು ಪ್ರವಾಹದ ಭೀಕರತೆಯನ್ನು ಅರಿತು ಶಾಲೆಯ ತುರ್ತು ಗಂಟೆ ಬಾರಿಸಿ 1,643 ಮಕ್ಕಳನ್ನು ರಕ್ಷಿಸಿದರು. ಅವರ ಸಮಯಪ್ರಜ್ಞೆಯಿಂದ ಶಾಲೆ ಧ್ವಂಸವಾಗುವ ಮುನ್ನವೇ ಮಕ್ಕಳು ಸುರಕ್ಷಿತ ಸ್ಥಳ ತಲುಪಿದರು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ಸಹೋದ್ಯೋಗಿಗಳನ್ನು ಕಳೆದುಕೊಂಡ ನೋವು ದಾವಾಡಿ ಅವರನ್ನು ಕಾಡುತ್ತಿದೆ. ಅವರ ಸಾಹಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆಯ ಗಂಟೆ ಬಾರಿಸಿ 1,643 ಮಕ್ಕಳ ಜೀವ ಉಳಿಸಿದ ಶಿಕ್ಷಕ: ಪ್ರವಾಹಕ್ಕೆ ಶಾಲೆಯೇ ಧ್ವಂಸವಾದರೂ ಮಕ್ಕಳು ಬಚಾವ್
ಪ್ರವಾಹ

Updated on: Aug 31, 2026 | 8:27 AM

ಕಠ್ಮಂಡು, ಆಗಸ್ಟ್​ 31: ಪ್ರಕೃತಿಯ ರುದ್ರನರ್ತನಕ್ಕೆ ಇಡೀ ಊರುಗಳಿಗೆ ಊರೇ ನದಿಯ ಪಾಲಾಗುತ್ತಿರುವಾಗ, ಒಬ್ಬ ವ್ಯಕ್ತಿಯ  ಸಮಯಪ್ರಜ್ಞೆ ಬರೊಬ್ಬರಿ 1,643 ಮುಗ್ಧ ಶಾಲಾ ಮಕ್ಕಳ ಪಾಲಿಗೆ ಸಂಜೀವಿನಿಯಾಗಿದೆ. ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಮಾಧ್ಯಮಿಕ ಶಾಲೆಯ 47 ವರ್ಷದ ಮುಖ್ಯೋಪಾಧ್ಯಾಯರಾದ ರಾಜೇಂದ್ರ ದಾವಾಡಿ, ಬೆಟ್ಟದ ಮೇಲಿಂದ ನುಗ್ಗಿಬರುತ್ತಿದ್ದ ಪ್ರವಾಹ(Flood)ದ ಕರಾಳತೆಯನ್ನು ಅರಿತು ಶಾಲೆಯ ತುರ್ತು ಗಂಟೆ ಬಾರಿಸಿ, ಇಡೀ ಶಾಲೆಯ ಸಾವಿರಾರು ಮಕ್ಕಳನ್ನು ಕ್ಷಣಾರ್ಧದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಜೀವ ಉಳಿಸಿದ್ದಾರೆ.

ಗೆಳೆಯನಿಂದ ಬಂದ ತುರ್ತು ಕರೆ: ಬುಧವಾರ ಬೆಳಗ್ಗೆ 9.20 ಸುಮಾರಿಗೆ ದಾವಾಡಿ ಅವರಿಗೆ ಗೆಳೆಯನೊಬ್ಬ ಕರೆ ಮಾಡಿ, ನದಿಯ ಹರಿವು ಎಲ್ಲವನ್ನೂ ನುಂಗಿ ಹಾಕಿದೆ, ಗ್ರಾಮವೇ ಕೊಚ್ಚಿಹೋಗಿದೆ, ತಕ್ಷಣ ಓಡಿ ಪ್ರಾಣ ಉಳಿಸಿಕೊಳ್ಳಿ ಎಂದು ಎಚ್ಚರಿಸಿದರು.

ಶಾಲೆಯ ಬೆಲ್ ಮೊಳಗಿಸಿದ ಶಿಕ್ಷಕ: ಆರಂಭದಲ್ಲಿ ಶಾಲೆ ನದಿಯಿಂದ 60 ಮೀಟರ್ ಎತ್ತರದಲ್ಲಿದ್ದ ಕಾರಣ ಸುರಕ್ಷಿತವೆಂದು ಭಾವಿಸಲಾಗಿತ್ತು. ಆದರೆ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿರುವುದನ್ನು ಗಮನಿಸಿದ ದಾವಾಡಿ, ತಕ್ಷಣ ಶಾಲೆಯ ಗಂಟೆ ಬಾರಿಸಿ ಎಲ್ಲಾ ಶಿಕ್ಷಕರಿಗೆ ತರಗತಿಗಳನ್ನು ತಕ್ಷಣವೇ ಖಾಲಿ ಮಾಡಲು ಆದೇಶಿಸಿದರು.

ಬೋಧಿ ವೃಕ್ಷದ ಆಸರೆ: ಕೆಲವೇ ನಿಮಿಷಗಳಲ್ಲಿ 1,643 ಮಕ್ಕಳನ್ನು ಮೂರು ಅಂತಸ್ತಿನ ಶಾಲಾ ಕಟ್ಟಡದಿಂದ ಹೊರತಂದು ಎತ್ತರದ ಬೆಟ್ಟದ ಮೇಲಿದ್ದ ಪವಿತ್ರ ಬೋಧಿ ಮರದ ಕೆಳಗೆ ಸುರಕ್ಷಿತವಾಗಿ ಸೇರಿಸಲಾಯಿತು. ಮಕ್ಕಳು ಬೆಟ್ಟವೇರಿದ ಕೆಲವೇ ಕ್ಷಣಗಳಲ್ಲಿ ಇಡೀ ಶಾಲಾ ಕಟ್ಟಡವು ನೀರಿನ ರಭಸಕ್ಕೆ ಕಣ್ಣೆದುರೇ ಕೊಚ್ಚಿಹೋಯಿತು.

ಮತ್ತಷ್ಟು ಓದಿ: ನೇಪಾಳ ಪ್ರವಾಹ: ಸಾವಿನ ಸಂಖ್ಯೆ 675ಕ್ಕೆ ಏರಿಕೆ; 54 ಕನ್ನಡಿಗರು ಸುರಕ್ಷಿತವಾಗಿ ವಾಪಸ್

ಎಲ್ಲಾ ಮಕ್ಕಳನ್ನು ಯಶಸ್ವಿಯಾಗಿ ರಕ್ಷಿಸಿದರೂ, ನದಿಯ ಬದಿಯಲ್ಲಿದ್ದ ಕೋಣೆಗೆ ಉಪಾಹಾರ ತಯಾರಿಸಲು ತೆರಳಿದ್ದ ಇತಿಹಾಸ ಶಿಕ್ಷಕ ಸ್ಯಾಂಟೋಸ್ ಪರಿಯಾರ್ (32) ಹಾಗೂ ಶಾಲೆಯ ಮುಖ್ಯ ಬಾಗಿಲನ್ನು ಮುಚ್ಚಲು ವಾಪಸ್ ಹೋದ ಸಿಬ್ಬಂದಿ ಸುಲ್ತಾನ್ ಲಾಮಾ ಪ್ರವಾಹದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದಾರೆ.

ಗ್ರಾಮಸ್ಥರೆಲ್ಲರೂ ದಾವಾಡಿ ಅವರನ್ನು ‘ರಿಯಲ್ ಹೀರೋ’ ಎಂದು ಕೊಂಡಾಡುತ್ತಿದ್ದರೂ, ನೆಲಸಮವಾದ ಶಾಲೆಯ ಅವಶೇಷಗಳನ್ನು ನೋಡುತ್ತಾ ಅವರು, “ಮಕ್ಕಳ ಜೀವ ಉಳಿಸುವುದು ನನ್ನ ಕರ್ತವ್ಯವಾಗಿತ್ತು, ಆದರೆ ನನ್ನ ಇಬ್ಬರು ಸಹೋದ್ಯೋಗಿಗಳನ್ನು ಕಳೆದುಕೊಂಡ ನೋವು ನನ್ನನ್ನು ಕಾಡುತ್ತಿದೆ” ಎಂದು ಭಾವುಕರಾದರು.

ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈವರೆಗೆ 788 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 2,500 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಭಾರತಕ್ಕೆ ತೇಲಿಬಂದ ಶವಗಳು: ನೇಪಾಳದ ಪ್ರವಾಹದಲ್ಲಿ ಕೊಚ್ಚಿಹೋದ ನಾಲ್ಕು ಮೃತದೇಹಗಳು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಗಂಡಕ್ ನದಿಯಲ್ಲಿ ಪತ್ತೆಯಾಗಿದ್ದು, ಯುಪಿಯಲ್ಲಿ ಪತ್ತೆಯಾದ ಒಟ್ಟು ಶವಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

275ಕ್ಕೂ ಹೆಚ್ಚು ಭಾರತೀಯರ ಸುಳಿವಿಲ್ಲ: ಭಾರತದ ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, 275 ಕ್ಕೂ ಹೆಚ್ಚು ಭಾರತೀಯರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ, 149 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

ಹಿಮನದಿ ಕುಸಿತದ ವೈಜ್ಞಾನಿಕ ವಿವರ: ಲ್ಯಾಂಗ್ಟಾಂಗ್ ಲಿರುಂಗ್ ಶಿಖರದಿಂದ ಸುಮಾರು 50 ಎಕರೆ ವಿಸ್ತೀರ್ಣದ ಬೃಹತ್ ಹಿಮ ಮತ್ತು ಬಂಡೆಯ ರಾಶಿ 1,200 ಮೀಟರ್ ಆಳದ ಕಮರಿಗೆ ಕುಸಿದಿದ್ದೇ ಈ ಜಲಪ್ರಳಯಕ್ಕೆ ಮುಖ್ಯ ಕಾರಣವೆಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us