ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಐತಿಹಾಸಿಕ ಗುರುದ್ವಾರ ಧ್ವಂಸ, ಭಾರತ ಎಚ್ಚರಿಕೆ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯದಾದ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್' ಅನ್ನು ಅಕ್ರಮವಾಗಿ ಕೆಡವಲಾಗಿದೆ. ಈ ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ಬಂಧನ ಮತ್ತು ಗುರುದ್ವಾರದ ತಕ್ಷಣದ ಪುನರ್ನಿರ್ಮಾಣಕ್ಕೆ ಆಗ್ರಹಿಸಿದೆ. ಸ್ಥಳೀಯ ಸಿಖ್ಖರ ಪ್ರತಿಭಟನೆ ಬಳಿಕ ಪಾಕ್ ಸರ್ಕಾರ ಪುನರ್ನಿರ್ಮಾಣ ಭರವಸೆ ನೀಡಿದ್ದರೂ, ಸ್ಥಳೀಯ ವ್ಯಾಪಾರಿಗಳಿಂದ ವಿರೋಧ ಎದುರಾಗಿದೆ.

ಇಸ್ಲಾಮಾಬಾದ್, ಜುಲೈ 02: ಪಾಕಿಸ್ತಾನ(Pakistan)ದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಪವಿತ್ರ ‘ಗುರುದ್ವಾರ ಶ್ರೀ ಗುರು ಸಿಂಗ್ ಸಭಾ ಸಾಹಿಬ್’ ಅನ್ನು ಸ್ಥಳೀಯ ಉದ್ಯಮಿಯೊಬ್ಬರು ಅಕ್ರಮವಾಗಿ ಕೆಡವಿ ಹಾಕಿದ್ದಾರೆ. ಲಾಹೋರ್ನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಫಾರೂಕಾಬಾದ್ನಲ್ಲಿ ಜೂನ್ 24 ರ ರಾತ್ರಿ ನಡೆದಿರುವ ಈ ಕೃತ್ಯವು ಅಲ್ಲಿನ ಅಲ್ಪಸಂಖ್ಯಾತ ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತ ಸರ್ಕಾರವೂ ಈ ಧ್ವಂಸ ಕೃತ್ಯವನ್ನು ಬಲವಾಗಿ ಖಂಡಿಸಿದೆ.
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಿಖ್ ದೇವಾಲಯದ ಮೇಲೆ ನಡೆದಿರುವ ಈ ವಿಧ್ವಂಸಕ ಕೃತ್ಯ ಅತ್ಯಂತ ಶೋಚನೀಯವಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿಕೊಳ್ಳುವ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದಿದ್ದಾರೆ.
ಈ ಹೇಯ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಹಾಗೂ ಧ್ವಂಸಗೊಳಿಸಲಾದ ಗುರುದ್ವಾರದ ಭಾಗಗಳನ್ನು ಪಾಕಿಸ್ತಾನ ಸರ್ಕಾರವೇ ಸ್ವತಃ ತಕ್ಷಣವೇ ಪುನರ್ನಿರ್ಮಿಸಿಕೊಡಬೇಕು ಎಂದು ಭಾರತ ಆಗ್ರಹಿಸಿದೆ.
ಮತ್ತಷ್ಟು ಓದಿ: ಭಾರತ-ಪಾಕ್ ಕೈದಿಗಳ ಪಟ್ಟಿ ವಿನಿಮಯ: 188 ಭಾರತೀಯರ ತಕ್ಷಣದ ಬಿಡುಗಡೆಗೆ ಪಾಕಿಸ್ತಾನಕ್ಕೆ ಭಾರತ ಒತ್ತಾಯ
ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ (NOC) ಪಡೆಯದೆಯೇ ಉದ್ಯಮಿ ಈ ಕಟ್ಟಡವನ್ನು ನೆಲಸಮಗೊಳಿಸಿದ್ದಾನೆ. ಸ್ಥಳೀಯ ಸಿಖ್ಖರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಪಾಕಿಸ್ತಾನದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರ ಸೂಚನೆ ಮೇರೆಗೆ ಅಲ್ಪಸಂಖ್ಯಾತ ಸಚಿವ ರಮೇಶ್ ಸಿಂಗ್ ಅರೋರಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿರುವ ಅವರು, ಗುರುದ್ವಾರದ ಪುನಃಸ್ಥಾಪನೆ ಕೆಲಸವನ್ನು ತಕ್ಷಣವೇ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಗುರುದ್ವಾರದ ಸುತ್ತಮುತ್ತ ಇರುವ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಸರ್ಕಾರದ ಪುನರ್ನಿರ್ಮಾಣ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ 80 ವರ್ಷಗಳಿಂದ ಈ ಗುರುದ್ವಾರವು ಪಾಳುಬಿದ್ದಿತ್ತು ಮತ್ತು ಇಲ್ಲಿ ಅನೇಕ ಅಂಗಡಿಗಳು ಹಾಗೂ ಕುಟುಂಬಗಳು ನೆಲೆಸಿದ್ದವು ಎಂದು ಅವರು ವಾದಿಸಿದ್ದಾರೆ. ಈಗ ಗುರುದ್ವಾರವನ್ನು ಪುನಃಸ್ಥಾಪಿಸಿದರೆ ಇಲ್ಲಿನ ಡಜನ್ಗಟ್ಟಲೆ ಕುಟುಂಬಗಳು ಬೀದಿಪಾಲಾಗಲಿವೆ, ಆದ್ದರಿಂದ ಸರ್ಕಾರ ತಮಗೆ ಪರ್ಯಾಯ ವಸತಿ ಮತ್ತು ಜೀವನೋಪಾಯದ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




