ಪಾಕಿಸ್ತಾನಕ್ಕೆ ಭೇಟಿ ನೀಡಬೇಡಿ; ಕಾಶ್ಮೀರದ ಉಗ್ರರ ದಾಳಿ ಬಳಿಕ ತನ್ನ ಪ್ರಜೆಗಳಿಗೆ ರಷ್ಯಾ ಎಚ್ಚರಿಕೆ
ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಲೇ ಇರುವ ಪಾಕಿಸ್ತಾನ ಇದೀಗ ಕಾಶ್ಮೀರದಲ್ಲಿನ ಉಗ್ರರ ದಾಳಿಯ ಬಳಿಕ ಮತ್ತೊಮ್ಮೆ ಭಾರತ ಮಾತ್ರವಲ್ಲದೆ ಇಡೀ ಜಗತ್ತಿನ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿದೆ. ರಷ್ಯಾ ರಾಯಭಾರ ಕಚೇರಿ ಕೂಡ ತಮ್ಮ ದೇಶದ ಪ್ರಜೆಗಳಿಗೆ ಪಾಕಿಸ್ತಾನಕ್ಕೆ ಸದ್ಯದ ಮಟ್ಟಿಗೆ ಪ್ರಯಾಣ ಬೆಳೆಸಬೇಡಿ ಎಂದು ಸೂಚನೆ ನೀಡಿದೆ. "ಪಾಕಿಸ್ತಾನ-ಭಾರತದ ಸಂಬಂಧಗಳಲ್ಲಿ ಹೊಸ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾದ ನಾಗರಿಕರು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ತಡೆಯಬೇಕೆಂದು ನಾವು ಶಿಫಾರಸು ಮಾಡುತ್ತೇವೆ." ಎಂದು ಹೇಳಿದೆ.

ನವದೆಹಲಿ, ಏಪ್ರಿಲ್ 25: ಪಾಕಿಸ್ತಾನದಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ರಷ್ಯನ್ ನಾಗರಿಕರು ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ತಡೆಯುವಂತೆ ಶಿಫಾರಸು ಮಾಡಿದೆ. ಭಾರತ-ಪಾಕಿಸ್ತಾನ ಸಂಬಂಧಗಳನ್ನು ಮತ್ತಷ್ಟು ಹದಗೆಡಿಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ಹಿನ್ನೆಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ. ಎಕ್ಸ್ ನಲ್ಲಿ ಈ ಕುರಿತು ರಷ್ಯಾದ ರಾಯಭಾರ ಕಚೇರಿ ಪೋಸ್ಟ್ ಮಾಡಿದ್ದು, “ಪಾಕಿಸ್ತಾನ-ಭಾರತದ ಸಂಬಂಧಗಳಲ್ಲಿ ಹೊಸ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ, ಪರಿಸ್ಥಿತಿ ಸ್ಥಿರವಾಗುವವರೆಗೆ ರಷ್ಯಾದ ನಾಗರಿಕರು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ತಡೆಯಬೇಕೆಂದು ನಾವು ಶಿಫಾರಸು ಮಾಡುತ್ತೇವೆ” ಎಂದು ಹೇಳಿದೆ.
ಇದಕ್ಕೂ ಮೊದಲು, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸಂದೇಶವನ್ನು ಕಳುಹಿಸಿದ್ದರು. “ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧದ ಹೋರಾಟದಲ್ಲಿ ನಮ್ಮ ಭಾರತೀಯ ಪಾಲುದಾರರೊಂದಿಗೆ ಸಂವಹನವನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಬೆಂಬಲವನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ” ಎಂದು ಪುಟಿನ್ ಸಂದೇಶ ಕಳುಹಿಸಿದ್ದರು. “ಈ ಕ್ರೂರ ಅಪರಾಧವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ಕೃತ್ಯ ಎಸಗಿದವರಿಗೆ ಅವರಿಗೆ ಅರ್ಹವಾದ ಶಿಕ್ಷೆ ಸಿಗುತ್ತದೆ ಎಂದು ನಮಗೆ ವಿಶ್ವಾಸವಿದೆ” ಎಂದು ಪುಟಿನ್ ಹೇಳಿದ್ದರು.
ಇದನ್ನೂ ಓದಿ: ಭಾರತದಲ್ಲಿದ್ದಾರೆ 14,000 ಪಾಕಿಸ್ತಾನಿ ಪ್ರಜೆಗಳು; ಪಾಕ್ನಿಂದ 286 ಭಾರತೀಯರು ವಾಪಾಸ್
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿವೆ. ನವದೆಹಲಿಯ ಕ್ರಮಗಳಲ್ಲಿ ಪಾಕಿಸ್ತಾನಿ ಪ್ರಜೆಗಳಿಗೆ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ಅನ್ನು ಅಮಾನತುಗೊಳಿಸುವುದು, ಅಟ್ಟಾರಿಯಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಅನ್ನು ಮುಚ್ಚುವುದು ಮತ್ತು ಪಹಲ್ಗಾಮ್ ದಾಳಿಯ ನಂತರ 1960ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು ಸೇರಿವೆ.
ಇದನ್ನೂ ಓದಿ: ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳಿವು
ಪಾಕಿಸ್ತಾನವು ಕೂಡ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸುವ ಮೂಲಕ ಇದಕ್ಕೆ ಪ್ರತಿಕ್ರಿಯಿಸಿತು. ಪಾಕ್ ವಾಘಾ ಗಡಿಯನ್ನು ಸಹ ಮುಚ್ಚಿತು ಮತ್ತು ಭಾರತದೊಂದಿಗಿನ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರವನ್ನೂ ಪಾಕಿಸ್ತಾನ ತೆಗೆದುಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ