
ಟೆಹ್ರಾನ್,ಆಗಸ್ಟ್ 31: ಕಳೆದ ಒಂದು ತಿಂಗಳಿಂದ ಶಾಂತವಾಗಿದ್ದ ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್(Iran) ನಡುವಿನ ಸೇನಾ ಸಂಘರ್ಷ ಮತ್ತೆ ತಾರಕಕ್ಕೇರಿದೆ. ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯ ಲಾರಕ್ ದ್ವೀಪದಲ್ಲಿದ್ದ (Larak Island) ಇರಾನ್ನ ಎರಡು ರಾಕೆಟ್ ಲಾಂಚರ್ಗಳ ಮೇಲೆ ಅಮೆರಿಕ ಸೇನೆ ಭಾನುವಾರ ನಿಖರ ವೈಮಾನಿಕ ದಾಳಿ ನಡೆಸಿದೆ. ಇದಕ್ಕೆ ತಕ್ಷಣವೇ ಪ್ರತೀಕಾರ ತೀರಿಸಿಕೊಂಡಿರುವ ಇರಾನ್, ಜೋರ್ಡಾನ್ನಲ್ಲಿರುವ ಅಮೆರಿಕದ ಪ್ರಮುಖ ವಾಯುನೆಲೆಗಳ ಮೇಲೆ ಸರಣಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.
ಸಮುದ್ರ ಗಣಿಗಳ ತಡೆ: ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಅಂತಾರಾಷ್ಟ್ರೀಯ ಹಡಗು ಮಾರ್ಗಕ್ಕೆ ಸಮುದ್ರ ಗಣಿಗಳನ್ನು (Sea Mines) ಸಿಡಿಸುವ ರಾಕೆಟ್ಗಳನ್ನು ಸಿದ್ಧಪಡಿಸುತ್ತಿದ್ದವು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಮತ್ತಷ್ಟು ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಆಯಿಲ್ ಟ್ಯಾಂಕರ್ಗೆ ಇರಾನ್ ನೌಕಾಪಡೆ ಎಚ್ಚರಿಕೆ: ಹಿಂದಿರುಗಿದ ಹಾನಾ ಹಡಗು
ಜಲಮಾರ್ಗದ ರಕ್ಷಣೆ: ಕಚ್ಚಾ ತೈಲ ಸಾಗಣೆಯ ಮುಕ್ತ ಹರಿವನ್ನು ಕಾಪಾಡಲು ಮತ್ತು ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಭದ್ರತೆ ಒದಗಿಸಲು ಲಾರಕ್ ದ್ವೀಪದಲ್ಲಿದ್ದ ಲಾಂಚರ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಯುಎಸ್ ನೌಕಾಪಡೆ ಸ್ಪಷ್ಟಪಡಿಸಿದೆ.
ವಾಯುನೆಲೆಗಳ ಮೇಲೆ ದಾಳಿ: ಅಮೆರಿಕ ದಾಳಿಯಲ್ಲಿ ತನ್ನ ಸೈನಿಕರು ಮೃತಪಟ್ಟ ಬೆನ್ನಲ್ಲೇ ಕೆರಳಿದ ಇರಾನ್, ಜೋರ್ಡಾನ್ನಲ್ಲಿರುವ ಕಿಂಗ್ ಹುಸೇನ್ ಮತ್ತು ಅಲ್-ಅಜ್ರಾಕ್ ಯುಎಸ್ ಏರ್ಬೇಸ್ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಭಾರೀ ಹಾನಿಯ ವಾದ: ಅಮೆರಿಕದ ಫೈಟರ್ ಜೆಟ್ಗಳು, ನಿರ್ವಹಣಾ ಘಟಕಗಳು ಹಾಗೂ ತಾಂತ್ರಿಕ ಮೂಲಸೌಕರ್ಯಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಪ್ರಕಟಿಸಿವೆ.
ಕಚ್ಚಾ ತೈಲ ಬೆಲೆ ಏರಿಕೆ: ದಾಳಿಯ ಬೆನ್ನಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 90.31 ಡಾಲರ್ಗೆ ಹಾಗೂ ಯುಎಸ್ ಡಬ್ಲ್ಯುಟಿಐ (WTI) ಕಚ್ಚಾ ತೈಲ ಬೆಲೆ 85.41 ಡಾಲರ್ಗೆ ಜಿಗಿದಿದೆ.
ಟ್ರಂಪ್ ವಿರುದ್ಧ ಸೆನೆಟ್ ಅಸಮಾಧಾನ: ನವೆಂಬರ್ನಲ್ಲಿ ಯುಎಸ್ ಮಧ್ಯಾವಧಿ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಲ್ಲೇ, ಸೆನೆಟ್ನ ಉನ್ನತ ಡೆಮಾಕ್ರಟಿಕ್ ನಾಯಕ ಜ್ಯಾಕ್ ರೀಡ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯುದ್ಧ ನೀತಿಯನ್ನು ತೀವ್ರವಾಗಿ ಖಂಡಿಸಿದ್ದು, ಆರು ತಿಂಗಳು ಕಳೆದರೂ ಅಮೆರಿಕ ಯಾವುದೇ ಗುರಿ ಸಾಧಿಸಿಲ್ಲ, ಬದಲಿಗೆ ಮಧ್ಯಪ್ರಾಚ್ಯದಲ್ಲಿ ದೇಶದ ಸ್ಥಾನಮಾನ ಕುಸಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾರ್ಮುಜ್ ಜಲಸಂಧಿಯ ಮಹತ್ವ: ಜಾಗತಿಕ ತೈಲ ಸಾಗಣೆಯ ಸುಮಾರು ಶೇಕಡಾ 20 ರಷ್ಟು ಭಾಗ ಈ ಕಿರಿದಾದ ಜಲಮಾರ್ಗದ ಮೂಲಕವೇ ಹಾದುಹೋಗುತ್ತದೆ. ಇಲ್ಲಿನ ಯಾವುದೇ ಅಡಚಣೆಯು ಜಾಗತಿಕವಾಗಿ ಪೆಟ್ರೋಲಿಯಂ, ಎಲ್ಪಿಜಿ ಮತ್ತು ರಸಗೊಬ್ಬರಗಳ ತೀವ್ರ ಅಭಾವಕ್ಕೆ ಕಾರಣವಾಗುತ್ತದೆ.
ವಿಫಲವಾದ ರಾಜತಾಂತ್ರಿಕ ಸಂಧಾನ: ಕತಾರ್ ಮತ್ತು ಪಾಕಿಸ್ತಾನ ದೇಶಗಳು ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ತರಲು ಸತತ ಮಧ್ಯಸ್ಥಿಕೆ ವಹಿಸುತ್ತಿದ್ದರೂ, ಅಂತಿಮ ಶಾಂತಿ ಒಪ್ಪಂದ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ