ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಆಯಿಲ್ ಟ್ಯಾಂಕರ್ಗೆ ಇರಾನ್ ನೌಕಾಪಡೆ ಎಚ್ಚರಿಕೆ: ಹಿಂದಿರುಗಿದ ಹಾನಾ ಹಡಗು
ಇರಾನ್ ನೌಕಾಪಡೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ತೈಲ ಟ್ಯಾಂಕರ್ 'ಹಾನಾ'ಗೆ ತಡೆ ಒಡ್ಡಿ ಎಚ್ಚರಿಕೆ ನೀಡಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆ ಈ ಘಟನೆ ಜಾಗತಿಕ ತೈಲ ಪೂರೈಕೆ, ವಿಶೇಷವಾಗಿ ಭಾರತದ ಇಂಧನ ಆಮದಿಗೆ ಸಂಕಷ್ಟ ತಂದೊಡ್ಡಿದೆ. ಇರಾನ್ನ ಕಠಿಣ ಷರತ್ತುಗಳು ಮತ್ತು ಯುಎಸ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಲಸಂಧಿಯ ಮುಕ್ತ ಸಂಚಾರ ಅನಿಶ್ಚಿತವಾಗಿದೆ, ಅಂತರರಾಷ್ಟ್ರೀಯ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ.

ಟೆಹ್ರಾನ್, ಆಗಸ್ಟ್ 27: ಜಾಗತಿಕ ಇಂಧನ ಸಾಗಣೆಯ ಪ್ರಮುಖ ನರನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ ( ದಕ್ಷಿಣ ಮಾರ್ಗದಲ್ಲಿ ಹಾದುಹೋಗಲು ಯತ್ನಿಸುತ್ತಿದ್ದ ‘ಹಾನಾ’ (HAANA) ಹೆಸರಿನ ಭಾರತೀಯ ತೈಲ ಟ್ಯಾಂಕರ್ಗೆ ಇರಾನ್(Iran)ನ ನೌಕಾಪಡೆಯು ತಡೆ ಒಡ್ಡಿ ಎಚ್ಚರಿಕೆ ನೀಡಿದೆ. ಇರಾನ್ನ ಎಚ್ಚರಿಕೆಯ ಬೆನ್ನಲ್ಲೇ ಭಾರತೀಯ ಹಡಗು ಮಾರ್ಗ ಬದಲಿಸಿ ಹಿಂದೆ ಸರಿದಿದೆ ಎಂದು ಇರಾನ್ನ ಅರೆ-ಅಧಿಕೃತ ಸುದ್ದಿ ಸಂಸ್ಥೆ ‘ಫಾರ್ಸ್’ ವರದಿ ಮಾಡಿದೆ.
ಪಶ್ಚಿಮ ಏಷ್ಯಾದ ಯುದ್ಧದ ನಡುವೆ ಹಾರ್ಮುಜ್ ಜಲಮಾರ್ಗದಲ್ಲಿ ವಾಣಿಜ್ಯ ನೌಕೆಗಳ ಸಂಚಾರವನ್ನು ಪುನರಾರಂಭಿಸಲು ಇರಾನ್ ಮತ್ತು ಒಮಾನ್ ನಡುವೆ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗಲೇ ಈ ಬಿಕ್ಕಟ್ಟು ಎದುರಾಗಿದೆ.
ದಕ್ಷಿಣ ಕಾರಿಡಾರ್ನಲ್ಲಿ ಅಡಚಣೆ: ಓಮನ್ ಕಾರಿಡಾರ್ ಎಂದು ಕರೆಯಲ್ಪಡುವ ದಕ್ಷಿಣ ಮಾರ್ಗದ ಮೂಲಕ ಸಾಗಲು ಯತ್ನಿಸಿದ ಭಾರತೀಯ ಹಡಗನ್ನು ತಡೆದ ಇರಾನ್ ಪಡೆಗಳು, ಕಳೆದ ೨೪ ಗಂಟೆಗಳಲ್ಲಿ ಈ ಮಾರ್ಗದಲ್ಲಿ ಯಾವುದೇ ಸಂಚಾರಕ್ಕೆ ಅವಕಾಶ ನೀಡಿಲ್ಲ.
ತೀರಾ ಕುಸಿದ ಹಡಗು ಸಂಚಾರ: ಕೆಪ್ಲರ್ (Kpler) ಸಂಸ್ಥೆಯ ಸಾಗಣೆ ದತ್ತಾಂಶದ ಪ್ರಕಾರ, ಸಾಮಾನ್ಯ ದಿನಗಳಲ್ಲಿ ಸರಾಸರಿ 15 ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ ಮಂಗಳವಾರ ಕೇವಲ 5 ಹಡಗುಗಳು ಮಾತ್ರ ಅತಿ ಹೆಚ್ಚಿನ ಅಪಾಯದ ನಡುವೆ ಸಾಗಿವೆ.
ತಾತ್ಕಾಲಿಕ ಕಾರಿಡಾರ್ ಪ್ರಸ್ತಾವನೆ: ಸುರಕ್ಷಿತ ಕಡಲ ಸಂಚಾರಕ್ಕಾಗಿ ತಾತ್ಕಾಲಿಕ ಜಂಟಿ ಹಡಗು ಕಾರಿಡಾರ್ ರಚನೆ ಹಾಗೂ ಸಮುದ್ರದಲ್ಲಿ ಹೂತಿರುವ ಮೈನ್ಗಳನ್ನು (Mines) ತೆರವುಗೊಳಿಸಲು ಒಮಾನ್ ವಿದೇಶಾಂಗ ಸಚಿವ ಬದ್ರ್ ಅಲ್ಬುಸೈದಿ ಇರಾನ್ ಜೊತೆ ಚರ್ಚೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ:ನಮ್ಮ ಹಾಗೂ ಇರಾನ್ ವ್ಯಾಪಾರದಲ್ಲಿ ಅಮೆರಿಕ ಮೂಗು ತೂರಿಸಬೇಡಿ: ಟ್ರಂಪ್ ಆರ್ಥಿಕ ನಿರ್ಬಂಧಗಳಿಗೆ ಚೀನಾ ಖಡಕ್ ಎಚ್ಚರಿಕೆ
ಟೆಹ್ರಾನ್ ಕಠಿಣ ಷರತ್ತು: ಕೇವಲ ಒಮಾನ್ ಜೊತೆಗಿನ ಒಪ್ಪಂದದಿಂದ ಜಲಸಂಧಿ ತೆರೆಯುವುದಿಲ್ಲ; ಇರಾನಿಯನ್ ಬಂದರುಗಳ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನ ತೆರವು ಹಾಗೂ ಹಾನಿ ಪರಿಹಾರ ನೀಡಿದರೆ ಮಾತ್ರ ಸಂಪೂರ್ಣ ಮುಕ್ತ ಸಂಚಾರ ಸಾಧ್ಯ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸ್ಪಷ್ಟಪಡಿಸಿದೆ.
45 ಹಡಗುಗಳ ಕಪ್ಪುಪಟ್ಟಿ: ಇರಾನ್ ನಿರ್ಬಂಧ ಕಣ್ತಪ್ಪಿಸಿ ತೈಲ ವರ್ಗಾವಣೆ ಮಾಡುತ್ತಿದ್ದ 45 ಸರಕು ಹಡಗುಗಳನ್ನು ಇರಾನ್ ಕಪ್ಪುಪಟ್ಟಿಗೆ ಸೇರಿಸಿದೆ.
ಭಾರತದ ಮೇಲಿನ ನೇರ ಪರಿಣಾಮ: ಭಾರತವು ತನ್ನ ಕಚ್ಚಾ ತೈಲ ಆಮದಿನ ಶೇಕಡಾ 60 ಕ್ಕೂ ಹೆಚ್ಚು ಪಾಲನ್ನು ಮತ್ತು ಎಲ್ಎನ್ಜಿ (LNG) ಅನಿಲವನ್ನು ಪರ್ಷಿಯನ್ ಕೊಲ್ಲಿಯಿಂದ ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ ತರಿಸಿಕೊಳ್ಳುತ್ತದೆ. ಈ ಮಾರ್ಗದಲ್ಲಿನ ಸಣ್ಣ ಅಡಚಣೆಯೂ ಭಾರತದಲ್ಲಿ ಇಂಧನ ಪೂರೈಕೆ ಮತ್ತು ತೈಲ ಬೆಲೆಗಳ ಮೇಲೆ ಒತ್ತಡ ತರಬಹುದು.
ಜಾಗತಿಕ ತೈಲ ಮಾರುಕಟ್ಟೆ: ವಿಶ್ವದ ಒಟ್ಟು ತೈಲ ಮತ್ತು ಅನಿಲ ವ್ಯಾಪಾರದ 20 ಪ್ರತಿಶತ (ಐದನೇ ಒಂದು ಭಾಗ) ಈ ಜಲಸಂಧಿಯ ಮೂಲಕವೇ ಸಾಗುವುದರಿಂದ, ಬಿಕ್ಕಟ್ಟು ಶಮನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಪ್ರಯತ್ನಗಳು ತೀವ್ರಗೊಂಡಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




