AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್‌ ಜೊತೆ ಮಾತುಕತೆ ಓಕೆ, ವ್ಯಾಪಾರ ಒಪ್ಪಂದಕ್ಕೆ ಕೈಹಾಕಬೇಡಿ: ಭಾರತಕ್ಕೆ ನಯವಾಗಿಯೇ ಎಚ್ಚರಿಕೆ ರವಾನಿಸಿದ ಅಮೆರಿಕ

ಅಮೆರಿಕವು ಭಾರತಕ್ಕೆ ಇರಾನ್ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದೆ. ಇರಾನ್‌ಗೆ ಆರ್ಥಿಕ ನೆರವು ನೀಡಿದರೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಭಯೋತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಇರಾನ್ ಹಣ ಬಳಸುತ್ತದೆ ಎಂದು ಅಮೆರಿಕ ಆರೋಪಿಸಿದೆ. ಚಬಹಾರ್ ಬಂದರು ಯೋಜನೆಯಲ್ಲಿರುವ ಭಾರತವು ಅಮೆರಿಕದೊಂದಿಗಿನ ಸಂಬಂಧ ಮತ್ತು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವ ಸವಾಲನ್ನು ಎದುರಿಸುತ್ತಿದೆ.

ಇರಾನ್‌ ಜೊತೆ ಮಾತುಕತೆ ಓಕೆ, ವ್ಯಾಪಾರ ಒಪ್ಪಂದಕ್ಕೆ ಕೈಹಾಕಬೇಡಿ: ಭಾರತಕ್ಕೆ ನಯವಾಗಿಯೇ ಎಚ್ಚರಿಕೆ ರವಾನಿಸಿದ ಅಮೆರಿಕ
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Sep 03, 2026 | 11:24 AM

Share

ವಾಷಿಂಗ್ಟನ್, ಸೆಪ್ಟೆಂಬರ್ 03: ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದ ಬೆನ್ನಲ್ಲೇ, ಅಮೆರಿಕವು ಭಾರತಕ್ಕೆ ನಯವಾಗಿಯೇ ಎಚ್ಚರಿಕೆಯ ಸಂದೇಶ ರವಾನಿಸಿದೆ. ಪ್ರತಿಯೊಂದು ದೇಶಕ್ಕೂ ಸ್ವತಂತ್ರ ವಿದೇಶಾಂಗ ನೀತಿಯಿದೆ ಎಂಬುದನ್ನು ಒಪ್ಪಿಕೊಂಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಅಮೆರಿಕದ ನಿರ್ಬಂಧಗಳನ್ನು ಮೀರಿ ಇರಾನ್‌ಗೆ ಆರ್ಥಿಕ ನೆರವು ಅಥವಾ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ರಾಷ್ಟ್ರವಾದರೂ ಕಠಿಣ ದಂಡ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಿರ್ಗಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ವೇಳೆ ಭಾರತ ಮತ್ತು ಇರಾನ್ ನಡುವೆ ಯಾವುದೇ ಹೊಸ ವಾಣಿಜ್ಯ ಒಪ್ಪಂದ ನಡೆದಿಲ್ಲ ಎಂದು ರೂಬಿಯೊ ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವುದೇ ನೆಪದಲ್ಲೂ ಇರಾನ್‌ಗೆ ಆದಾಯ ತಂದುಕೊಡುವ ವ್ಯವಸ್ಥೆಗಳಿಗೆ ಬೆಂಬಲ ನೀಡಬಾರದು ಎಂದು ಜಾಗತಿಕ ರಾಷ್ಟ್ರಗಳಿಗೆ ತಾಕೀತು ಮಾಡಿದ್ದಾರೆ.

ಇರಾನ್ ಆ ಹಣವನ್ನು ಭಯೋತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ ತಯಾರಿಸಲು ಬಳಸುತ್ತದೆ ಎಂದಿರುವ ಅವರು, ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿರುವವರೆಗೂ ಇರಾನ್ ಪರಮಾಣು ಬಾಂಬ್ ಹೊಂದುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಅಮೆರಿಕದ ಈ ಸೂಕ್ಷ್ಮ ಎಚ್ಚರಿಕೆಯು ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಭಾರತವು ಇರಾನ್‌ನಲ್ಲಿರುವ ಚಬಹಾರ್ ಬಂದರು ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು, ಮಧ್ಯ ಏಷ್ಯಾದೊಂದಿಗೆ ಸಂಪರ್ಕ ಸಾಧಿಸಲು ಇದು ಕಾರ್ಯತಂತ್ರದ ನೆಲೆಯಾಗಿದೆ.

ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ವಾಷಿಂಗ್ಟನ್ ಜತೆಗಿನ ಸಂಬಂಧಕ್ಕೂ ಧಕ್ಕೆಯಾಗದಂತೆ ಹಾಗೂ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನವದೆಹಲಿ ಎಚ್ಚರಿಕೆಯ ರಾಜತಾಂತ್ರಿಕ ಹೆಜ್ಜೆಗಳನ್ನು ಇಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಕಿರ್ಗಿಸ್ತಾನ ಭೇಟಿ: ಹಾರ್ಮುಜ್​ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ

ವ್ಯಾಪಾರ ವರದಿಗಳ ತಿರಸ್ಕಾರ: ಪ್ರಧಾನಿ ಮೋದಿ ಮತ್ತು ಪೆಜೆಶ್ಕಿಯನ್ ಮಾತುಕತೆಯ ನಂತರ ಉಭಯ ದೇಶಗಳು ಹೊಸ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ ಎಂಬ ವರದಿಗಳನ್ನು ರೂಬಿಯೊ ತಳ್ಳಿಹಾಕಿದ್ದಾರೆ.

ಸ್ವತಂತ್ರ ವಿದೇಶಾಂಗ ನೀತಿಗೆ ಮನ್ನಣೆ: ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿ ಇರುತ್ತದೆ ಮತ್ತು ಅನೇಕ ದೇಶಗಳು ಇರಾನ್ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಪರ್ಕದಲ್ಲಿವೆ ಎಂಬುದನ್ನು ಅಮೆರಿಕ ಒಪ್ಪಿಕೊಳ್ಳುತ್ತದೆ ಎಂದಿದ್ದಾರೆ.

ಆದಾಯ ಗಳಿಕೆಗೆ ನೆರವಾದರೆ ನಿರ್ಬಂಧ: “ಯಾವುದೇ ದೇಶವು ಇರಾನ್‌ಗೆ ಆದಾಯ ತರುವ ವ್ಯವಸ್ಥೆಗಳನ್ನು ರೂಪಿಸಬಾರದು. ಏಕೆಂದರೆ ಆ ಹಣವನ್ನು ಟೆಹ್ರಾನ್ ಭಯೋತ್ಪಾದನೆಗೆ ಮತ್ತು ಪರಮಾಣು ಶಸ್ತ್ರಾಸ್ತ್ರ ತಯಾರಿಸಲು ಬಳಸುತ್ತದೆ. ನಿಯಮ ಉಲ್ಲಂಘಿಸಿ ಸಹಾಯ ಮಾಡುವ ದೇಶಗಳ ಮೇಲೂ ಅಮೆರಿಕ ಕಠಿಣ ನಿರ್ಬಂಧಗಳನ್ನು ವಿಧಿಸಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಪರಮಾಣು ಬಾಂಬ್ ಹೊಂದಲು ಬಿಡೆವು: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿರುವವರೆಗೂ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ; ಅಗತ್ಯಬಿದ್ದರೆ ಸೇನಾ ಬಲ ಬಳಸಲು ಅಮೆರಿಕ ಹಿಂಜರಿಯುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಅಮೆರಿಕದ ನಿರಂತರ ದಾಳಿ: ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಅಮೆರಿಕ ಪಡೆಗಳು ಭಾರಿ ಕ್ಷಿಪಣಿ ದಾಳಿಗಳನ್ನು ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಇರಾನ್ ಎಚ್ಚರಿಕೆ: ಅಮೆರಿಕದ ದಿಗ್ಬಂಧನಗಳನ್ನು ಎದುರಿಸಲು ತಾವು ಹೊಸ ಸಮರ ತಂತ್ರವನ್ನು ಅಳವಡಿಸಿಕೊಂಡಿದ್ದು, ಇದು ಶತ್ರುಗಳ ಅಡಿಪಾಯವನ್ನೇ ಅಲ್ಲಾಡಿಸಲಿದೆ ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ ಎಚ್ಚರಿಸಿದೆ.

ಚಬಹಾರ್ ಬಂದರು ಮತ್ತು ಭಾರತದ ಹಿತಾಸಕ್ತಿ: ಇರಾನ್‌ನಲ್ಲಿರುವ ಚಬಹಾರ್ ಬಂದರು ಭಾರತಕ್ಕೆ ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕಾರ್ಯತಂತ್ರದ ಹೆಬ್ಬಾಗಿಲಾಗಿದೆ. ಈ ಯೋಜನೆಗೆ ಈ ಹಿಂದೆ ಅಮೆರಿಕದಿಂದ ವಿನಾಯಿತಿ ಸಿಕ್ಕಿತ್ತಾದರೂ, ಪ್ರಸ್ತುತ ಟ್ರಂಪ್ ಆಡಳಿತದ ಬಿಗಿ ನಿಲುವಿನಿಂದಾಗಿ ಭಾರತವು ಸೂಕ್ಷ್ಮ ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಚ್ಚಾ ತೈಲ ಆಮದು ನಿಯಂತ್ರಣ: ಅಮೆರಿಕದ ಹಿಂದಿನ ನಿರ್ಬಂಧಗಳ ಕಾರಣದಿಂದಾಗಿ ಭಾರತವು ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ಬಹುತೇಕ ಸ್ಥಗಿತಗೊಳಿಸಿ, ರಷ್ಯಾ ಮತ್ತು ಕೊಲ್ಲಿ ರಾಷ್ಟ್ರಗಳತ್ತ ಮುಖ ಮಾಡಿತ್ತು. ಈಗಿನ ಹೊಸ ಎಚ್ಚರಿಕೆಯು ಭಾರತದ ಇಂಧನ ಮತ್ತು ಸರಕು ಸಾಗಣೆ ವ್ಯಾಪಾರದ ಮೇಲೆ ಪರಿಣಾಮ ಬೀರದಂತೆ ನವದೆಹಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us