Budget 2024: ಬಜೆಟ್ ಮಂಡನೆಗೂ ಮೊದಲು ನಿರ್ಮಲಾ ಸೀತಾರಾಮನ್​ಗೆ ಸಿಹಿ ಮೊಸರು ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

|

Updated on: Jul 23, 2024 | 10:41 AM

Union Budget 2024: ಮೂರನೇ ಅವಧಿಗೆ ಎನ್​ಡಿಎ ಸರ್ಕಾರ ಮರು ಆಯ್ಕೆಯಾದ ನಂತರ 2024ರ ಹೊಸ ಸರ್ಕಾರದ ಮೊದಲ ಪೂರ್ಣ ವರ್ಷದ ಬಜೆಟ್ ಇದಾಗಿದೆ. ಮಧ್ಯಮ ವರ್ಗದ ತೆರಿಗೆದಾರರ ಆರ್ಥಿಕ ಹೊರೆಯನ್ನು ತಗ್ಗಿಸುವ ಗುರಿಯನ್ನು ನಿರ್ಮಲಾ ಸೀತಾರಾಮನ್ ಅವರು ಪರಿಚಯಿಸುತ್ತಾರೆ ಎಂಬ ಭರವಸೆ ಹೆಚ್ಚಿದೆ.

Budget 2024: ಬಜೆಟ್ ಮಂಡನೆಗೂ ಮೊದಲು ನಿರ್ಮಲಾ ಸೀತಾರಾಮನ್​ಗೆ ಸಿಹಿ ಮೊಸರು ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನಿರ್ಮಲಾ ಸೀತಾರಾಮನ್​ಗೆ ಸಿಹಿ ಮೊಸರು ತಿನ್ನಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
Follow us on

ನವದೆಹಲಿ: ಇನ್ನೇನು ಕೆಲವೇ ಕ್ಷಣಗಳಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿರುವುದರಿಂದ ಸಹಜವಾಗಿಯೇ ಜನರ ಕುತೂಹಲ ಹೆಚ್ಚಾಗಿದೆ. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಿಹಿ ಮೊಸರು ತಿನ್ನಿಸಿ ಶುಭ ಹಾರೈಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 23) ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 2024ರ ಬಜೆಟ್ ಮಂಡನೆಗೆ ಮುನ್ನ ಸಿಹಿ ಹಾಕಿದ ಮೊಸರು ತಿನ್ನಿಸಿದರು. ಇದನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ತೆರಳುವ ಮೊದಲು ರಾಷ್ಟ್ರಪತಿಗಳನ್ನು ಭೇಟಿ ಮಾಡಲು ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು. ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ.

ಇದನ್ನೂ ಓದಿ: Nirmala Sitharaman Budget 2024 LIVE: ಕೇಂದ್ರ ಬಜೆಟ್; ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ನಿರ್ಮಲಾ ಸೀತಾರಾಮನ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರ್ಣಾಯಕ ಎರಡನೇ ಅವಧಿಗೆ ಆಯ್ಕೆಯಾದಾಗ 2019ರಲ್ಲಿ ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರು ಅಂದಿನಿಂದ ಪ್ರತಿ ವರ್ಷವೂ ಕೇಂದ್ರ ಬಜೆಟ್ ಅನ್ನು ನಿರಂತರವಾಗಿ ಮಂಡಿಸಿದ್ದಾರೆ.


ಕೇಂದ್ರ ಬಜೆಟ್ ಕೃಷಿ ಮತ್ತು ಮೂಲಸೌಕರ್ಯದಿಂದ ಶಿಕ್ಷಣ ಮತ್ತು ಆರೋಗ್ಯದವರೆಗೆ ವಿವಿಧ ಕ್ಷೇತ್ರಗಳನ್ನು ಒಳಗೊಳ್ಳುವುದರಿಂದ, ಇದು ಸರ್ಕಾರದ ಆದ್ಯತೆಗಳು ಮತ್ತು ಉಪಕ್ರಮಗಳ ಒಳನೋಟಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತಿಂಗಳು ಪುನರಾಯ್ಕೆಯಾದ ನಂತರ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಬಜೆಟ್ ಇದಾಗಿದೆ. ಈ ಬಜೆಟ್ ಮಂಡನೆ ಹಣದುಬ್ಬರವನ್ನು ನಿಭಾಯಿಸಲು, ಉದ್ಯೋಗವನ್ನು ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಸರ್ಕಾರದ ಯೋಜನೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಇದನ್ನೂ ಓದಿ: Union budget 2024: ಬಜೆಟ್ ಮಂಡಿಸಲು ಕೈಯಲ್ಲಿ ಕೆಂಪು ಟ್ಯಾಬ್ ಹಿಡಿದು ತಮ್ಮ ಕಚೇರಿಯಿಂದ ಹೊರಬಿದ್ದ ನಿರ್ಮಲಾ ಸೀತಾರಾಮನ್

ಈ ಬಾರಿಯ ಬಜೆಟ್​ನಲ್ಲಿ ಮಧ್ಯಮ ವರ್ಗದ ತೆರಿಗೆದಾರರು ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಮೂಲಭೂತ ವಿನಾಯಿತಿ ಮಿತಿಯ ಹೆಚ್ಚಳ ಸಿಗಬಹುದು ಎಂದು ಆಶಿಸಿದ್ದಾರೆ. ಇದು ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸುವುದರಿಂದ ಹಿಡಿದು ಹೊಸ ತೆರಿಗೆ ಪದ್ಧತಿಯಲ್ಲಿ ಮೂಲ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದರಿಂದ ಬಂಡವಾಳ ಲಾಭಗಳ ತೆರಿಗೆ ರಚನೆಯನ್ನು ಸರಳಗೊಳಿಸುವವರೆಗೆ, ತೆರಿಗೆದಾರರು ಮತ್ತು ತಜ್ಞರು ಜನಸಾಮಾನ್ಯರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಬದಲಾವಣೆಗಳನ್ನು ನಿರೀಕ್ಷಿಸುತ್ತಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ