ಕೇಂದ್ರ ಬಜೆಟ್: ಕರ್ನಾಟಕಕ್ಕೆ ಬೆಟ್ಟದಷ್ಟು ನಿರೀಕ್ಷೆ, ಏನೇನು ಸಿಗಬಹುದು?
Union Budget 2025: 2025ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆಯಾಗುತ್ತಿದೆ. ಸತತ ಎಂಟನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದು, ಇತ್ತ ಕೇಂದ್ರದ ಬಜೆಟ್ ಮೇಲೆ ಕರ್ನಾಟಕದಲ್ಲಿಯೂ, ಅದರಲ್ಲೂ ಬೆಂಗಳೂರಿನಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ. ರಾಜ್ಯದ ಜನರಿಗಿರುವ ನಿರೀಕ್ಷೆಗಳೇನು, ಕೃಷಿ, ಕೈಗಾರಿಕೆ ಸೇರಿ ವಿವಿಧ ವಲಯಗಳ ನಿರೀಕ್ಷೆಗಳೇನು? ಇಲ್ಲಿದೆ ವಿವರ.

ಬೆಂಗಳೂರು, ಫೆಬ್ರವರಿ 1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ಇಂದು ಮಂಡನೆಯಾಗುತ್ತಿದೆ. ಶುಕ್ರವಾರದಿಂದ ಬಜೆಟ್ ಅಧಿವೇಶನ ಶುರುವಾಗಿದ್ದು ಸಚಿವೆ ನಿರ್ಮಲಾಸೀತಾರಾಮನ್ ಎಂಟನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ ಮೇಲೆ ರಾಜ್ಯದಲ್ಲೂ ಹಲವು ನಿರೀಕ್ಷೆಗಳು ಗರಿಗೆದರಿವೆ. ವಿವಿಧ ಕ್ಷೇತ್ರಗಳಿಂದ ಬೆಟ್ಟದಷ್ಟು ನಿರೀಕ್ಷೆಗಳು ವ್ಯಕ್ತವಾಗ್ತಿವೆ. ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಈಗಾಗಲೇ ಕೇಂದ್ರದ ಮುಂದೆ ಒಂದಷ್ಟು ಪ್ರಸ್ತಾವನೆ ಇಟ್ಟಿದ್ದು ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಅನುದಾನ ನೀಡುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಕಾತುರರಾಗಿದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ತೆರಿಗೆಗಳು ಹಾಗೂ ಹೊಸ ಯೋಜನೆಗಳ ಘೋಷಣೆಯ ನಿರೀಕ್ಷೆ ಹೆಚ್ಚಾಗಿದ್ದು, ಇತ್ತ ಕಾರ್ಮಿಕರು, ಉದ್ಯೋಗಿಗಳು ಹಾಗೂ ಕೈಗಾರಿಕಾ ವಲಯ ಬಜೆಟ್ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದೆ. ಸದ್ಯ ತೆರಿಗೆಗಳ ಜೊತೆಗೆ ಉದ್ಯೋಗ ಸೃಷ್ಟಿ ಸೇರಿ ವಿವಿಧ ಕೊಡುಗೆಗಳನ್ನ ಎದುರು ನೋಡುತ್ತಿರುವ ರಾಜ್ಯದ ಜನರು ಕೇಂದ್ರ ಬಜೆಟ್ಗಾಗಿ ಆಸೆಗಣ್ಣಿನಿಂದ ಕಾದುಕುಳಿತಿದ್ದಾರೆ.
ಕರ್ನಾಟಕ ಕಾರ್ಮಿಕ ವಲಯದ ನಿರೀಕ್ಷೆಗಳೇನು?
- ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಪರಿಹಾರವನ್ನ ನೀಡಬಹುದು.
- ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80(C) ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿ ಪ್ರಸ್ತುತ 1.5 ಲಕ್ಷ ರೂ.ದ್ದು 2 ಲಕ್ಷ ರೂ.ಗೆ ಹೆಚ್ಚಿಸುವ ನಿರೀಕ್ಷೆಯಿದೆ.
- ಕಾರ್ಮಿಕ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ಯೋಜನೆ.
- ಮೂಲಸೌಕರ್ಯ ವೆಚ್ಚದಲ್ಲಿ ಹೆಚ್ಚಳ ಮಾಡಿ ಉದ್ಯೋಗ ಸೃಷ್ಟಿಸುವ ನಿರೀಕ್ಷೆ.
- MSME ಉತ್ತೇಜನ ನೀಡುವ ಮೂಲಕ ಉದ್ಯೋಗ ಸೃಷ್ಟಿಗೆ ಮೇಲೆ ಕೇಂದ್ರೀಕರಿಸುವುದು.
- ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಯೋಜನೆಯನ್ನ ತರಬಹುದು, ESIC ವ್ಯಾಪ್ತಿಗೆ ಸೇರಿಸಬಹುದು.
- ಕೃತಕ ಬುದ್ಧಿಮತ್ತೆ ಪ್ರೇರಿತ ಉದ್ಯೋಗ ನಷ್ಟದ ಮೇಲೆ ರೋಬೋಟ್ ತೆರಿಗೆ ವಿಧಿಸಬೇಕು ಎಂಬ ಬೇಡಿಕೆ ಇದೆ.
- ರೋಬೋಟ್ ತೆರಿಗೆಯನ್ನ ಉದ್ಯೋಗ ಕಳೆದುಕೊಳ್ಳುವ ಕಾರ್ಮಿಕರ ಉನ್ನತಿಗೆ ಬಳಸಬೇಕು ಅನ್ನೋ ಬೇಡಿಕೆ ಇದೆ.
ಬೆಂಗಳೂರಿನ ಬಜೆಟ್ ನಿರೀಕ್ಷೆಗಳೇನು?
- ಬೆಂಗಳೂರು ಉತ್ತರ- ದಕ್ಷಿಣ ಕಾರಿಡಾರ್ಗೆ 15 ಸಾವಿರ ಕೋಟಿ ರೂ ಅಗತ್ಯವಿದ್ದು ಈ ಬಗ್ಗೆ ಗಮನಹರಿಸೋ ನಿರೀಕ್ಷೆ.
- ರಿಂಗ್ ರಸ್ತೆ ಮೇಲ್ದರ್ಜೆಗೆ 8,916 ಕೋಟಿ ರೂ. ಗಳ ಅಗತ್ಯವಿದ್ದು ನೆರವಿನ ನಿರೀಕ್ಷೆ.
- ರಾಜ ಕಾಲುವೆ ನಿರ್ಣಹಣೆ, ವಿಸ್ತರಣೆಗೆ 3 ಸಾವಿರ ಕೋಟಿ ರೂ. ಅಗತ್ಯವಿದ್ದು ಅನುದಾನದ ನಿರೀಕ್ಷೆ.
- ಬೆಂಗಳೂರಿನ ಪ್ರಮುಖ 17 ಫ್ಲೈ ಓವರ್ಗೆ 12 ಸಾವಿರ ಕೋಟಿ ರೂ ಅಗತ್ಯವಿದ್ದು ಸಹಾಯದ ನಿರೀಕ್ಷೆ.
- ಬಿಸಿನೆಸ್ ಕಾರಿಡಾರ್ಗೆ 27 ಸಾವಿರ ಕೋಟಿ ಅನುದಾನ ಅಗತ್ಯತೆ ಇದ್ದು ಕೇಂದ್ರದ ಸಹಕಾರದ ನಿರೀಕ್ಷೆ.
ಬಜೆಟ್ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯ ಸರ್ಕಾರಕ್ಕೆ ಆಶಾಭಂಗವಾಗಿತ್ತು. ಹೀಗಾಗಿ ಈ ಬಾರೀಯ ಬಜೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಕಳೆದ ಬಾರಿ ಕೇಂದ್ರ ನೀಡಿದ್ದ ಆಶ್ವಾಸನೆಗಳೇ ಇನ್ನೂ ಈಡೇರಿಲ್ಲ, ಇನ್ನು ಈ ಬಾರಿ ಬಜೆಟ್ ಮೇಲೆ ಯಾವ ನಿರೀಕ್ಷೆ ಇಟ್ಟುಕೊಳ್ಳೋಣ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬಜೆಟ್ ಸಂಬಂಧಿತ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Sat, 1 February 25