ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ

AI Impact Summit 2026: ಎಐ ಇಂಪ್ಯಾಕ್ಟ್ ಸಮಿಟ್ 2026 ಇವತ್ತು ಆರಂಭವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಜಾಗತಿಕ ನಾಯಕರನ್ನು ಸಭೆಗೆ ಸ್ವಾಗತಿಸಿದ್ದಾರೆ. ಸರ್ವಜನ ಹಿತಾಯ, ಸರ್ವಜನ ಸುಖಾಯ ಎಂಬುದು ಈ ಸಮಿಟ್​ನ ಥೀಮ್ ಆಗಿದೆ. ಅದರಂತೆ ಎಐ ಅನ್ನು ಎಲ್ಲರಿಗೂ ಒಳಿತಾಗುವ ರೀತಿಯಲ್ಲಿ ಬಳಸಿಕೊಳ್ಳುವುದು ಭಾರತ ಹೊಂದಿರುವ ಬದ್ಧತೆ.

ಎಐ ಇಂಪ್ಯಾಕ್ಟ್ ಶೃಂಗಸಭೆ; ಭಾರತದ ಪ್ರಗತಿಗೆ ಇಗೋ ನೋಡಿ ಸಾಕ್ಷ್ಯ ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ

Updated on: Feb 16, 2026 | 11:49 AM

ನವದೆಹಲಿ, ಫೆಬ್ರುವರಿ 16: ರಾಷ್ಟ್ರ ರಾಜಧಾನಿಯ ಭಾರತ್ ಮಂಟಪಂನಲ್ಲಿ ಇವತ್ತಿನಿಂದ ಐದು ದಿನಗಳ ಕಾಲ ನಡೆಯುವ ಎಐ ಇಂಪ್ಯಾಕ್ಟ್ ಶೃಂಗಸಭೆಗೆ (AI Impact Summit 2026) ಜಾಗತಿಕ ನೇತಾರರು, ನಿಯೋಗಗಳು, ಉದ್ಯಮ ಮುಖಂಡರು ಮೊದಲಾದ ಅತಿಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಶೃಂಗಸಭೆಯ ಧ್ಯೇಯವಾಕ್ಯವಾದ ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಆಶಯದಂತೆ ಈ ಎಐ ಸಭೆಯು ಸರ್ವವರಿಗೂ ಒಳಿತಾಗುವ ಪ್ರಗತಿದಾಯಕ ಭವಿಷ್ಯಕ್ಕೆ ನಾಂದಿ ಹಾಡಬಲ್ಲುದು ಎಂದು ಪ್ರಧಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕೃತಕ ಬುದ್ಧಿಮತ್ತೆಯನ್ನು ಚರ್ಚಿಸಲು ಜಗತ್ತನ್ನು ಒಟ್ಟಿಗೆ ಸೇರಿಸುತ್ತಿದ್ದೇವೆ. ಇವತ್ತಿನಿಂದ ದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಆಯೋಜನೆಯಾಗುತ್ತಿದೆ. ಜಗತ್ತಿನಾದ್ಯಂತ ವಿಶ್ವ ನಾಯಕರು, ಉದ್ಯಮದ ನೇತಾರರು, ಇನ್ನೋವೇಟರ್​ಗಳು, ನೀತಿ ರೂಪಕರು, ಸಂಶೋಧಕರು, ತಂತ್ರಜ್ಞಾನ ಆಸಕ್ತರನ್ನು ಈ ಸಮಿಟ್​ಗೆ ಸ್ವಾಗತಿಸುತ್ತೇನೆ. ಸರ್ವಜನ ಹಿತಾಯ, ಸರ್ವಜನ ಸುಖಾಯ ಎಬುದು ಈ ಸಮಾವೇಶದ ಥೀಮ್ ಆಗಿದೆ. ಮಾನವ ಕೇಂದ್ರಿತವಾದ ಪ್ರಗತಿಗೆ ಆರ್ಟಿಫಿಶಿಯಲ್ ಇಂಟೆಲಿಜಜೆನ್ಸ್ ಅನ್ನು ಬಳಸಬೇಕೆನ್ನುವ ನಮ್ಮ ಬದ್ಧತೆಯನ್ನು ಈ ಶೃಂಗಸಭೆ ಪ್ರತಿಬಿಂಬಿಸುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು

ಶಿಕ್ಷಣ, ಹೆಲ್ತ್​ಕೇರ್, ಕೃಷಿ, ಆಡಳಿತ ಮತ್ತು ಉದ್ದಿಮೆಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಎಐನಿಂದ ಪರಿವರ್ತನೆ ಆಗುತ್ತಿದೆ. ಇನ್ನೋವೇಶನ್, ಸಹಭಾಗಿತ್ವ, ಜವಾಬ್ದಾರಿಯುತ ಬಳಕೆ ಮತ್ತಿತರ ವಿವಿಧ ಅಂಶಗಳಲ್ಲಿ ಜಾಗತಿಕ ವಿಚಾರ ವಿನಿಮಯವಾಗುವುದಕ್ಕೆ ಈ ಶೃಂಗಸಭೆ ವೇದಿಕೆ ಆಗುತ್ತಿದೆ. ಪ್ರಗತಿದಾಯಕವಾದ, ನಾವೀನ್ಯತೆಯುಳ್ಳ ಮತ್ತು ಅವಕಾಶಜನ್ಯವಾದ ಭವಿಷ್ಯವನ್ನು ರೂಪಿಸಲು ಈ ಶೃಂಗಸಭೆ ಸಹಾಯವಾಗಬಹುದೆನ್ನುವ ವಿಶ್ವಾಸ ಇದೆ ಎಂದು ಮೋದಿ ಹೇಳಿದ್ಧಾರೆ.

140 ಕೋಟಿ ಜನರಿಂದಾಗಿ ಭಾರತವು ಎಐ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್​ನಿಂದ ಹಿಡಿದು ಉತ್ತಮ ಸ್ಟಾರ್ಟಪ್ ಇಕೋಸಿಸ್ಟಂ ಮತ್ತು ಅತ್ಯಾಧುನಿಕ ಸಂಶೋಧನೆಯವರೆಗೂ ಎಐನಲ್ಲಿ ನಾವು ತೋರಿರುವ ಪ್ರಗತಿಯು ನಮ್ಮ ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರಿ ಎರಡನ್ನೂ ಪ್ರತಿಫಲಿಸುತ್ತದೆ ಎಂದೂ ಮೋದಿ ತಮ್ಮ ಸರಣಿ ಟ್ವೀಟ್​ಗಳಲ್ಲಿ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರ ಸರಣಿ ಟ್ವೀಟ್​ಗಳು

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

ಫೆಬ್ರುವರಿ 20ರವರೆಗೂ ನಡೆಯಲಿರುವ ಈ ಶೃಂಗಸಭೆಯಲ್ಲಿ ಜಗತ್ತಿನ ಟೆಕ್ ದೈತ್ಯರು ಪಾಲ್ಗೊಳ್ಳುತ್ತಿದ್ದಾರೆ. ಸುಂದರ್ ಪಿಚೈ, ಸ್ಯಾಮ್ ಆಲ್ಟ್​ಮ್ಯಾನ್, ಡೇರಿಯೋ ಅಮೊಡೇ, ಡೆಮಿಸ್ ಹಸಾಬಿಸ್, ಬಿಲ್ ಗೇಟ್ಸ್, ಯಾನ್ ಲೇಕುನ್, ಯೊಶುವಾ ಬೆಂಗಿಯೋ, ಬ್ರಾಡ್ ಸ್ಮಿತ್ ಮೊದಲಾದವರ ಉಪಸ್ಥಿತಿ ಇರಲಿದೆ.

ಎರಡು ಲಕ್ಷಕ್ಕೂ ಅಧಿಕ ಜನರು ಈ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಂಡಿದ್ದಾರೆ. ವಿವಿಧ ಎಐ ಆವಿಷ್ಕಾರಗಳ ಪ್ರದರ್ಶನಗಳು, ಸುಮಾರು 300 ಪೆವಿಲಿಯನ್​ಗಳು, ಲೈವ್ ಡೆಮಾನ್ಸ್​ಟ್ರೇಶನ್​ಗಳು, ಚರ್ಚೆಗಳು, ವಿಚಾರ ಮಂಡನೆ ಇತ್ಯಾದಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಈ ಐದು ದಿನದಲ್ಲಿ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ