ಚೀನಾ ಪರ್ವ ಮುಗಿಯಿತು; ಭಾರತವೊಂದೇ ಪ್ರಮುಖ ಆರ್ಥಿಕತೆಯಾಗಲಿದೆ: ಅರವಿಂದ್ ಪನಗರಿಯಾ ಕೊಟ್ಟ ಕಾರಣಗಳಿವು

|

Updated on: Mar 27, 2024 | 6:44 PM

India vs china growth story: ಭಾರತದ ಜಿಡಿಪಿ ವೃದ್ಧಿದರದ ಬಗ್ಗೆ ಅನುಮಾನ ಇದ್ದವರು ತಮ್ಮ ದೃಷ್ಟಿ ಸರಿಪಡಿಸಿಕೊಂಡು ನೋಡಲಿ ಎಂದು ನೀತಿ ಆಯೋಗ್ ಮಾಜಿ ವೈಸ್ ಛೇರ್ಮನ್ ಅರವಿಂದ್ ಪನಗರಿಯಾ ಹೇಳೀದ್ದಾರೆ. ಭಾರತಕ್ಕೆ ಎಲ್ಲಾ ಅಂಶಗಳು ಈಗ ಅನುಕೂಲವಾಗಿವೆ. ಕೇಂದ್ರದಲ್ಲಿ ಸಮರ್ಥ ನಾಯಕತ್ವ ಇದೆ. ಹಲವು ರಾಜ್ಯಗಳಲ್ಲೂ ಸಮರ್ಥ ನಾಯತ್ವ ಇದೆ. ಇದೆಲ್ಲವೂ ಭಾರತದ ಓಟವನ್ನು ಸರಾಗಗೊಳಿಸಿವೆ ಎಂದು ಪನಗರಿಯಾ ಅಭಿಪ್ರಾಯಪಟ್ಟಿದ್ದಾರೆ.

ಚೀನಾ ಪರ್ವ ಮುಗಿಯಿತು; ಭಾರತವೊಂದೇ ಪ್ರಮುಖ ಆರ್ಥಿಕತೆಯಾಗಲಿದೆ: ಅರವಿಂದ್ ಪನಗರಿಯಾ ಕೊಟ್ಟ ಕಾರಣಗಳಿವು
ಅರವಿಂದ್ ಪನಗರಿಯಾ
Follow us on

ನವದೆಹಲಿ, ಮಾರ್ಚ್ 27: ಶೇ. 7ರಿಂದ 8ರ ಆಸುಪಾಸಿನಲ್ಲಿ ಬೆಳೆಯುತ್ತಿರುವ ಭಾರತದ ಜಿಡಿಪಿ ವೃದ್ಧಿದರದ (GDP growth) ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕೆಲ ತಜ್ಞರ ಅನಿಸಿಕೆಯನ್ನು ಮಾಜಿ ನೀತಿ ಆಯೋಗ್ ಮುಖ್ಯಸ್ಥ ಅರವಿಂದ್ ಪನಗರಿಯಾ (Arvind Panagariya) ಅಲ್ಲಗಳೆದಿದ್ದಾರೆ. ನಿಮಗೆ ಮಸುಕಾಗಿ ಕಾಣುತ್ತಿದೆ ಎಂದರೆ ನೀವು ಧರಿಸಿರುವ ಕನ್ನಡಕದಲ್ಲಿರುವ ಮಂಜನ್ನು ನಿಮ್ಮ ದೃಷ್ಟಿಯನ್ನು ಮಸುಕಾಗಿಸುತ್ತಿದೆಯಾ ಪರೀಕ್ಷಿಸಿ ಎಂದು 16ನೇ ಹಣಕಾಸು ಆಯೋಗದ ಛೇರ್ಮನ್ ಕೂಡ ಆಗಿರುವ ಅರವಿಂದ್ ಪನಗರಿಯಾ ಕಟುವಾಗಿ ಹೇಳಿದ್ದಾರೆ. ಭಾರತದ ಜಿಡಿಪಿಯನ್ನು ಅಳೆಯುವ ಸಂಸ್ಥೆಯಲ್ಲಿ ಬಹಳ ವೃತ್ತಿಪರವಾದ ಮತ್ತು ನುರಿತ ಸಂಖ್ಯಾ ತಜ್ಞರಿದ್ದಾರೆ. ಇಂಥ ಸಂಸ್ಥೆಯಿಂದ ಬರುವ ದತ್ತಾಂಶದ ಬಗ್ಗೆ ಅನುಮಾನ ಪಡಲು ಹೇಗೆ ಸಾಧ್ಯ ಎಂದು ಪನಗರಿಯಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಹಲವು ವ್ಯಕ್ತಿಗಳು ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಜಿಡಿಪಿ ಲೆಕ್ಕಾಚಾರ ಸರಿಯಾಗಿ ಮಾಡಲಾಗುತ್ತಿಲ್ಲ ಎಂಬುದು ಇವರ ತಗಾದೆ. ಟೈಮ್ಸ್​ ನೌ ಸಮಿಟ್​ನಲ್ಲಿ ಪಾಲ್ಗೊಂಡಿದ್ದ ಅರವಿಂದ್ ಪನಗರಿಯಾ, ಭಾರತದ ಆರ್ಥಿಕ ಬೆಳವಣಿಗೆ ನೈಜವಾದುದು ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಭಾರತದ ಕರೆಂಟ್ ಅಕೌಂಟ್ ಡೆಫಿಸಿಟ್ ಈಗ 10.5 ಬಿಲಿಯನ್ ಡಾಲರ್; ಜಿಡಿಪಿಗೆ 1.2 ಪ್ರತಿಶತವಿರುವ ಸಿಎಡಿ

ಆರ್ಥಿಕ ತಜ್ಞ ಅರವಿಂದ್ ಪನಗರಿಯಾ ವ್ಯಕ್ತಪಡಿಸಿದ ಅಭಿಪ್ರಾಯಗಳ ಸಾರಾಂಶ

  • ಭಾರತದ ಜಿಡಿಪಿ ವೃದ್ಧಿದರದ ಬಗ್ಗೆ ಅನುಮಾನ ಇದ್ದವರು ತಮ್ಮ ದೃಷ್ಟಿ ಸರಿಪಡಿಸಿಕೊಂಡು ನೋಡಲಿ.
  • ಭಾರತ ಪ್ರಮುಖ ಶಕ್ತಿಯಾಗುವತ್ತ ಮುನ್ನಡೆದಿದೆ. ಅಭಿವೃದ್ಧಿಶೀಲ ದೇಶವೊಂದು 75 ವರ್ಷ ಕಾಲ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುತ್ತಿದೆ. ಭಾರತ, ಕೋಸ್ಟಾ ರಿಕಾ, ಜಮೈಕಾ ಇದಕ್ಕೆ ನಿದರ್ಶನವಾಗಿರುವ ಕೆಲವೇ ದೇಶಗಳು.
  • ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಒಮ್ಮತ ಮೂಡಲು ಸಮಯ ಹಿಡಿಯುತ್ತದೆ. ಆದರೆ, ಸರ್ವಾಧಿಕಾರದ ವ್ಯವಸ್ಥೆಯಲ್ಲಿ ನಾಯಕತ್ವ ಬದಲಾದರೆ ವ್ಯವಸ್ಥೆ ತಿರುವು ಮುರುವಾಗುತ್ತದೆ.
  • ಭಾರತಕ್ಕೆ ಮುಂದೆ ಪ್ರತಿಸ್ಪರ್ಧೆ ಇಲ್ಲವಾಗಿದೆ. ಅಮೆರಿಕ ಮತ್ತು ಯೂರೋಪ್ ಈಗ ಪ್ರೌಢಾವಸ್ತೆ ತಲುಪಿದ ಆರ್ಥಿಕತೆಯನ್ನು ಹೊಂದಿವೆ. ಅವು ಶೇ. 2 ಅಥವಾ 3ರಂತೆ ಬೆಳೆಯಬಲ್ಲುವು. ಚೀನಾ ಪ್ರಮುಖ ಪ್ರತಿಸ್ಪರ್ಧಿ ಆಗಬಹುದಿತ್ತು. ಆದರೆ ಅದರ ಪರ್ವ ಮುಗಿದಿದೆ. ಈಗ ಸ್ಪರ್ಧೆಯಲ್ಲಿ ಉಳಿಯುವ ಪ್ರಮುಖ ಆರ್ಥಿಕತೆ ಭಾರತ ಮಾತ್ರವೇ ಇರಲಿದೆ.
  • ಚೀನಾದ ಪ್ರಸಕ್ತ ನೀತಿಗಳು ಅದರ ಪ್ರಗತಿಗೆ ಹಿನ್ನಡೆ ತರುವಂಥದ್ದಾಗಿವೆ.
  • ಭಾರತದ ಜಿಡಿಪಿ 3.6 ಟ್ರಿಲಿಯನ್ ಡಾಲರ್ ಇದೆ. ಇದು ವೇಗದ ಬೆಳವಣಿಗೆಗೆ ಅವಶ್ಯಕವಾಗಿದೆ. ಈ ಹಿಂದೆ ನಮ್ಮ ಆರ್ಥಿಕತೆಯ ಬುಡ ಬಹಳ ಚಿಕ್ಕದಿತ್ತು. ಶೇ. 8 ಅಥವಾ 9ರಷ್ಟು ಬೆಳೆದರೂ ಅದು ಸಾಕಾಗುತ್ತಿರಲಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೇಪರ್ ವೆಲ್ತ್ ಹೆಚ್ಚು; ನಿಜವಾದ ಸಂಪತ್ತಲ್ಲ: ನಿಖಿಲ್ ಕಾಮತ್ ಹೀಗಂದಿದ್ದು ಯಾಕೆ?

  • ಭಾರತಕ್ಕೆ ಎಲ್ಲಾ ಅಂಶಗಳು ಈಗ ಅನುಕೂಲವಾಗಿವೆ. ಕೇಂದ್ರದಲ್ಲಿ ಸಮರ್ಥ ನಾಯಕತ್ವ ಇದೆ. ಹಲವು ರಾಜ್ಯಗಳಲ್ಲೂ ಸಮರ್ಥ ನಾಯತ್ವ ಇದೆ. ಇದೆಲ್ಲವೂ ಭಾರತದ ಓಟವನ್ನು ಅಬಾಧಿತವಾಗಿಸಿವೆ.
  • ಭಾರತ ಹಾಗೂ ಮುಂದುವರಿದ ದೇಶಗಳ ತಲಾದಾಯದ ನಡುವಿನ ಅಂತರ ಬಹಳ ಹೆಚ್ಚಿರುವುದು ಹೌದು. ತಂತ್ರಜ್ಞಾನ ಅವಳಡಿಕೆಗಳ ಮೂಲಕ ಅಸಮಾನ ಹಂಚಿಕೆಯನ್ನು ನಿವಾರಿಸಬಹುದು..

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ