PVN Rao: ಭಾರತ ರತ್ನ ಪಿ.ವಿ. ನರಸಿಂಹರಾವ್ ಪಿಎಂ ಆದಾಗ ಭಾರತದ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಅವರು ತಂದ ಪರಿವರ್ತನೆ ಹೇಗಿತ್ತು? ತಪ್ಪದೇ ನೋಡಿ

|

Updated on: Feb 09, 2024 | 5:31 PM

Bharat Ratna PV Narasimha Rao's contribution to Indian Economy: ಮಾಜಿ ಪ್ರಧಾನಿ, ಕಾಂಗ್ರೆಸ್ಸಿಗ ದಿವಂಗತ ಪಿವಿ ನರಸಿಂಹರಾವ್ ಅವರಿಗೆ ಸರ್ಕಾರ ಭಾರತ ರತ್ನ ಪ್ರಶಸ್ತಿ ಕೊಟ್ಟಿದೆ. ನರಸಿಂಹರಾವ್ 1991ರಿಂದ 1996ರವರೆಗೂ ದೇಶದ 9ನೇ ಪ್ರಧಾನಿಯಾಗಿದ್ದರು. ಬಿಕ್ಕಟ್ಟಿನಲ್ಲಿದ್ದ ದೇಶದ ಆರ್ಥಿಕತೆಗೆ ವಿವಿಧ ಸುಧಾರಣೆಗಳ ಮೂಲಕ ಪುಷ್ಟಿ ಕೊಟ್ಟ ಕೀರ್ತಿ ನರಸಿಂಹರಾವ್ ಹಾಗೂ ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರಿಗೆ ಸಲ್ಲಬೇಕು.

PVN Rao: ಭಾರತ ರತ್ನ ಪಿ.ವಿ. ನರಸಿಂಹರಾವ್ ಪಿಎಂ ಆದಾಗ ಭಾರತದ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಅವರು ತಂದ ಪರಿವರ್ತನೆ ಹೇಗಿತ್ತು? ತಪ್ಪದೇ ನೋಡಿ
ಪಿ.ವಿ. ನರಸಿಂಹರಾವ್
Follow us on

ನವದೆಹಲಿ, ಫೆಬ್ರುವರಿ 9: ತೊಂಬತ್ತರ ದಶಕದಲ್ಲಿ ಭಾರತದ ಪ್ರಧಾನಿಯಾಗಿದ್ದ ದಿವಂಗತ ಪಿ.ವಿ. ನರಸಿಂಹರಾವ್ (PV Narasimha Rao) ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಈ ಪ್ರಶಸ್ತಿ ನೀಡುವಿಕೆಯ ಹಿಂದೆ ಏನೇ ರಾಜಕೀಯ ಕಾರಣ ಇರಲಿ, ಭಾರತದ ಆರ್ಥಿಕತೆಯ ಪುನಶ್ಚೇತನ ತಂದ ಕೀರ್ತಿ ನರಸಿಂಹರಾವ್ ಅವರಿಗೆ ಸಲ್ಲುಬೇಕು ಎನ್ನುವ ವಾದ ಒಪ್ಪುವಂಥದ್ದೇ. 1991ರಿಂದ 1996ರವರೆಗೂ ಪಿ.ವಿ. ನರಸಿಂಹ ರಾವ್ ದೇಶದ ಪ್ರಧಾನಿಯಾಗಿದ್ದರು. ಅವರು ಭಾರತದ 9ನೇ ಪ್ರಧಾನಿ. ರಾಜೀವ್ ಗಾಂಧಿ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿತ್ತು. ಅದರ ಬೆನ್ನಲ್ಲೇ ರಾವ್ ಅವರಿಗೆ ಪ್ರಧಾನಿ ಪಟ್ಟ ಸಿಕ್ಕಿತು. ಲಾಲ್ ಬಹದ್ದೂರ್ ಶಾಸ್ತ್ರಿ ಬಳಿಕ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾದ ಮೊದಲ ಗಾಂಧಿಯೇತರ ಕುಟುಂಬದವರು ನರಸಿಂಹ ರಾವ್.

ನರಸಿಂಹರಾವ್ ಪಿಎಂ ಆದಾಗ ಭಾರತದ ಆರ್ಥಿಕತೆ ಡೋಲಾಯಮಾನ ಸ್ಥಿತಿಯಲ್ಲಿತ್ತು. ನಾನಾ ಸಮಸ್ಯೆಗಳು ಕಾಡುತ್ತಿದ್ದವು. ಐಎಂಎಫ್ ಇತ್ಯಾದಿ ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ಒತ್ತಡ ಇತ್ತು. 1990-91ರ ಅವಧಿಯಲ್ಲಿ ಭಾರತ ಎದುರಿಸುತ್ತಿದ್ದ ಒಂದಷ್ಟು ಪ್ರಮುಖ ಸಮಸ್ಯೆಗಳ ಪಟ್ಟಿ ಇಲ್ಲಿದೆ ನೋಡಿ:

  • ಭಾರತದ ಫಾರೆಕ್ಸ್ ರಿಸರ್ವ್ಸ್​ನಲ್ಲಿ 15 ದಿನಗಳ ಆಮದಿಗಾಗುವಷ್ಟು ಮಾತ್ರವೇ ಇತ್ತು ಮೊತ್ತ
  • ವಿತ್ತೀಯ ಕೊರತೆ ಜಿಡಿಪಿಯ ಶೇ. 8.4ರಷ್ಟು ಇತ್ತು. ಅಂದರೆ ಸರ್ಕಾರ ಆಡಳಿತ ನಿರ್ವಹಣೆಗೆ ಹೆಚ್ಚು ಸಾಲ ಮಾಡುವುದು ಅನಿವಾರ್ಯವಾಗಿತ್ತು.
  • ಹಣದುಬ್ಬರ ಬರೋಬ್ಬರಿ ಶೇ. 16.7ಕ್ಕೆ ಏರಿ ಹೋಗಿತ್ತು.
  • ಆ ವರ್ಷ ಇರಾಕ್ ದೇಶ ತನ್ನ ನೆರೆಯ ಕುವೇತ್ ಮೇಲೆ ದಾಳಿ ಮಾಡಿದ ಪರಿಣಾಮ ತೈಲ ಬೆಲೆ ಬಹಳ ಹೆಚ್ಚಾಗಿತ್ತು.

ಇದನ್ನೂ ಓದಿ: ಪಕ್ಷದ ವೈಫಲ್ಯಗಳಿಗೆ ಕಾಂಗ್ರೆಸ್ ನರಸಿಂಹರಾವ್ ಅವರನ್ನು ಬಲಿಪಶುವಾಗಿಸಿದೆ: ಪಿವಿ ನರಸಿಂಹ ರಾವ್ ಮೊಮ್ಮಗ ವಾಗ್ದಾಳಿ

ಪಿ.ವಿ. ನರಸಿಂಹರಾವ್ ಸರ್ಕಾರ ತಂದ ಸುಧಾರಣೆಗಳು…

ಪಿ.ವಿ. ನರಸಿಂಹ ರಾವ್ ಪ್ರಧಾನಿಯಾದಾಗ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಆರ್ಥಿಕ ತಜ್ಞರಾಗಿದ್ದ ಸಿಂಗ್ ಉದಾರ ಆರ್ಥಿಕ ನೀತಿ ಜಾರಿಗೆ ತಂದರು. ಸಿಂಗ್ ಅವರಿಗೆ ಪ್ರಧಾನಿ ರಾವ್ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಎಲ್​ಪಿಜಿ ಮಾಡಲ್​ನಲ್ಲಿ, ಅಂದರೆ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಈ ಮೂರು ಅಂಶಗಳ ಆಧಾರದ ಮೇಲೆ ಭಾರತದ ಆರ್ಥಿಕತೆಯನ್ನು ರಾವ್ ಸರ್ಕಾರ ಮುಕ್ತಗೊಳಿಸಿತು.

ಉದಾರೀಕರಣ ನೀತಿ

ಉದ್ಯಮ ವಲಯಕ್ಕೆ ತಲೆನೋವಾಗಿದ್ದ ಲೈಸೆನ್ಸ್ ರಾಜ್ ಅನ್ನು ರದ್ದುಗೊಳಿಸಲಾಯಿತು. ರಾಸಾಯನಿಕ ಇತ್ಯಾದಿ ಹಾನಿಕಾರಕ ಎನಿಸುವ ಉದ್ಯಮಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಉದ್ದಿಮೆಯನ್ನೂ ಯಾವ ಲೈಸೆನ್ಸ್ ಇಲ್ಲದೆಯೇ ಸ್ಥಾಪಿಸುವ ಅವಕಾಶ ಒದಗಿಸಲಾಯಿತು.

ಖಾಸಗಿ ಬ್ಯಾಂಕುಗಳು ತಾವೇ ಸ್ವಂತವಾಗಿ ಬಡ್ಡಿದರ ನಿಗದಿ ಮಾಡುವ ಸ್ವಾತಂತ್ರ್ಯ ಪಡೆದವು.

ಖಾಸಗೀಕರಣ ನೀತಿ

ಇದರಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಸುಧಾರಣೆಗಳನ್ನು ತರಲಾಯಿತು. ಸಾರ್ವಜನಿಕ ವಲಯದ ಉದ್ದಿಮೆಗಳ ಷೇರುಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಲು ಅನುಮತಿಸಲಾಯಿತು.

ಜಾಗತೀಕರಣ ನೀತಿ

ಆಮದು ಸುಂಕ ದರಗಳನ್ನು ಇಳಿಸಲಾಯಿತು. ಆಮದು ನಿರ್ಬಂಧ ಪಟ್ಟಿಯಿಂದ ಎಲ್ಲಾ ಸರಕುಗಳನ್ನು ಮುಕ್ತಗೊಳಿಸಲಾಯಿತು. ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿದೇಶೀ ಹೂಡಿಕೆಗೆ ಆರ್ಥಿಕತೆಯನ್ನು ತೆರೆಯಲಾಯಿತು.

ಇದನ್ನೂ ಓದಿ: ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್, ವಿಜ್ಞಾನಿ ಎಂಎಸ್ ಸ್ವಾಮಿನಾಥನ್​​ಗೆ ಭಾರತ ರತ್ನ

ಇವಷ್ಟೇ ಅಲ್ಲದೇ ಇನ್ನೂ ಕೆಲ ಮಹತ್ವದ ಸುಧಾರಣಾ ಕ್ರಮಗಳ ಮೂಲಕ ಆರ್ಥಿಕತೆಗೆ ಒಂದು ದೊಡ್ಡ ಶಕ್ತಿ ಹರಿದುಬರಲು ಅವಕಾಶ ಕೊಡಲಾಯಿತು. ಭಾರತದ ಐಟಿ ಕ್ಷೇತ್ರ ವಿಪುಲವಾಗಿ ಬೆಳೆಯಲು ಸಾಧ್ಯವಾಯಿತು. ಭಾರತದತ್ತ ಬಂಡವಾಳ ಹರಿದುಬಂದಿತು.

ಬಹುಭಾಷಾ ಪಂಡಿತರಾಗಿದ್ದ ಪಿ.ವಿ. ನರಸಿಂಹರಾವ್ ಮತ್ತು ಆಗಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರಿಗೆ ಇದರ ಕ್ರೆಡಿಟ್ ಸಲ್ಲುತ್ತದೆ. ಇವೇ ಉದಾರ ಆರ್ಥಿಕ ನೀತಿಯನ್ನು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಕೂಡ ಮುಂದುವರಿಸಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ