ಮೋದಿ 3.0 ಸರ್ಕಾರದ ಅವಧಿಯಲ್ಲಿ ಮುಂದುವರಿದ ದೇಶವನ್ನಾಗಿ ಮಾಡುವಂತಹ ಸುಧಾರಣೆಗಳನ್ನು ನಿರೀಕ್ಷಿಸಿ: ನಿರ್ಮಲಾ ಸೀತಾರಾಮನ್

Economic Reforms in Modi 3.0 Govt: ಮೋದಿ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಮುಂದಿನ ತಲೆಮಾರಿನ ಸುಧಾರಣೆಗಳನ್ನು ತರಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2047ರೊಳಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡಲು ಬೇಕಾದ ಅಗತ್ಯ ಸುಧಾರಣೆಗಳನ್ನು ತರುವ ಸುಳಿವನ್ನು ಹಣಕಾಸು ಸಚಿವೆ ನೀಡಿದ್ದಾರೆ. ಎಫ್​ಐಸಿಸಿಐ ಆಯೋಜಿಸಿದ ವಿಕಸಿತ ಭಾರತ 2047 ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮೋದಿ 3.0 ಸರ್ಕಾರದ ಅವಧಿಯಲ್ಲಿ ಮುಂದುವರಿದ ದೇಶವನ್ನಾಗಿ ಮಾಡುವಂತಹ ಸುಧಾರಣೆಗಳನ್ನು ನಿರೀಕ್ಷಿಸಿ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

Updated on: Feb 28, 2024 | 5:59 PM

ನವದೆಹಲಿ, ಫೆಬ್ರುವರಿ 28: ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳನ್ನು (reforms) ನಿರೀಕ್ಷಿಸಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಭಾರತೀಯ ಉದ್ಯಮ ಮತ್ತು ವಾಣಿಜ್ಯ ಮಂಡಳಿ ಮಹಾ ಒಕ್ಕೂಟ (ಎಫ್​ಐಸಿಸಿಐ) ಆಯೋಜಿಸಿದ ವಿಕಸಿತ ಭಾರತ 2047 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವೆ, ಭಾರತ ಮುಂದುವರಿದ ದೇಶವಾಗಲು ಬಹಳ ಅಗತ್ಯ ಇರುವಂತಹ ಭೂಮಿ, ಬಂಡವಾಳ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೊಡ್ಡ ಸುಧಾರಣೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

‘ಮೋದಿ ಸರ್ಕಾರಕ್ಕೆ ಮೂರನೇ ಅವಧಿ ಅಧಿಕಾರ ಸಿಕ್ಕರೆ ಮುಂದಿನ ತಲೆಮಾರಿನ ಸುಧಾರಣೆಗಳನ್ನು ಜಾರಿಗೆ ತರುವುದು ಆದ್ಯತೆ ಆಗಿರುತ್ತದೆ. ಉತ್ಪಾದನೆಗೆ ಪೂರಕವಾಗುವ ಎಲ್ಲಾ ಅಂಶಗಳಲ್ಲೂ ಸುಧಾರಣೆಯ ಪ್ರಭಾವ ಇರುತ್ತದೆ,’ ಎಂದು ಹೇಳಿದ್ದಾರೆ.

ಭೂ ಕಾಯ್ದೆ, ಕಾರ್ಮಿಕ ಕಾಯ್ದೆ, ಬಂಡವಾಳ ಕಾಯ್ದೆಗಳಲ್ಲಿ ಸುಧಾರಣೆಗಳನ್ನು ತರಲಾಗುವ ಸುಳಿವು ನೀಡಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ, ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಸುಧಾರಣೆ ಮಾಡಲಾಗುವುದನ್ನೂ ತಿಳಿಸಿದ್ದಾರೆ. ಇದರ ಜೊತೆಗೆ ಕಳೆದ 10 ವರ್ಷಗಳಿಂದ ಕ್ಷೇತ್ರ ನಿರ್ದಿಷ್ಟ ಸುಧಾರಣೆಗಳು ಮತ್ತು ವ್ಯವಸ್ಥೆಯ ಸುಧಾರಣೆಗಳು ಮೂರನೇ ಅವಧಿಯಲ್ಲೂ ಮುಂದುವರಿಯಲಿವೆ ಎಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಅತಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದೆ; ಜಾಗತಿಕ ಸರಾಸರಿ ಹೆಚ್ಚಳಕ್ಕಿಂತ ಭಾರತೀಯರು ಬಹಳ ಮುಂದು

ಎನ್​ಡಿಎ ಮೈತ್ರಿಕೂಟ ತನ್ನ ಆಡಳಿತದಲ್ಲಿ ಆಗಿರುವ ಆರ್ಥಿಕ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. 2047ರಲ್ಲಿ ಮುಂದುವರಿದ ದೇಶ ಅಥವಾ ವಿಕಸಿತ ಭಾರತ ಎಂಬುದನ್ನು ಅಜೆಂಡಾ ಆಗಿ ಇಟ್ಟುಕೊಳ್ಳಲಾಗಿದೆ. ಕಳೆದ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪಿಎಂ ನರೇಂದ್ರ ಮೋದಿ 2047ರ ಗುರಿಯನ್ನು ಮುಂದಿಟ್ಟಿದ್ದರು. ಅಲ್ಲಿಂದ ಎನ್​ಡಿಎ ನಾಯಕರಿಗೆ ವಿಕಸಿತ ಭಾರತವೇ ಬಜಿಂಗ್ ವರ್ಡ್ ಆಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದ್ದರೂ ಭಾರತದ ಜಿಡಿಪಿ ಉತ್ತಮ ವೇಗದಲ್ಲಿ ಬೆಳೆಯುತ್ತಿದೆ. ಈ ಅಂಶವನ್ನು ಮುಂದಿಟ್ಟುಕೊಂಡು ಸರ್ಕಾರ ಕಳೆದ 10 ವರ್ಷಗಳಲ್ಲಿ ತಾನು ಕೈಗೊಂಡಿರುವ ಸುಧಾರಣಾ ಕ್ರಮಗಳ ಫಲಶ್ರುತಿ ಎಂದು ಬಿಂಬಿಸುತ್ತಿದೆ.

ಇದನ್ನೂ ಓದಿ: 2100ರ ಕೌತುಕ; ಜಗತ್ತಿನ ಪ್ರಧಾನ ದೇಶಗಳಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ; ವಿಶ್ವದೊಡ್ಡಣ್ಣನಾಗಲು ಚೀನಾಗೆ ಭಾರತ ಪೈಪೋಟಿ

ಕಳೆದ ಕೆಲ ವರ್ಷಗಳಲ್ಲಿ ಷೇರು ಮಾರುಕಟ್ಟೆ ಅದ್ವಿತೀಯವಾಗಿ ಬೆಳೆದಿದೆ. ಉತ್ಪಾದನಾ ವಲಯ ಗರಿಗೆದರಿದೆ. ಮೇಕ್ ಇನ್ ಇಂಡಿಯಾದ ಆಶಯದಲ್ಲಿ ಸಾಕಷ್ಟು ಉತ್ಪಾದನೆಗಳಾಗುತ್ತಿವೆ. ಪಿಎಲ್​ಐ ಯೋಜನೆ ಅಡಿಯಲ್ಲಿ ಹಲವಾರು ಕ್ಷೆತ್ರಗಳಲ್ಲಿ ಉತ್ಪಾದನೆಗೆ ಪುಷ್ಟಿ ಕೊಡಲಾಗುತ್ತಿದೆ. ಇದರ ಪರಿಣಾಮವು ಮುಂದಿನ ಕೆಲ ವರ್ಷಗಳಲ್ಲಿ ಕಾಣಸಿಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us