ಡಿಸೆಂಬರ್ 21ಕ್ಕೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ 55ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯುವ ಸಾಧ್ಯತೆ

GST council meeting: 55ನೇ ಜಿಎಸ್​ಟಿ ಕೌನ್ಸಿಲ್ ಸಭೆ ಡಿಸೆಂಬರ್ 21ಕ್ಕೆ ನಡೆಯುವ ಸಾಧ್ಯತೆ ಇದೆ. ಮೂಲತಃ ಈ ಸಭೆ ನವೆಂಬರ್ ತಿಂಗಳಲ್ಲಿ ನಡೆಯಬೇಕಿತ್ತು. ವಿಧಾನಸಭಾ ಚುನಾವಣೆ, ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಮುಂದೂಡುವುದು ಅನಿವಾರ್ಯವಾಗಿದೆ. ಫೆ. 1ರಂದು ಮಂಡನೆಯಾಗುವ ಬಜೆಟ್​​ಗೆ ಸಿದ್ಧರಾಗಲು ಪೂರಕವಾಗಿ ಈ ಸಭೆ ನಡೆಯುತ್ತಿದೆ.

ಡಿಸೆಂಬರ್ 21ಕ್ಕೆ ರಾಜಸ್ಥಾನದ ಜೈಸಲ್ಮೇರ್​ನಲ್ಲಿ 55ನೇ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯುವ ಸಾಧ್ಯತೆ
ನಿರ್ಮಲಾ ಸೀತಾರಾಮನ್

Updated on: Nov 15, 2024 | 4:50 PM

ನವದೆಹಲಿ, ನವೆಂಬರ್ 15: ಬಹುನಿರೀಕ್ಷಿತವಾಗಿರುವ 55ನೇ ಜಿಎಸ್​ಟಿ ಮಂಡಳಿ ಸಭೆ ಈ ತಿಂಗಳು ನಡೆಯುವುದಿಲ್ಲ. ಮುಂದಿನ ತಿಂಗಳು ರಾಜಸ್ಥಾನದ ಜೈಸಲ್ಮೇರ್​ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಇವುಗಳ ಪ್ರಕಾರ ಡಿಸೆಂಬರ್ 21ರಂದು ಸಭೆ ನಡೆಯಬಹುದು. ನವೆಂಬರ್​ನಲ್ಲಿ ಸಭೆ ನಡೆಯಬೇಕಿತ್ತಾದರೂ ಮಹಾರಾಷ್ಟ್ರ ಮತ್ತು ಜಾರ್ಖಂಡ್​ನಲ್ಲಿ ವಿಧಾನಸಭಾ ಚುನಾವಣೆಗಳು ಇರುವುದರಿಂದ ಹಾಗೂ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನವೂ ನಡೆಯುವುದರಿಂದ ಸಭೆಯನ್ನು ಮುಂದೂಡಲಾಗಿರುವುದು ತಿಳಿದುಬಂದಿದೆ.

ಡಿಸೆಂಬರ್ 21ರಂದು ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಕೇಂದ್ರ ಬಜೆಟ್ ತಯಾರಿ ನಡೆಯುತ್ತಿರುವುದರಿಂದ ರಾಜ್ಯಗಳ ಅಭಿಪ್ರಾಯಗಳು, ಶಿಫಾರಸುಗಳನ್ನು ಪಡೆಯುವುದು ಜಿಎಸ್​ಟಿ ಕೌನ್ಸಿಲ್ ಸಭೆಯ ಪ್ರಮುಖ ಅಜೆಂಡಾ ಆಗಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್

ಯಾವ್ಯಾವ ಸರಕುಗಳಿಗೆ ಜಿಎಸ್​ಟಿ ದರಗಳನ್ನು ಬದಲಾಯಿಸಬಹುದು ಎನ್ನುವ ಸಲಹೆಗಳನ್ನು ಈ ಸಭೆಯಲ್ಲಿ ಕೇಳಲಾಗುವುದು. ಬಹಳ ಅವಶ್ಯಕ ವಸ್ತುಗಳ ಜಿಎಸ್​ಟಿ ದರ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡುವ ಕಡೆಗೆ ಆದ್ಯತೆ ಕೊಡಲಾಗುತ್ತದೆ. ಹಾಗೆಯೇ, ಲಕ್ಷುರಿ ಎನಿಸುವ ವಸ್ತುಗಳಿಗೆ ತೆರಿಗೆ ದರ ಹೆಚ್ಚಿಸಲಾಗಬಹುದು. ಈ ವಿಚಾರದಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಶಿಫಾರಸುಗಳನ್ನು ಆಲಿಸಿ ಅವುಗಳ ಆಧಾರದ ಮೇಲೆ ಜಿಎಸ್​ಟಿ ದರ ಪರಿಷ್ಕರಣೆ ನಡೆಸಲಾಗುವುದು.

ಸದ್ಯ ಜಿಎಸ್​ಟಿ ವ್ಯವಸ್ಥೆಯಲ್ಲಿ ನಾಲ್ಕು ಸ್ತರದ ತೆರಿಗೆ ದರಗಳಿವೆ. ಶೇ. 5, ಶೇ. 12, ಶೇ. 18 ಮತ್ತು ಶೇ 28ರ ಸ್ಲ್ಯಾಬ್​ಗಳಿವೆ. ತೀರಾ ಅಗತ್ಯ ಇರುವ ವಸ್ತುಗಳು ಶೇ. 5ರ ಟ್ಯಾಕ್ಸ್ ಸ್ಲ್ಯಾಬ್​ಗೆ ಬರುತ್ತವೆ. ಲಕ್ಷುರಿ ಎನಿಸುವ ವಸ್ತುಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸುವ ಪರಿಪಾಟ ಇದೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸರ್ಕಾರಿ ಸಂಸ್ಥೆಗಳ ಮಹತ್ವದ ಪಾತ್ರ ಎತ್ತಿತೋರಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ

ಹಾಗೆಯೇ 55ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್​ಗೆ ಜಿಎಸ್​ಟಿ ಇಳಿಸುವ ಅಥವಾ ತೆಗೆದುಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಈ ಬಗ್ಗೆ ಸಲಹೆ ನೀಡಲು ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ಗ್ರೂಪ್ ಆಫ್ ಮಿನಿಸ್ಟರ್ಸ್ ಅನ್ನು ರಚಿಸಿತ್ತು. ಬಿಹಾರದ ಹಣಕಾಸು ಸಚಿವರ ನೇತೃತ್ವದ ಈ ಸಚಿವರ ಗುಂಪಿನಲ್ಲಿ ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಮೊದಲಾದವರು ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us