ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಊರಿನ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ

Gujarati man pays off entire debt of his village: ಅಮ್ಮನ ಪುಣ್ಯತಿಥಿಯಂದು ಮಗ ತನ್ನ ಊರಿನ ಎಲ್ಲಾ ರೈತರ ಬ್ಯಾಂಕ್ ಸಾಲವನ್ನು ಪೂರ್ಣವಾಗಿ ತೀರಿಸಿರುವ ಘಟನೆ ನಡೆದಿದೆ. ಗುಜರಾತ್​ನ ಅಮ್ರೇಲಿ ಜಿಲ್ಲೆಯ ಸವರಕುಂಡ್ಲ ತಾಲೂಕಿನ ಜೀರಾ ಗ್ರಾಮದ ಬಾಬುಭಾಯ್ ಜೀರಾವಾಲ ಅವರೇ ಈ ಉದಾರ ಹೃದಯದ ವ್ಯಕ್ತಿ. ಯಾರೋ ಮೋಸದಿಂದ ಪಡೆದ ಸಾಲವು ಜೀರಾ ಗ್ರಾಮಸ್ಥರ ಮೈಮೇಲೆ ಬಂದಿತ್ತು. 30 ವರ್ಷದಿಂದ ಒದ್ದಾಡುತ್ತಿದ್ದ ಈ ರೈತರು ಈಗ ನಿರಾಳರಾಗಿದ್ದಾರೆ.

ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಊರಿನ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ
ಬಾಬುಭಾಯ್ ಜೀರಾವಾಲ

Updated on: Nov 05, 2025 | 2:12 PM

ನವದೆಹಲಿ, ನವೆಂಬರ್ 5: ಹಣದಲ್ಲಿ ಶ್ರೀಮಂತರಾದವರು ಮನಸ್ಸಿನಲ್ಲಿ ಶ್ರೀಮಂತರಾಗಬೇಕೆಂದಿಲ್ಲ. ಎರಡರಲ್ಲೂ ಶ್ರೀಮಂತಿಕೆ ಹೊಂದಿರುವವರು ಬಹಳ ಅಪರೂಪ. ಇಂತಹ ಅಪರೂಪರಲ್ಲಿ ಗುಜರಾತ್​ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ (Babubhai Jirawala) ಒಬ್ಬರು. ಸ್ವರ್ಗಸ್ಥರಾದ ತನ್ನ ತಾಯಿಯನ್ನು ಖುಷಿಪಡಿಸಲು ಇವರು ತಮ್ಮ ಊರಿನ ಎಲ್ಲಾ ಜನರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ. ಈ ಮೂಲಕ 30 ವರ್ಷಗಳಿಂದ ಬ್ಯಾಂಕಿಗೆ ಊರಿನ ಜನರು ಅಡಮಾನವಾಗಿ ಇಟ್ಟಿದ್ದ ಜಮೀನು ಪತ್ರವನ್ನು ಅವರಿಗೆ ಮರಳಿ ಸಿಗುವಂತೆ ಮಾಡಿದ್ದಾರೆ.

ಅಮರೇಲಿ ಜಿಲ್ಲೆಯ ಸವರಕುಂಡ್ಲ ತಾಲೂಕಿನ ಜೀರಾ ಗ್ರಾಮದ ಬಾಬುಭಾಯ್ ಜೀರಾವಾಲ ಅವರು ಒಟ್ಟು 290 ರೈತರನ್ನು ಸಾಲಮುಕ್ತರನ್ನಾಗಿಸಿದ್ದಾರೆ. ಇದಕ್ಕಾಗಿ ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್​ಗೆ 90 ಲಕ್ಷ ರೂ ಹಣವನ್ನು ಕಟ್ಟಿದ್ದಾರೆ. 30 ವರ್ಷಗಳಿಂದ ಸಾಲದ ಬವಣೆಯಲ್ಲಿದ್ದ ರೈತರು ಈಗ ನಿರಾಳಗೊಂಡಿದ್ದಾರೆ.

ಇದನ್ನೂ ಓದಿ: ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಹಣದ ಹೊಳೆ; ಇವರಿಗೆ ಎಷ್ಟು ಟ್ಯಾಕ್ಸ್ ಹೊರೆ ಬೀಳುತ್ತೆ ಗೊತ್ತಾ?

ತಮ್ಮದಲ್ಲದ ಸಾಲಕ್ಕಿ ಸಿಲುಕಿದ್ದ ರೈತರು…

ತೊಂಬತ್ತರ ದಶಕದಲ್ಲಿ ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್​ನ ಅಂದಿನ ಸಮಿತಿ ಅಧಿಕಾರಿಗಳು ರೈತರ ಹೆಸರಿನಲ್ಲಿ ಮೋಸದಿಂದ ಸಾಲ ಪಡೆದುಕೊಂಡಿದ್ದರು. ತಮ್ಮದಲ್ಲದ ಸಾಲದ ಹೊರೆ ತಮ್ಮ ಮೇಲಿದ್ದುದು ರೈತರಿಗೆ ಹತಾಶೆ ಮೂಡಿಸಿತ್ತು. ಬ್ಯಾಂಕ್ ಮತ್ತು ರೈತರ ನಡುವಿನ ಈ ಸಾಲ ವ್ಯಾಜ್ಯ 1995ರಿಂದಲೂ ನಡೆಯುತ್ತಿದೆ. ಇನ್ನೂ ಇತ್ಯರ್ಥವಾಗಿಲ್ಲ. 299 ರೈತರ ಜಮೀನು ಪತ್ರವೂ ಬ್ಯಾಂಕ್ ಸುಪರ್ದಿಯಲ್ಲಿತ್ತು.

ತಮ್ಮದಲ್ಲದ ಈ ಸಾಲದಿಂದಾಗಿ ಜೀರಾ ಗ್ರಾಮದ ರೈತರಿಗೆ ಬೇರೆ ಬ್ಯಾಂಕುಗಳಲ್ಲಿ ಸಾಲವೂ ಸಿಗುತ್ತಿರಲಿಲ್ಲ. ಸರ್ಕಾರದಿಂದಲೂ ನೆರವು ಸಿಗುತ್ತಿರಲಿಲ್ಲ. ಅಷ್ಟೇ ಅಲ್ಲ, ಇದೇ ಸಾಲದ ಕಾರಣದಿಂದಾಗಿ ಜಮೀನು ಹಂಚಿಕೆಯೂ ಸಾಧ್ಯವಾಗುತ್ತಿರಲಿಲ್ಲ.

ಸಾಲ ತೀರಿಸುವುದು ಬಾಬುಭಾಯ್ ಜೀರಾವಾಲರ ಅಮ್ಮನ ಆಸೆಯಾಗಿತ್ತು…

ತಮ್ಮ ಊರಿನ ಜನರು ಸಾಲದ ಕಾರಣದಿಂದ ಕಷ್ಟಪಡುವುದನ್ನು ಕಂಡು ಬಾಬುಭಾಯ್ ಜೀರಾವಾಲ ಅವರ ತಾಯಿ ಸದಾ ಕೊರಗುತ್ತಿದ್ದರಂತೆ. ತಮ್ಮ ಬಳಿ ಇರುವ ಒಡವೆಗಳನ್ನು ಮಾರಿಯಾದರೂ ಊರಿನವರ ಸಾಲ ತೀರಿಸಬೇಕೆಂಬುದು ಅವರ ಆಸೆಯಾಗಿತ್ತು. ಇದು ಸಾಧ್ಯವಾಗುವಷ್ಟರಲ್ಲಿ ಅವರು ಸ್ವರ್ಗಸ್ಥರಾಗಿ ಹೋಗಿದ್ದರು.

ಇದನ್ನೂ ಓದಿ: ನೋಡಲು 1 ಲೀಟರ್ ಪ್ಯಾಕ್, ತೂಕ ಬೇರೆ ಬೇರೆ; ಗ್ರಾಹಕರನ್ನು ಯಾಮಾರಿಸುವ ಅಡುಗೆ ಎಣ್ಣೆ ಕಂಪನಿಗಳು; ಇದಕ್ಕೆ ಕಡಿವಾಣ ಹೇಗೆ?

ಇದೀಗ ಬಾಬುಭಾಯ್ ಜೀರಾವಾಲ ಅವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ಅವರ ಪುಣ್ಯತಿಥಿಯಂದೇ ಊರಿನವರ ಆ ಸಾಲವನ್ನು ಒಮ್ಮೆಗೇ ತೀರಿಸಿದ್ದಾರೆ. ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್​ನಲ್ಲಿ ಜೀರಾ ಗ್ರಾಮದ 299 ರೈತರ ಹೆಸರಿನಲ್ಲಿ ಒಟ್ಟು 89,89,209 ರೂ ಸಾಲ (89.89 ಲಕ್ಷ ರೂ) ಇತ್ತು. ಅಷ್ಟೂ ಸಾಲವನ್ನು ಬಾಬುಭಾಯ್ ತೀರಿಸಿದ್ದಾರೆ. ಎಲ್ಲಾ ರೈತರಿಗೆ ಬ್ಯಾಂಕ್​ನಿಂದ ಋಣಮುಕ್ತ ಪ್ರಮಾಣಪತ್ರ ಕೊಡಿಸಿದ್ದಾರೆ. ಈ ಮೂಲಕ 299 ರೈತರು ಹಾಗೂ ಅವರ ಕುಟುಂಬಸ್ಥರ ಮೊಗದಲ್ಲಿ ಮಂದಹಾಸ ತಂದಿದ್ದಾರೆ. ಆ ಮೂಲಕ ತಮ್ಮ ಸ್ವರ್ಗಸ್ಥ ತಾಯಿಯ ಆತ್ಮಕ್ಕೆ ಶಾಂತಿ ಕೂಡ ಕೊಟ್ಟಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ